ಬೆಂಗಳೂರು : ಸಂಯುಕ್ತ ಕಿಸಾನ್ ಮೋರ್ಚ ಸಂಘಟನೆಯ ರೈತ ಜಾಗೃತಿ ಯಾತ್ರೆಯ ವಿವಿಧ ರಾಜ್ಯಗಳ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ.
ಈ ವೇಳೆ, ಯಾತ್ರೆಯ ಉದ್ದೇಶ ವಿವರಿಸಿ ರಾಜ್ಯ ಸರ್ಕಾರದಿಂದ ಅಧಿವೇಶನದಲ್ಲಿ ನಿರ್ಣಯ ಕೈಗೊಂಡು, ಎಂ ಎಸ್ ಪಿ ಗ್ಯಾರಂಟಿ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ತರುವಂತೆ ಕೋರಲಾಯಿತು. ಭಾರತ ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸುವಂತೆ ಸಂಘಟನೆ ಒತ್ತಾಯಿಸಿದೆ.
ಮನವಿ ಪತ್ರ ಸ್ವೀಕರಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಚಿವ ಸಂಪುಟದ ಸದಸ್ಯರ ಜೊತೆ ಚರ್ಚೆ ಮಾಡಿ ಒಂದು ವಾರದಲ್ಲಿ ತೀರ್ಮಾನ ತಿಳಿಸಲಾಗುವುದು ಎಂದರು.
ಕಳೆದ ವರ್ಷ ದೆಹಲಿ ಗಡಿಯಲ್ಲಿ 133 ದಿನ ಉಪವಾಸ ನಡೆಸಿದ ಎಸ್ ಕೆ ಎಂ (ರಾಜಕೀಯತರ) ರಾಷ್ಟ್ರೀಯ ನೇತಾರ ಜಗಜಿತ್ ಸಿಂಗ್ ಧಲೇವಾಲ ರವರು ವಿವರಿಸಿ ಸರ್ವೋಚ್ಚ ನ್ಯಾಯಾಲಯ ರಚಿಸಿದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ನವಾಬ್ಸಿಂಗ್ ಸಮಿತಿಯು ರೈತ ಪರವಾಗಿ ವರದಿ ನೀಡಿದೆ.
ಕಳೆದ ವರ್ಷ ದೆಹಲಿ ಗಡಿಯಲ್ಲಿ ಚಳುವಳಿ ನಡೆಸಿದಾಗ ಕೇಂದ್ರ ಸರ್ಕಾರ, 5 ಸಭೆಯನ್ನು ನಡೆಸಿದೆ. ಕೇಂದ್ರ ಸಚಿವ ಪಿಯೂಸ್ ಗೋಯಿಲ್, 5 ಕೃಷಿ ಉತ್ಪನ್ನಗಳಿಗೆ ಖಾತರಿ ಕೊಡುತ್ತೇನೆ ಎಂದು ಹೇಳಿದರು ನಾವು ಒಪ್ಪಲಿಲ್ಲ ಎಂದು ತಿಳಿಸಿದರು.
ಎಸ್ ಕೆ ಎಂ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ಮಾತನಾಡಿ, 31 ಜನರ ಸಂಸದೀಯ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದೆ ಎಂಎಸ್ಪಿ ಗ್ಯಾರಂಟಿ ಕಾನೂನು ಅವಶ್ಯಕತೆ ಇದೆ ಎಂದು ವರದಿ ನೀಡಿದೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು. ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಡಾ. ಸ್ವಾಮಿನಾಥನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು ಈ ವರದಿ 2007ರಲ್ಲಿ ಸಲ್ಲಿಸಲಾಗಿತ್ತು. 2014ರಲ್ಲಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರುವ ಭರವಸೆ ನೀಡಿ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರು ನಂತರ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಸರ್ಕಾರವನ್ನು ಎಚ್ಚರಿಸಲು ದೇಶಾದ್ಯಂತ ರೈತ ಜಾಗೃತಿ ಯಾತ್ರೆ ಮಾಡುತ್ತಿದ್ದೇವೆ.
ಹಳ್ಳಿ ಹಳ್ಳಿಗಳಲ್ಲಿ ರೈತರಿಂದ ಸಹಿ ಸಂಗ್ರಹ ಮಾಡಿಸಿ, ಮಾರ್ಚ್ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ರೈತರ ಸಮಾವೇಶ ನಡೆಸಿ ಪ್ರಧಾನಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು
ಕಳೆದ ಐದು ದಿನಗಳಲ್ಲಿ ಆರಂಭವಾದ ರೈತ ಜಾಗೃತಿ ಯಾತ್ರೆ 40 ದಿನಗಳ ಕಾಲ ದೇಶವನ್ನು ಸುತ್ತಿ ರೈತರ ಸಹಿ ಪಡೆದು ಪ್ರಧಾನಮಂತ್ರಿಗೆ, ದೇಶದ ರೈತರ ಸಹಿ ಇರುವ ಪತ್ರ ನೀಡಿ ಒತ್ತಾಯಿಸಲು ದೆಹಲಿಗೆ ಬರುವಂತೆ ರೈತರಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.
ರಾಷ್ಟ್ರೀಯ ರೈತ ಮುಖಂಡರಾದ ಹರಿಯಾಣದ ಅಭಿಮನ್ಯು ಕೋಹರ್ ಮಾತನಾಡಿ, ಭಾರತ ಅಮೆರಿಕ ವ್ಯಾಪಾರ ಒಪ್ಪಂದ ದೇಶದ ರೈತರ ಮರಣ ಶಾಸನವಾಗಿದೆ ತಾವು ಅದನ್ನು ವಿರೋಧಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರುಗಳಾದ ಉತ್ತರ ಪ್ರದೇಶ ನಿತಿನ್ ಬಾಲ್ಯನ, ರಾಜಸ್ಥಾನ್ ಇಂದ್ರಜಿತ್ ಪಲ್ಲಿವಾನ್, ಮಧ್ಯಪ್ರದೇಶದ ಲೀಲಾಧರ್, ರಜಪೂತ್ ಅರುಣ್ ಪಟೇಲ್, ಪಂಜಾಬ್ ಹರ್ಸುಲಿಂದರ್ ಸಿಂಗ್, ಹತ್ತಳ್ಳಿ ದೇವರಾಜ್,ಬಡಗನಪುರ ನಾಗರಾಜ್ ಬಲ್ಲೂರು ರವಿಕುಮಾರ್ ಇನ್ನು ಮುಂತಾದವರು ಇದ್ದರು.

