ನಗೆಪಾಟಲಿಗೆ ಈಡಾದ ಬಿಜೆಪಿ ಪೋಸ್ಟರ್: ಸುಪ್ರೀಂ ಕೋರ್ಟಿಗೆ, ಕಾಂಗ್ರೆಸ್ ಸರ್ಕಾರಕ್ಕೆ ಥ್ಯಾಂಕ್ಸ್ ಹೇಳಿದ ಕನ್ನಡಿಗರು

Most read

ಬೆಂಗಳೂರು: ಆರು ತಿಂಗಳಿನಿಂದ ಬರಪರಿಹಾರದ ಹಣ ನೀಡದೆ ಸತಾಯಿಸುತ್ತಿದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದರಿಂದಾಗಿ ಇಂದು ರಾಜ್ಯಕ್ಕೆ 3454 ಕೋಟಿ ರುಪಾಯಿ ಪರಿಹಾರ ಘೋಷಣೆ ಮಾಡಿದ್ದು, ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಪ್ರಧಾನಿ ನರೇಂದ್ರ ಮೋದಿಯವರನ್ನುಅಭಿನಂದಿಸುವ ಪೋಸ್ಟರ್ ಹಂಚಿಕೊಂಡು ನಗೆಪಾಟಲಿಗೆ ಈಡಾಗಿದೆ.

ಬರಪರಿಹಾರ ಕೊಡಬೇಕಾದ ಕಾಲಕ್ಕೆ ನೀವು ಕೊಡಲಿಲ್ಲ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ, ಅನಿವಾರ್ಯವಾಗಿ ಪರಿಹಾರ ಬಿಡುಗಡೆ ಮಾಡಿದೆ. ಹೀಗಾಗಿ ನಿಮಗಲ್ಲ, ಸುಪ್ರೀಂ ಕೋರ್ಟಿಗೆ, ರಾಜ್ಯಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ ಎಂದು ನೆಟ್ಟಿಗರು ಬಿಜೆಪಿ ಕಾಲೆಳೆದಿದ್ದಾರೆ.

ಜನ ನಿಮ್ಮನ್ನು ನೋಡಿ ನಗ್ತಾ ಇದ್ದಾರೆ… ಆದ್ರೂ ಬುದ್ಧಿ ಬರಲಿಲ್ಲ. ಅವಧಿಗೂ ಮುಂಚೆಯೇ ಬರ ಘೋಷಣೆ ಮಾಡಿ, ಪರಿಹಾರಕ್ಕಾಗಿ ಅತ್ತು ಕರೆದರೂ ನಮಗೆ ಯಾವುದೇ ಪರಿಹಾರ ನೀಡಲಿಲ್ಲ. ಅಂತಿಮವಾಗಿ ನಮ್ಮ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಹೋಯಿತು. ಕೋರ್ಟ್ ಛೀಮಾರಿ ಹಾಕಿದ ಮೇಲೆ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಮಾನ ಮರ್ಯಾದೆ ಇಲ್ಲದ ಬಿಜೆಪಿಯವರು ಇದರಲ್ಲೂ ಕ್ರೆಡಿಡ್ ತಗೊಳ್ತಾ ಇದ್ದಾರೆ. ನಾಚಿಗೆ ಆಗಬೇಕು.. ಥೂ… ಎಂದು ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಕೇಳಿದ್ದು, 18 ಸಾವಿರ ಕೋಟಿ. ಸುಪ್ರೀಂ ಕೋಟ್೯ ನಿಮ್ಮಮೋಡಿ ಸಕಾ೯ರವನ್ನು ಉಗಿದು ಉಪ್ಪಾಕಿದಕ್ಕೆ 3454 ಸಾವಿರ ಕೋಟಿ ಕೊಟ್ಟಿರುವುದು ಜಗತ್ತಿಗೆ ಗೊತ್ತಿರುವ ಸತ್ಯ. ಆದ್ರೆ ನೀವು ಮಣ್ಣಿಗೆ ಬಿದ್ದರು ಮೀಸೆ ಮಣ್ಣಾಗಿಲ್ಲ ಎನ್ನುವ ರೀತಿ ಬಿಲ್ಡಪ್ ಕೊಡ್ತಾ ಇದ್ದೀರಾ… ಎಂದು ಆರ್. ಕುಣಿಹಳ್ಳಿ ಮಂಜುನಾಥ್ ಟೀಕಿಸಿದರೆ, ಮೂರು ಬಿಟ್ಟೋರೋ ಊರಿಗೆ ದೊಡ್ಡೋರು ಅನ್ನೋ ಗಾದೆ ಬಿ ಜೆ ಪಿ ನೋಡೇ ಬರ್ದಿರಬೋದು ಎಂದು ರಮೇಶ್ ಮದಕರಿ ಟೀಕಿಸಿದ್ದಾರೆ.

ನಿಮಗೆ ನಾಚಿಕೆ ಮಾನ ಮರ್ಯಾದೆ ಇದಿಯಾ??? ಸುಪ್ರೀಂಕೋರ್ಟ್ ಮಕ್ಕುಗಿದ ಮೇಲೆ ಪರಿಹಾರ ಬಿಡುಗಡೆ ಮಾಡಿ ಬಿಲ್ಡಪ್ ತೊಗೊತಿರಾ ಎಂದು ಮಹೇಶ್‌ ಪಾಪುರ ಎಂಬುವವರು ಕಮೆಂಟ್‌ ಮಾಡಿದ್ದಾರೆ.

ನಾವು ಕೇಳಿರೋದ್ರಲ್ಲಿ (18,172 ಕೋಟಿ) ಸುಪ್ರೀಂ ಕೋರ್ಟ್ ಹೇಳಿದ್ರೂ , ಬರ್ರೀ ಕಾಲ್ ಭಾಗದಷ್ಟು (3,454 ಕೋಟಿ) ಕೊಟ್ಟಿಲ್ಲ !.ಅದಕ್ಕೆ ಇಷ್ಟೊಂದು ಬಿಲ್ಡ್ ಅಪ್ ತಗೊಳ್ತಿರಲ್ಲೋ ಎಂದು ಸಂಜಯ ಸಸಿಮಠ್‌ ಲೇವಡಿ ಮಾಡಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಪರಿಹಾರದ ಘೋಷಣೆ ಹೊರಬೀಳುತ್ತಿದ್ದಂತೆ ಮೊದಲೇ ಇದಕ್ಕೆ ಕಾದು ಕುಳಿತಂತೆ ಬಿಜೆಪಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳುವ ಪೋಸ್ಟರ್‌ ಪೋಸ್ಟ್‌ ಮಾಡಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಬಿಜೆಪಿ ಪೋಸ್ಟ್ ಮಾಡಿ ಈಗ ನಗೆ ಪಾಟಲಿಗೆ ಈಡಾಗಿದೆ.

More articles

Latest article