ತಾಳಿ ಹಾಕಿದ ಹೆಣ್ಣುಮಕ್ಕಳ ಮಾನ ಕಳೆದಿದ್ದು ಯಾರು ಮೋದಿಯವರೇ?: ಹಾಸನ ಪೆನ್ ಡ್ರೈವ್ ಹಗರಣ ಕುರಿತು ಕಾಂಗ್ರೆಸ್ ಪ್ರಶ್ನೆ

Most read

ಬೆಂಗಳೂರು: ಹಾಸನದ ಪೆನ್ ಡ್ರೈವ್ ಲೈಂಗಿಕ ಹಗರಣದ ಕುರಿತು ಕೊನೆಗೂ ಮೌನ ಮುರಿದಿರುವ ಕಾಂಗ್ರೆಸ್ ಪಕ್ಷ ಗೌರವದಿಂದ ಮಂಗಳಸೂತ್ರ ತೊಟ್ಟಿರುವ ಹೆಣ್ಣು ಮಕ್ಕಳ ಮಾನ ಮರ್ಯಾದೆ ಹರಾಜು ಮಾಡಿದ್ದು ಯಾರು ಎಂದು ಕಣ್ಬಿಟ್ಟು ನೋಡಿ ಮೋದಿಯವರೇ… ಹಾಸನ ಮೂಲದ ನಿಮ್ಮ NDA ಕೂಟದ ಸಂಸದನಲ್ಲವೇ ಎಂದು ಪ್ರಶ್ನಿಸಿದೆ.

ಹಾಸನದಲ್ಲಿ ರಾಜಕೀಯ ನಾಯಕನೊಬ್ಬನು ನೂರಾರು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಷ್ಟೇ ಅಲ್ಲದೆ, ಆ ಲೈಂಗಿಕ ಚಟುವಟಿಕೆಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಈ ಎಲ್ಲ ವಿಡಿಯೋಗಳು ಹೊರಗೆ ಬಂದಿರುವ ಕುರಿತು ಏಪ್ರಿಲ್ 22 ರಂದೇ ಕನ್ನಡ ಪ್ಲಾನೆಟ್ https://kannadaplanet.com/is-there-a-pen-drive-of-obscene-videos-lying-around-in-hassan/ ಮೊಟ್ಟಮೊದಲ ಬಾರಿಗೆ ಬಹಿರಂಗಪಡಿಸಿತ್ತಲ್ಲದೆ, ಈ ಲೈಂಗಿಕ ಹಗರಣದ ಕುರಿತು ವಿವರವಾಗಿ ವರದಿ ಮಾಡಿತ್ತು.

ಈ ಘಟನೆಯ ಕುರಿತು ಈಗ ನಿಧಾನವಾಗಿ ರಾಜಕೀಯ ನಾಯಕರು ಮಾತನಾಡಲು ಆರಂಭಿಸಿದ್ದು, ಕಾಂಗ್ರೆಸ್ ಪಕ್ಷ ಕೂಡ ಮೊದಲ ಬಾರಿ ತನ್ನ ಪ್ರತಿಕ್ರಿಯೆ ನೀಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕೆಪಿಸಿಸಿ ಅಧಿಕೃತ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಲಾಗಿದ್ದು, ಹಾಸನದಲ್ಲಿ ನಡೆದಿರುವ ಘೋರ ದುರಂತ ಮಹಿಳೆಯರ ಮಂಗಳ ಸೂತ್ರದ ಪಾವಿತ್ರ್ಯತೆಗೆ ಕುತ್ತು ತಂದಿದ್ದು ಎಂದು ನಿಮಗೆ ಅನಿಸುವುದಿಲ್ಲವೇ? ಎಂದು ನೇರವಾಗಿ ನರೇಂದ್ರ ಮೋದಿಯವರಿಗೆ ಪ್ರಶ್ನಿಸಿದೆ.

ನಿಮಗೆ ಮಹಿಳೆಯರ ಘನತೆ, ಮಂಗಳಸೂತ್ರದ ಪಾವಿತ್ರ್ಯತೆಯ ಬಗ್ಗೆ ನೈಜ ಕಾಳಜಿ ಇದ್ದಿದ್ದೇ ಆದರೆ ನಿಮ್ಮ ಮೈತ್ರಿಕೂಟದ ಕರ್ಮಕಾಂಡದ ಬಗ್ಗೆ ಕ್ಷಮೆ ಕೇಳಿ ಎಂದು ಕೆಪಿಸಿಸಿ ಆಗ್ರಹಿಸಿದೆ.

ಮತ್ತೊಂದು ಪೋಸ್ಟ್ ನಲ್ಲಿ ʻಕುಮಾರಣ್ಣ, ದಾರಿ ತಪ್ಪಿರೋದು ಯಾರಣ್ಣʼ ಎಂಬ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇತ್ತೀಚಿಗಷ್ಟೆ, ಗ್ಯಾರೆಂಟಿ ಯೋಜನೆಗಳಿಂದ ನಮ್ಮ ಹಳ್ಳಿಗಳ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಷಣವೊಂದರಲ್ಲಿ ಹೇಳಿದ್ದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

More articles

Latest article