ಕಲಬುರಗಿ: ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗಾಗಿ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದಲ್ಲಿ ನೇತೃತ್ವ ವಹಿಸಿ ರೈತರ ಧ್ವನಿಯಾಗಬೇಕು ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಬಯಸಿದ್ದಾರೆ.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ 1,777 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದರೂ ರೈತರ ಹಿತದೃಷ್ಟಿಯಿಂದ ಭೂಸ್ವಾಧೀನವನ್ನು ಕೈಬಿಡುವ ಐತಿಹಾಸಿಕ ನಿರ್ಧಾರ ನಮ್ಮ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ಮೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟ ಅಂತ್ಯ ಕಂಡಿದೆ. ಅದಕ್ಕಾಗಿ ನಾಡಿನ ಸಮಸ್ತ ರೈತರ ಪರವಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ ಎಂದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಸ್ವಂತ ಹೊಲದಲ್ಲಿ ದುಡಿಮೆ ಮಾಡಿದ್ದಾರೆ. ರೈತರ ನೋವು ಸಂಕಷ್ಟದ ಅರಿವಿದೆ. ಆದ್ದರಿಂದ ಎಂಎಸ್ಪಿ ಕಾಯ್ದೆ ಜಾರಿಗೂ ನೇತೃತ್ವ ವಹಿಸಬೇಕು. ರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಅಂತಿಮ ಹೋರಾಟ ಆರಂಭಿಸಬೇಕು ಎಂದು ಮನವಿ ಮಾಡಿದರು.
ಹಿಂದಿನ ಬಿಜೆಪಿ ಸರ್ಕಾರ ದೇವನಹಳ್ಳಿ ತಾಲ್ಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿತ್ತು. ಅದಕ್ಕೆ ರೈತರ ವಿರೋಧ ವ್ಯಕ್ತವಾಗಿತ್ತು. ಆಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಆಗ ಅವರನ್ನು ನಾನೇ ಹೋರಾಟಕ್ಕೆ ಕರೆದುಕೊಂಡು ಹೋಗಿದ್ದೆ. ರೈತರ ಹೋರಾಟಕ್ಕೆ ಬೆಂಬಲ ಕೊಡುವುದಾಗಿ ಘೋಷಿಸಿದ್ದೆವು. ಆಗ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ರೈತರಿಗೆ ಸಂಕಷ್ಟಕ್ಕೆ ಸ್ಪಂದಿಸಿ, ಭೂಮಿ ಮರಳಿಸಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ, ಫರಹತಾಬಾದ್, ತಾವಗೇರಾ ಪ್ರದೇಶದಲ್ಲಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ಇದ್ದಾಗ 1,500 ಜಮೀನು ಸ್ವಾಧೀನಪಡಿಸಿಕೊಂಡಿತ್ತು. 15 ವರ್ಷಗಳಾದರೂ ಒಂದೇ ಒಂದೂ ಕಾರ್ಖಾನೆ ಸ್ಥಾಪನೆಯಾಗಿಲ್ಲ. ಜೇವರ್ಗಿಯ ಫುಡ್ಪಾರ್ಕ್ ಯೋಜನೆಯೂ ಯಶಸ್ವಿಯಾಗಿಲ್ಲ. ಮತ್ತೊಂದೆಡೆ ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೂ ಸಿದ್ಧತೆ ನಡೆದಿದೆ. ಅದೂ ಯಶಸ್ವಿಯಾಗುವುದಿಲ್ಲ ಎಂಬ ಅರಿವಿದೆ ಎಂದು ಬಿ.ಆರ್.ಪಾಟೀಲ ಹೇಳಿದರು.
ಈ 1500 ಎಕರೆ ಜಮೀನಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ಚಿಂತನೆ ನಡೆದಿದೆ. ಸೋಲಾರ್ ಪಾರ್ಕ್ ಗೆ ಫಲವತ್ತಾದ ಕೃಷಿ ಜಮೀನು ಏಕೆ ಬೇಕು? ಹೊನ್ನಕಿರಣಗಿ ಹೆಸರು ಬಂದಿದ್ದೇ ಅಲ್ಲಿ ಸಮೃದ್ಧವಾಗಿ ಬೆಳೆದ ಜೋಳದಿಂದ. ಹೀಗಾಗಿ ಅಂಥ ನೆಲದಲ್ಲಿ ಸೋಲಾರ್ ಪಾರ್ಕ್ ಬೇಡ. ಈ ಜಮೀನಿನಲ್ಲಿ ಸೋಲಾರ್ ಪಾರ್ಕ್ ಬದಲು ಸರ್ಕಾರ ಕೃಷಿ ಕಾಲೇಜು ಅಥವಾ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು. ತೊಗರಿ ಬೆಳೆ ಪ್ರದೇಶ ವಿಸ್ತರಣೆಯಾಗಿದೆ. ಬೀದರ್, ಬೆಳಗಾವಿ, ವಿಜಯಪುರ, ರಾಯಚೂರು, ಚಿತ್ರದುರ್ಗದವರೆಗೆ ತೊಗರಿ ಬೆಳೆಯಲಾಗುತ್ತಿದೆ. ಬೇಳೆಕಾಳು ಎಣ್ಣೆಕಾಳುಗಳನ್ನು ಈಗಲೂ ನಮ್ಮ ದೇಶ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಹೊಸ ಹೊಸ ತಳಿಗಳನ್ನು ಸಂಶೋಧಿಸಿ ರೈತರಿಗೆ ಕೊಟ್ಟರೆ, ಸಮೃದ್ಧವಾಗಿ ಧಾನ್ಯಗಳನ್ನು ಬೆಳೆದು ಆಮದು ನಿಲ್ಲಿಸಬಹುದು ಎಂದು ಬಿ.ಆರ್.ಪಾಟೀಲ ಅಭಿಪ್ರಾಯಪಟ್ಟರು.