ಕಳೆದ 11 ವರ್ಷಗಳಲ್ಲಿ ದೇಶದಲ್ಲಿ  ” ಅಘೋಷಿತ ತುರ್ತು ಪರಿಸ್ಥಿತಿ @11″ ನಿರ್ಮಾಣವಾಗಿದೆ: ಕಾಂಗ್ರೆಸ್‌ ವಾಗ್ದಾಳಿ

Most read

ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿ 50 ವರ್ಷಗಳು ಸಂದಿದ್ದು, ಈ ವಿಷಯ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆಗೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿದೆ. ಪ್ರಧಾನಿ ಮೋದಿ ಸರ್ಕಾರವು ಕಳೆದ ಹನ್ನೊಂದು ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಿರಂತರ ಮತ್ತು ಅಪಾಯಕಾರಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ್ದು, ಕಳೆದ ದಶಕವನ್ನು ”ಅಘೋಷಿತ ತುರ್ತು ಪರಿಸ್ಥಿತಿ@11″ ಎಂದು ಟೀಕಿಸಿದೆ.

ಈ ಸರ್ಕಾರದ ಆಡಳಿತದಲ್ಲಿ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಲಾಗಿದೆ ಮತ್ತು ದ್ವೇಷ ಭಾಷಣಗಳು ವ್ಯಾಪಕವಾಗಿ ಹರಡಿವೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಇಂದು ಆಡಳಿತ ನಡೆಸುತ್ತಿರುವವರು ಪ್ರತಿಭಟನಾ ನಿರತ ರೈತರನ್ನು “ಖಲಿಸ್ತಾನಿಗಳು” ಎಂದು ಜಾತಿ ಜನಗಣತಿಯ ಬೆಂಬಲಿಗರನ್ನು “ನಗರ ನಕ್ಸಲರು” ಎಂದು ಬಿಂಬಿಸಲಾಗುತ್ತಿದೆ. ದ್ವೇಷ ಮತ್ತು ಧರ್ಮಾಂಧತೆಯನ್ನು ಸಕ್ರಿಯವಾಗಿ ಪ್ರಚಾರ ಮಾಡಲಾಗುತ್ತಿದೆ. ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಜರಿದಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹಂತಕರನ್ನು ವೈಭವೀಕರಿಸುವ ವ್ಯಕ್ತಿಗಳನ್ನು ಸಂಭ್ರಮಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಸುರಕ್ಷತೆ ಮತ್ತು ಆಸ್ತಿಗಾಗಿ ಭಯದಲ್ಲಿ ಬದುಕುತ್ತಿವೆ. ಸಮಾಜದಲ್ಲಿ ನಿರ್ಗತಿಕ ಅಂಚಿನಲ್ಲಿರುವ ಗುಂಪುಗಳು, ವಿಶೇಷವಾಗಿ ದಲಿತರನ್ನು ಹೀನಾಯವಾಗಿ ಕಾಣಲಾಗುತ್ತಿದೆ. ದ್ವೇಷಪೂರಿತ ಭಾಷಣ ಮಾಡುವ ಸಚಿವರಿಗೆ ಬಡ್ತಿ ನೀಡಲಾಗುತ್ತಿದೆ ಎಂದು ಜೈರಾಂ ರಮೇಶ್ ಟೀಕಿಸಿದ್ದಾರೆ.

ಕಳೆದ ಹನ್ನೊಂದು ವರ್ಷ ಮೂವತ್ತು ದಿನಗಳಲ್ಲಿ, ಭಾರತೀಯ ಪ್ರಜಾಪ್ರಭುತ್ವವು ವ್ಯವಸ್ಥಿತ ಮತ್ತು ಅಪಾಯಕಾರಿ ಐದು ಪಟ್ಟು ದಾಳಿಗೆ ಒಳಗಾಗಿದೆ. ಇದನ್ನು ಅಘೋಷಿತ ತುರ್ತು ಪರಿಸ್ಥಿತಿ@11 ಎಂದು ವಿವರಿಸಬಹುದು ಎಂದು ಅವರು ಹೇಳಿದ್ದಾರೆ. ಸಂವಿಧಾನದ ಮೇಲಿನ ದಾಳಿಗಳು, ತೆರಿಗೆ ಭಯೋತ್ಪಾದನೆ ಮತ್ತು ವ್ಯವಹಾರಗಳು ಮತ್ತು ಸಂಸ್ಥೆಗಳ ಮೇಲಿನ ಬೆದರಿಕೆ, ಮಾಧ್ಯಮಗಳ ಮೇಲಿನ ನಿಯಂತ್ರಣ ಮತ್ತು ತನಿಖಾ ಸಂಸ್ಥೆಗಳ ದುರುಪಯೋಗ ನೋಡಿದರೆ ದೇಶದಲ್ಲಿ “ಅಘೋಷಿತ ತುರ್ತು ಪರಿಸ್ಥಿತಿ” ಜಾರಿಯಲ್ಲಿದೆ ಎಂದು ಭಾಸವಾಗುತ್ತದೆ ಎಂದು ಜೈರಾಂ ರಮೇಶ್‌ ಆಪಾದಿಸಿದ್ದಾರೆ.

More articles

Latest article