ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಮಹಿಳೆಗೆ 1 ಕೋಟಿ ರೂ. ವಂಚನೆ; ಮುಖ್ಯಪೇದೆ ಅಮಾನತು

Most read

ಮಕ್ಕಳಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಸುಮಾರು 1 ಕೋಟಿ ರೂ. ವಂಚಿಸಿದ್ದ ಪೊಲೀಸ್‌ ಮುಖ್ಯ ಪೇದೆಯೊಬ್ಬರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಪ್ರಶಾಂತ್‌ ಕುಮಾರ್‌ ಎಚ್. ಆರ್.‌ ಎಂಬಾತನೇ ವಂಚಕ ಪೊಲೀಸ್‌ ಹೆಡ್‌ ಕಾನ್‌ ಸ್ಟೇಬಲ್.‌ ನಗರ ಶಶಸ್ತ್ರಪಡೆಯಲ್ಲಿ ಮುಖ್ಯ ಪೇದೆಯಾಗಿರುವ ಈತ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ(ಎಡಿಜಿಪಿ) ಉಮೇಶ್‌ ಕುಮಾರ್‌ ಅವರ ಕಾರು ಚಾಲಕನಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆರೋಪಿ ಪ್ರಶಾಂತ್‌ ಭಾಗ್ಯ ಎಂಬುವರಿಗೆ ನಿಮ್ಮ ಇಬ್ಬರೂ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 60 ಲಕ್ಷ ರೂ. ಮೌಲ್ಯದ 857 ಗ್ರಾಂ ಚಿನ್ನಾಭರಣ ಮತ್ತು 47 ಲಕ್ಷ ರೂ. ವಂಚಿಸಿದ್ದಾನೆ. ಭಾಗ್ಯ ಅವರು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ನಿವಾಸಿಯಾದ ಭಾಗ್ಯ ಅವರು ಪ್ರಶಾಂತ್‌ ಮತ್ತು ಆತನ ಸಹಚರರು 2021ರ ನವಂಬರ್‌ ನಿಂದ ಇದುವರೆಗೂ ಹಂತ ಹಂತವಾಗಿ ಹಣ ಸಂಗ್ರಹಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಶಾಂತ್‌ ಸಹಚರರಾದ ದೀಪಾ ಮತ್ತು ಮಂಜುನಾಥ್‌ ಅವರ ವಿರುದ್ಧವೂ ದೂರು ದಾಖಲಿಸಿದ್ದಾರೆ. ಈತ 30 ಮತ್ತು 36 ವರ್ಷದ ತನ್ನ ಇಬ್ಬರು ಮಕ್ಕಳಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ವರ್ಷದ ಜೂನ್‌ 12ರಂದು ಪ್ರಶಾಂತ್‌ ಕುಮಾರ್‌ ಭಾಗ್ಯ ಅವರ ಮನೆಗೆ ಆಗಮಿಸಿ ನಿಮ್ಮ ಇಬ್ಬರೂ ಮಕ್ಕಳಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ ಎಂದು ನಕಲಿ ಆಯ್ಕೆ ಪಟ್ಟಿಯನ್ನು ತೋರಿಸಿ ಅಂದೂ 5 ಲಕ್ಷ ರೂ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕರ್ನಾಟಕ ಲೋಕಸೇವಾ ಆಯೋಗ ಕಚೇರಿಯಲ್ಲಿ ವಿಚಾರಿಸಿದಾಗ ನಿಮ್ಮ ಮಕ್ಕಳು ಆಯ್ಕೆಯಾಗಿಲ್ಲ ಎಂದು ತಿಳಿಸಿದ್ದಾರೆ. ಆಗ ಕೊಟ್ಟಿರುವ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಪ್ರಶಾಂತ್‌ 58 ಲಕ್ಷ ರೂ.ಗಳ ಚೆಕ್‌ ನೀಡಿದ್ದಾರೆ. ಆದರೆ ಚೆಕ್‌ ಬೌನ್ಸ್‌ ಆಗಿರುತ್ತದೆ. ಮತ್ತೆ ಸಂಪರ್ಕಿಸಿದಾಗ ಪ್ರಶಾಂತ್‌ ಹಣವನ್ನು ಮರಳಿಸುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಶಾಂತ್‌ ಕುಮಾರ್‌ ತಲೆ ಮರೆಸಿಕೊಂಡಿದ್ದು ಆತನನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

More articles

Latest article