“ತ್ಯಾಜ್ಯ ನೀರು ತ್ಯಾಜ್ಯವಲ್ಲ, ಅದೊಂದು ಸಂಪನ್ಮೂಲ”: ಅಂತರ್ಜಲ ಬದಲು ಸಂಸ್ಕರಿಸಿದ ನೀರು ಬಳಸಲು ಜಲಮಂಡಳಿ ಅಧ್ಯಕ್ಷರ ಕರೆ

Most read

ಬೆಂಗಳೂರು: ನಗರದ ನೀರಿನ ಭದ್ರತೆಯ ದೃಷ್ಟಿಯಿಂದ ಮಹತ್ವದ ಬದಲಾವಣೆಗೆ ಕರೆ ನೀಡಿದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್, ಬೆಂಗಳೂರು ನಗರವು ತ್ಯಾಜ್ಯ ನೀರನ್ನು (Wastewater) ಕೇವಲ ತ್ಯಾಜ್ಯ ಎಂದು ಪರಿಗಣಿಸದೆ, ಅದನ್ನು ನಗರದ ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆಗೆ ಅಗತ್ಯವಿರುವ ಸಂಪನ್ಮೂಲವನ್ನಾಗಿ ಬಳಸಿಕೊಳ್ಳಬೇಕು ಎಂದು ಪ್ರತಿಪಾದಿಸಿದರು.

ವೆಲ್ ಲ್ಯಾಬ್ಸ್ (WELL Labs) ಮತ್ತು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯ ವ್ಯವಸ್ಥೆಯನ್ನು ಉದಾಹರಿಸಿದರು. “ಪ್ರಕೃತಿಯು ನೀರನ್ನು ಪರಿಣಾಮಕಾರಿಯಾಗಿ ಪರಿಚಲನೆ (Circulate) ಮಾಡುವ ಮೂಲಕ ಜೀವಸಂಕುಲವನ್ನು ಕಾಪಾಡುತ್ತದೆ. ನಾವೂ ಅದೇ ಮಾದರಿಯನ್ನು ಅನುಸರಿಸಬೇಕು. ಕಾವೇರಿ ನೀರು, ಅಂತರ್ಜಲ, ಸಂಸ್ಕರಿಸಿದ ನೀರು ಮತ್ತು ಮಳೆನೀರು—ಈ ನಾಲ್ಕರ ಸಮಗ್ರ ಯೋಜನೆಯು ನಗರದ ಭವಿಷ್ಯಕ್ಕೆ ಅತ್ಯಗತ್ಯ,” ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ‘ಬ್ರಾಂಡ್ ಬೆಂಗಳೂರು’ (Brand Bengaluru) ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದು, ಈ ಅಭಿವೃದ್ಧಿಗೆ ನೀರಿನ ಭದ್ರತೆಯೇ ಬುನಾದಿಯಾಗಿದೆ. ಡಿಸಿಎಂ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಬೆಂಗಳೂರನ್ನು ನೀರಿನ ವಿಷಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಜಲಮಂಡಳಿ ತ್ಯಾಜ್ಯ ನೀರನ್ನು ಸಂಪನ್ಮೂಲವಾಗಿ ಪರಿವರ್ತಿಸುವತ್ತ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುತ್ತಿದೆ ಎಂದರು.

ನೀರಿನ ಲೆಕ್ಕಾಚಾರ:

ನಗರದ ನೀರಿನ ಬಳಕೆಯ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷರು, “ಬೆಂಗಳೂರು ಪ್ರತಿದಿನ 3,200 ದಶಲಕ್ಷ ಲೀಟರ್‌ಗೂ (MLD) ಹೆಚ್ಚು ನೀರನ್ನು ಬಳಸುತ್ತಿದ್ದು, ಸುಮಾರು 2,800 MLD ಯಷ್ಟು ತ್ಯಾಜ್ಯ ನೀರನ್ನು ಉತ್ಪಾದಿಸುತ್ತದೆ. ಪ್ರಸ್ತುತ ಜಲಮಂಡಳಿ 2,348 MLD ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿದ್ದು, ಅದರಲ್ಲಿ 825 MLD ನೀರನ್ನು ಮರುಬಳಕೆ ಮಾಡುತ್ತಿದೆ. ಕೆ.ಸಿ. ವ್ಯಾಲಿ ಮತ್ತು ಚಿಕ್ಕಬಳ್ಳಾಪುರ (ಎಚ್.ಎನ್. ವ್ಯಾಲಿ) ಯೋಜನೆಗಳು ಮರುಬಳಕೆ ನೀರಿನ ಯಶಸ್ಸಿಗೆ ಸಾಕ್ಷಿಯಾಗಿವೆ,” ಎಂದು ತಿಳಿಸಿದರು.

ಅಂತರ್ಜಲ vs ಸಂಸ್ಕರಿಸಿದ ನೀರು:

ಅಂತರ್ಜಲದ ಮೇಲಿನ ಅವಲಂಬನೆ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ವಾದಿಸಿದ ಡಾ. ಮನೋಹರ್, “ಅಂತರ್ಜಲ ತೆಗೆಯುವುದು ದುಬಾರಿ ಮತ್ತು ಅಸ್ಥಿರವಾಗಿದೆ. ಇದಕ್ಕೆ ಹೋಲಿಸಿದರೆ ಸಂಸ್ಕರಿಸಿದ ನೀರು ಸುಲಭವಾಗಿ ಲಭ್ಯವಿದೆ. ಐಟಿ ಪಾರ್ಕ್‌ಗಳು, ಡಾಟಾ ಸೆಂಟರ್‌ಗಳು ಮತ್ತು ನಿರ್ಮಾಣ ವಲಯಗಳು ಅಂತರ್ಜಲವನ್ನು ಅವಲಂಬಿಸುವುದನ್ನು ಬಿಟ್ಟು ಸಂಸ್ಕರಿಸಿದ ನೀರಿಗೆ ಬದಲಾಗಬೇಕು. ನೀತಿ ನಿಯಮಗಳು ಕೂಡ ಈ ಬದಲಾವಣೆಗೆ ಪೂರಕವಾಗಿರಲಿವೆ,” ಎಂದು ಅಭಿಪ್ರಾಯಪಟ್ಟರು.

ಗುಣಮಟ್ಟ ಮತ್ತು ಪ್ರಮಾಣೀಕರಣ:

ಅಪಾರ್ಟ್‌ಮೆಂಟ್ ನಿವಾಸಿಗಳ ನೀರಿನ ಭದ್ರತೆಯಲ್ಲಿ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (BAF) ಪಾತ್ರವನ್ನು ಶ್ಲಾಘಿಸಿದ ಅಧ್ಯಕ್ಷರು, ಗುಣಮಟ್ಟದ ಬಗ್ಗೆ ಒತ್ತು ನೀಡಿದರು.

“ವಿಕೇಂದ್ರೀಕೃತ ನೀರಿನ ಸಂಸ್ಕರಣೆಯು ಕೇವಲ ನಿಯಮ ಪಾಲನೆಗಷ್ಟೇ ಸೀಮಿತವಾಗದೆ, ನಗರ ಮಟ್ಟದ ಸಂಪನ್ಮೂಲವಾಗಿ ಬೆಳೆಯಬೇಕು. ಇದಕ್ಕಾಗಿ, ಸಂಸ್ಕರಣಾ ಘಟಕಗಳ ನಿರ್ವಹಣೆ ಮತ್ತು ಆಪರೇಟರ್‌ಗಳ ಗುಣಮಟ್ಟ ಪ್ರಮಾಣೀಕರಣ (Certification) ಅತ್ಯಗತ್ಯ. ಮಾರುಕಟ್ಟೆಯಲ್ಲಿ ಸಂಸ್ಕರಿಸಿದ ನೀರಿನ ಬಗ್ಗೆ ವಿಶ್ವಾಸ ಮೂಡಿಸಲು ಇದು ಸಹಕಾರಿ,” ಎಂದು ತಿಳಿಸಿದರು.

ನೀರಿನ ಭದ್ರತೆಯ ಸವಾಲುಗಳನ್ನು ಸಹಭಾಗಿತ್ವ ಮತ್ತು ಹೊಸ ಆವಿಷ್ಕಾರಗಳಿಗೆ ಇರುವ ಅವಕಾಶಗಳಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

More articles

Latest article