ಅಮರಾವತಿ: ಆಂಧ್ರಪ್ರದೇಶ ಸರ್ಕಾರದ ಆರು ಪ್ರಮುಖ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾಗಿರುವ ‘ತಲ್ಲಿಕಿ ವಂದನಂ’ (ತಾಯಿಗೆ ವಂದನೆ) ಯೋಜನೆ ಅಡಿಯಲ್ಲಿ ಶಾಲೆಗೆ ಹೋಗುವ ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ವಾರ್ಷಿಕ ರೂ. 15,000 ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಉಂಡವಲ್ಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟಿಡಿಪಿ ನೇತೃತ್ವದ ಸರ್ಕಾರ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ‘ತಲ್ಲಿಕಿ ವಂದನಂ’ ಯೋಜನೆಯ ಅಡಿ ರೂ.10,091 ಕೋಟಿ ವೆಚ್ಚ ಮಾಡಲಾಗುತ್ತದೆ. 2024ರ ಚುನಾವಣೆ ಸಂದರ್ಭದಲ್ಲಿ ನಾಯ್ಡು ಅವರು ‘ಸೂಪರ್ ಸಿಕ್ಸ್’ ಶೀರ್ಷಿಕೆ ಅಡಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದ್ದರು. 19–59 ವರ್ಷದ ಮಹಿಳೆಯರಿಗೆ ಮಾಸಿಕ ರೂ.1,500, ಯುವಕರಿಗೆ 20 ಲಕ್ಷ ಉದ್ಯೋಗ ಅಥವಾ ಮಾಸಿಕ ರೂ.3,000 ನಿರುದ್ಯೋಗ ಭತ್ಯೆ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗಳನ್ನು ಪ್ರಕಟಿಸಿದ್ದರು.
ಒಂದು ಮನೆಯಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚು ಮಕ್ಕಳಿದ್ದರೆ ಒಂದೇ ಮಗುವಿಗೆ ಸೌಲಭ್ಯ ನೀಡುವುದು ಸರಿಯಲ್ಲ. ಹೀಗಾಗಿ ಕುಟುಂಬದ ಎಲ್ಲ ಮಕ್ಕಳಿಗೂ ಈ ಯೋಜನೆಯ ಸೌಲಭ್ಯ ಸಿಗಲಿದ್ದು, 67 ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆಯಲಿದ್ದಾರೆ. ಜತೆಗೆ ರೂ.1,346 ಕೋಟಿ ವೆಚ್ಚದಲ್ಲಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಉದ್ಧೇಶಿಸಲಾಗಿದೆ ಎಂದು ನಾಯ್ಡು ಹೇಳಿದರು.