ಹೈದರಾಬಾದ್: ನಿರುದ್ಯೋಗ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ಹಬ್ಬಿನಗಢದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಚಂದ್ರಶೇಖರ್ ರೆಡ್ಡಿ (44) ಮತ್ತು ಅವರ ಪತ್ನಿ ಕವಿತಾ (35) ಹಾಗೂ ಇವರ ಮಕ್ಕಳಾದ ವಿಶ್ವನ್ ರೆಡ್ಡಿ (11), ಶ್ರೀಷಾ ರೆಡ್ಡಿ (15) ಎಂದು ಗುರುತಿಸಲಾಗಿದೆ.
ಚಂದ್ರಶೇಖರ್ ರೆಡ್ಡಿ ಮತ್ತು ಕವಿತಾ ಮೃತದೇಹಗಳು ಪ್ರತ್ಯೇಕ ಕೋಣೆಗಳಲ್ಲಿ ಪತ್ತೆಯಾದರೆ, ಮಕ್ಕಳ ಮೃತದೇಹಗಳು ಮಲಗುವ ಕೋಣೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ, ನನ್ನ ಜೀವನವನ್ನು ಕೊನೆಗೊಳಿಸುವುದನ್ನು ಬಿಟ್ಟರೆ, ನನಗೆ ಬೇರೆ ಆಯ್ಕೆಗಳೇ ಇರಲಿಲ್ಲ. ವೃತ್ತಿ ಜೀವನದಲ್ಲಿ ಸಾಕಷ್ಟು ಹೋರಾಟ ನಡೆಸಿದ್ದೇನೆ. ಜತೆಗೆ ಸರಿಯಾದ ಉದ್ಯೋಗವೂ ಸಿಗಲಿಲ್ಲ. ಇದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಇದರ ನಡುವೆ ಮಧುಮೇಹ, ನರ ಮತ್ತು ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಆದ್ದರಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ದಯಮಾಡಿ ನನ್ನ ಕ್ಷಮಿಸಿ ಎಂದು ಚಂದ್ರಶೇಖರ್ ರೆಡ್ಡಿ ಅವರು ಬರೆದಿರುವ ಮರಣ ಪತ್ರ ಪೊಲೀಸರಿಗೆ ದೊರೆತಿದೆ.
ಚಂದ್ರಶೇಖರ್ ರೆಡ್ಡಿ ಅವರು ಖಾಸಗಿ ಕಾಲೇಜಿನಲ್ಲಿ ಕಿರಿಯ ಉಪನ್ಯಾಸಕರಾಗಿದ್ದರು. 2023ರಲ್ಲಿ ಅವರು ಕೆಲಸ ಬಿಟ್ಟಿದ್ದರು. ಅಂದಿನಿಂದ ಅವರು ಉದ್ಯೋಗಕ್ಕಾಗಿ ಹಡುಕಾಟ ನಡೆಸುತ್ತಲೇ ಇದ್ದರು. ಈ ನಡುವೆ ಹಣಕಾಸಿನ ಸಮಸ್ಯೆ ಮತ್ತಷ್ಟು ಕಾಡುತ್ತಿತ್ತು. ಈ ಘಟನೆ ಸಂಬಂಧ ತೆಲಂಗಾಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.