ಅಯೋಧ್ಯೆ : ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುವ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ ಎಂಬ ಖಚಿತ ಮಾಹಿತಿ ಆಧರಿಸಿ ಸ್ಥಳೀಯ ಆಡಳಿತವು ಅಯೋಧ್ಯೆಯಲ್ಲಿ ನಡೆಯುತ್ತಿದ್ದ ವಾರ್ಷಿಕ ‘ಉರುಸ್’ ಸಮಾರಂಭವನ್ನು ನಿಷೇಧಿಸಿದೆ. ಕಳೆದ ಎರಡು ದಶಕಗಳಿಂದ ನಡೆದುಕೊಂಡು ಬರುತ್ತಿದ್ದ ‘ಉರುಸ್’ ಸಮಾರಂಭ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿತ್ತು.
ವಿಶ್ವ ಹಿಂದೂ ಪರಿಷತ್ (ವಿ ಎಚ್ ಪಿ) ಸದಸ್ಯರಾದ ಲಾಲ್ಜಿ ಶರ್ಮಾ ಮತ್ತು ಸೂರ್ಯಕಾಂತ್ ಪಾಂಡೆ ಅವರು ನೀಡಿದ ದೂರನ್ನು ಆಧರಿಸಿ ಅಯೋಧ್ಯೆಯ ಸ್ಥಳೀಯ ಆಡಳಿತವು ಖಾನ್ ಪುರ ಮಸೋಧಾ ಪ್ರದೇಶದ ದಾದಾ ಮಿಯಾ ಬಜಾರ್ನಲ್ಲಿ ಪ್ರತಿ ವರ್ಷ ನಡೆಯುವ ‘ದಾದಾ ಮಿಯಾ ಉರುಸ್’ ಗೆ ಅನುಮತಿ ನಿರಾಕರಿಸಿದೆ ಎಂದು ತಿಳಿದು ಬಂದಿದೆ.
‘ಉರುಸ್ ದಾದಾ ಮಿಯಾ’ ಹೆಸರಿನಲ್ಲಿ ಉರುಸ್ ಸಮಾವೇಶ ಆಯೋಜಿಸಲು ಆಯೋಜಕರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿದ್ದಾರೆ. ಆದರೆ ‘ಘಾಜಿ ಬಾಬಾ ಉರುಸ್’ ಹೆಸರಿನಲ್ಲಿ ರಶೀದಿಗಳನ್ನು ಮುದ್ರಿಸುವ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವುದು ಕಂಡುಬಂದಿದ್ದರಿಂದ ಉರುಸ್ ಗೆ ಅನುಮತಿಯನ್ನು ರದ್ದುಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅಶುತೋಷ್ ತಿವಾರಿ ತಿಳಿಸಿದ್ದಾರೆ. ಉರುಸ್ ಆಚರಣೆ ಸಂದರ್ಭದಲ್ಲಿ ಆಯೋಜಕರು ಮಾಟಮಂತ್ರ ಮಾಡುವ ಮತ್ತು ಜನರನ್ನು ತಪ್ಪುದಾರಿಗೆ ಎಳೆಯುವವರನ್ನು ಉರುಸ್ ಗೆ ಆಹ್ವಾನಿಸುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.