ಇಸ್ಲಾಮಾಬಾದ್: ಭಾರತ ನಡೆಸಿದ ಆಪರೇಷನ್ ಸಿಂಧೂರದಲ್ಲಿ ತನ್ನ 11 ಸೈನಿಕರು ಮಾತ್ರ ಮೃತಪಟ್ಟಿದ್ದು, ಇತರ 78 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ. ಮೇ 6 ಮತ್ತು 7ರ ರಾತ್ರಿ ಭಾರತ ನಡೆಸಿದ ‘ಅಪ್ರಚೋದಿತ ದಾಳಿಯಲ್ಲಿ‘ 40 ನಾಗರಿಕರು ಬಲಿಯಾಗಿದ್ದು, 121 ಜನರು ಗಾಯಗೊಂಡಿದ್ದಾರೆ ಎಂದು ಪಾಕ್ ಸೇನೆ ಮುಖ್ಯಸ್ಥ ತಿಳಿಸಿದ್ದಾರೆ.
ನಾಲ್ಕು ದಿನ ನಡೆದ ಡ್ರೋಣ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದವು. ತಾಯ್ಕೆಲವನ್ನು ರಕ್ಷಿಸಲು ಹೋರಾಟ ನಡೆಸಿದ ಸಂದರ್ಭ ಪಾಕಿಸ್ತಾನದ ಸಶಸ್ತ್ರ ಪಡೆಗಳ 11 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪಾಕ್ ಹೇಳಿದೆ.
ಮೃತರಲ್ಲಿ ಪಾಕಿಸ್ತಾನ ವಾಯುಪಡೆಯ ಸ್ಮಾಡ್ರನ್ ಲೀಡರ್ ಉಸ್ಮಾನ್ ಯೂಸುಫ್, ಮುಖ್ಯ ತಂತ್ರಜ್ಞ ಔರಂಗಜೇಬ್, ಹಿರಿಯ ತಂತ್ರಜ್ಞರಾದ ನಜೀಬ್, ಮುಬಾಶಿರ್ ಮತ್ತು ಫಾರೂಕ್ ಸೇರಿದ್ದಾರೆ. ಭೂಸೇನೆಯ ಯೋಧರಾದ ಅಬ್ದುಲ್ ರಹ್ಮಾನ್, ದಿಲಾವರ್ ಖಾನ್, ಇಕ್ರಮುಲ್ಲಾ, ವಕಾರ್ ಖಾಲಿದ್, ಮುಹಮ್ಮದ್ ಅದೀಲ್ ಅಕ್ಟರ್ ಮತ್ತು ನಿಸಾರ್ ಅವರು ಬಲಿಯಾಗಿದ್ದಾರೆ ಎಂದು ಪಾಕ್ ಹೇಳಿಕೊಂಡಿದೆ.
ಭಾರತದ ದಾಳಿಗೆ ಪಾಕಿಸ್ತಾನದ ಸಶಸ್ತ್ರ ಪಡೆಗಳು ‘ಬುನ್ಯಾನುಮ್ ಮಕ್ಯೂಸ್‘ ಹೆಸರಿನ ಕಾರ್ಯಾಚರಣೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಿವೆ. ಪಾಕಿಸ್ತಾನದ ಸಾರ್ವಭೌಮತ್ವ ಅಥವಾ ಪ್ರಾದೇಶಿಕ ಸಮಗ್ರತೆಯ ಮೇಲೆ ಮತ್ತೆ ದಾಳಿ ನಡೆಸುವ ಪ್ರಯತ್ನ ಮಾಡಿದರೆ ತಕ್ಕ ತಿರುಗೇಟು ನೀಡುವುದಾಗಿ ಪಾಕ್ ತಿಳಿಸಿದೆ.
ಆದರೆ ಭಾರತ ತಾನು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಪಾಕಿಸ್ತಾನ ಯೋಧರು ಮೃತಪಟ್ಟಿದ್ದಾರೆ ಎಂದು ಹೇಳಿದೆ.