ಬೆಂಗಳೂರು: ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, “ವೃತ್ತಿ ತೆರಿಗೆಯನ್ನು ವಿಧಿಸಬೇಕು ಎಂಬ ಅಂಶ ಸಂವಿಧಾನದಲ್ಲೇ ಅಡಕವಾಗಿದೆ. 2.5 ಸಾವಿರ ರೂಪಾಯಿ ಮಿತಿಯನ್ನೂ ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. 25 ಸಾವಿರಕ್ಕೂ ಹೆಚ್ಚು ಆದಾಯ ಹೊಂದಿರುವವರು ವಾರ್ಷಿಕ 2.5 ಸಾವಿರ ರೂಪಾಯಿ ಆದಾಯ ತೆರಿಗೆ ಪಾವತಿಸಬೇಕು. ಈ ಹಣವನ್ನು ಪಾವತಿಸಿದ ನಂತರ ಮತ್ತೆ ಐಟಿ ರಿಟರ್ನ್ಸ್ ಸಲ್ಲಿಸಬೇಕಾಗಿತ್ತು. ಆದರೆ ಈಗ ಆ ಅಗತ್ಯವನ್ನು ತೆಗೆದುಹಾಕಲಾಗಿದೆ.
ಎರಡೂವರೆ ಸಾವಿರ ರೂಪಾಯಿ ಪಾವತಿಸಿದ ನಂತರವೂ ಐಟಿ ರಿಟರ್ನ್ಸ್ ಸಲ್ಲಿಸಲು ಜನರು ಸಿಎ ಯನ್ನು ಸಂಪರ್ಕಿಸಬೇಕು, ಆ ನಂತರವೂ ನಮ್ಮ ಸಿಬ್ಬಂದಿಗಳಿಗೆ ಸಲ್ಲಿಸಬೇಕು. ಇದರಿಂದ ಜನರಿಗೆ ಅನಗತ್ಯವಾಗಿ ಹಣ ಹಾಗೂ ಸಮಯ ವ್ಯರ್ಥ. ಹೀಗಾಗಿ ಒಮ್ಮೆ ತೆರಿಗೆ ಹಣ ಪಾವತಿಸಿದ ನಂತರ ಮತ್ತೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎಂಬ ಸರಳ ತಿದ್ದುಪಡಿ ಈಗ ತರಲಾಗಿದೆ.
ಹಿರಿಯ ನಾಗರೀಕರಿಗೆ, ಸೈನಿಕರಿಗೆ, ದೈಹಿಕ-ಮಾನಸಿಕ ವಿಕಲಚೇತನರಿಗೆ ಈ ಹಿಂದೆಯೂ ವಿನಾಯಿತಿ ನೀಡಲಾಗಿತ್ತು. ಇವರು ವೃತ್ತಿ ತೆರಿಗೆ ಸಲ್ಲಿಸಬೇಕಿರಲಿಲ್ಲ. ಆದರೆ, ನಿಲ್ ರಿಟರ್ನ್ಸ್ ಸಲ್ಲಿಸಬೇಕಿತ್ತು. ಆದರೆ, ನಿಲ್ ರಿಟರ್ನ್ಸ್ ಸಲ್ಲಿಸಲೂ ಸಹ ಈಗ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಇದರಿಂದ ಜನರಿಗೆ ಸರಳ ಆಡಳಿತ ಲಭ್ಯವಾಗಲಿದ್ದು, ಅನಗತ್ಯ ಓಡಾಟಕ್ಕೆ ತಡೆ ಬೀಳಲಿದೆ ಎಂದರು.

