ನವದೆಹಲಿ: ಕರ್ನಾಟಕದಲ್ಲಿ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ರಕ್ಷಣೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಣಿರತ್ನಂ ನಿರ್ದೇಶಿಸಿರುವ ಈ ತಮಿಳು ಚಿತ್ರಕ್ಕೆ ಕರ್ನಾಟಕದಲ್ಲಿ ಅಘೋಷಿತ ನಿರ್ಬಂಧ ಹೇಲಾಗಿದೆ. ಆದ್ದರಿಂದ ಈ ಚಿತ್ರ ಪ್ರದರ್ಶನದ ಮೇಲಿನ ನಿಷೇಧವನ್ನು ಪ್ರಶ್ನಿಸಿ ಎಂ. ಮಹೇಶ್ ರೆಡ್ಡಿ ಎಂಬುವರು ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರ ದ್ವಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು. ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಪೀಠವು ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಕರ್ನಾಟಕ ಸರ್ಕಾರ ಯಾವುದೇ ಅಧಿಕೃತ ನಿಷೇಧ ಹೇರಿಲ್ಲ. ಆದರೂ ಮೌಖಿಕ ಸೂಚನೆಗಳು ಮತ್ತು ಪೊಲೀಸ್ ಹಸ್ತಕ್ಷೇಪದ ಮೂಲಕ ಚಿತ್ರದ ಬಿಡುಗಡೆಯನ್ನು ತಡೆಯಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಮಹೇಶ್ ರೆಡ್ಡಿ ಪರವಾಗಿ ವಕೀಲ ಎ. ವೇಲನ್ ವಾದಿಸಿದರು. ರಾಜ್ಯದ ಇಂತಹ ಕ್ರಮಗಳು ಸಂವಿಧಾನದ 19(1)(ಎ) ವಿಧಿಯ ಅಡಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಸಂವಿಧಾನಿಕ ನಿರ್ಬಂಧಕ್ಕೆ ಸಮನಾಗಿರುತ್ತದೆ ಎಂದು ಅವರು ಹೇಳಿದರು.
ಯಾವುದೇ ಕಾನೂನು ಪ್ರಕ್ರಿಯೆಯಿಂದ ತಡೆ ಹಾಕಿಲ್ಲ. ಬದಲಾಗಿ ಹಿಂಸಾಚಾರದ ಬೆದರಿಕೆ ಒಡ್ಡಿ ಚಿತ್ರ ಬಿಡುಗಡೆಗೆ ತಡೆ ಒಡ್ಡಲಾಗಿದೆ. ಚಿತ್ರ ಮಂದಿರಗಳಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದೆ. ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಹಿಂಸಾಚಾರದ ಪ್ರಚೋದನೆ ಸೇರಿದಂತೆ ಉದ್ದೇಶಪೂರ್ವಕ ಅಭಿಯಾನ ನಡೆಸಲಾಗಿದೆ ಎಂದು ಅವರು ವಾದಿಸಿದರು.
ಆದ್ದರಿಂದ ಕರ್ನಾಟಕದಾದ್ಯಂತ ಎಲ್ಲ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಥಗ್ ಲೈಫ್ ಚಿತ್ರದ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಕಾನೂನುಬದ್ಧವಾಗಿ ಪ್ರಮಾಣೀಕರಿಸಲ್ಪಟ್ಟ ಚಿತ್ರಕ್ಕೆ ಬೆದರಿಕೆಗಳು ಮರುಕಳಿಸದಂತೆ ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರು ಸೇರಿದಂತೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುವಂತೆ ವೇಲನ್ ಮನವಿ ಮಾಡಿಕೊಂಡರು.