ಬೆಂಗಳೂರು: ಹಳಿ ನಿರ್ವಹಣಾ ಕಾಮಗಾರಿ ನಡೆಸಲು ಮಾರ್ಚ್ 9 ರಂದು ಬೆಳಗ್ಗೆ 7ರಿಂದ 10ರವರೆಗೆ ನೇರಳೆ ಮಾರ್ಗದ ಮಾಗಡಿ ರಸ್ತೆ ಮತ್ತು ಎಂಜಿ ರಸ್ತೆ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೊ ಸಂಚಾರ ಸ್ಥಗಿತಗೊಳ್ಳಲಿದೆ.
ಈ ಅವಧಿಯಲ್ಲಿ ಕಬ್ಬನ್ ಪಾರ್ಕ್, ಡಾ. ಬಿ.ಆರ್. ಅಂಬೇಡ್ಕರ್ ನಿಲ್ದಾಣ, ವಿಧಾನಸೌಧ, ಸರ್.ಎಂ ವಿಶ್ವೇಶ್ವರಯ್ಯ ನಿಲ್ದಾಣ, ಸೆಂಟ್ರಲ್ ಕಾಲೇಜು, ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ (ನೇರಳೆ ಮಾರ್ಗ) ಮತ್ತು ಕ್ರಾಂತಿವೀರ ಸಂಗೋಳಿ ರಾಯಣ್ಣ ರೈಲು ನಿಲ್ದಾಣಗಳನ್ನು ಮುಚ್ಚಲಾಗಿರುತ್ತದೆ.
ಅಂದು ಬೆಳಿಗ್ಗೆ 10 ರವರೆಗೆ ಕ್ಯೂಆರ್ ಟಿಕೆಟ್ಗಳ ಖರೀದಿಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೇರಳೆ ಮಾರ್ಗದಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ನಲ್ಲಿ ರೈಲು ಲಭ್ಯ ಇಲ್ಲದೇ ಇರುವುದರಿಂದ ನೇರಳೆ ಮಾರ್ಗದಿಂದ ಹಸಿರು ಮಾರ್ಗಕ್ಕೆ ಮತ್ತು ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ಪ್ರಯಾಣಿಸಲು ಸಾರ್ವಜನಿಕರು ಕ್ಯೂಆರ್ ಟಿಕೆಟ್ ಹಾಗೂ ಟೋಕನ್ಗಳನ್ನು ಖರೀದಿಸಬಾರದು ಎಂದು ನಮ್ಮ ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಲ್ಲಘಟ್ಟ-ಮಾಗಡಿ ರಸ್ತೆ ನಡುವೆ ಹಾಗೂ ಎಂಜಿ ರಸ್ತೆ-ವೈಟ್ಫೀಲ್ಡ್ (ಕಾಡುಗೋಡಿ) ನಡುವೆ ಮೆಟ್ರೊ ರೈಲು ಸಂಚಾರ ಎಂದಿನಂತೆ ಬೆಳಿಗ್ಗೆ 7 ರಿಂದ ಇರಲಿದೆ. ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.