ಧಾರವಾಡ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಅನುತ್ತೀರ್ಣರಾಗಿರುವುದಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಜುಲೈ 23ರಂದು ಸಭೆ ನಡೆಸಿ, ಉಪಸಮಿತಿ ರಚಿಸಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಈ ಸಮಿತಿಯಲ್ಲಿ ಶಿಕ್ಷಣ ತಜ್ಞರು, ಶಿಕ್ಷಕರು ಸೇರಿ ಐವರು ಸದಸ್ಯರು ಇರುತ್ತಾರೆ. ವರದಿ ಸಲ್ಲಿಸಲು ಮೂರು ತಿಂಗಳ ಗಡುವು ವಿಧಿಸಲಾಗುವುದು. ಕನ್ನಡದಲ್ಲಿ ಅನುತ್ತೀರ್ಣರಾದವರ ತಾಲ್ಲೂಕುವಾರು ವಿವರ ನೀಡಲು ಶಾಲಾ ಶಿಕ್ಷಣ ಇಲಾಖೆಗೆ ಕೋರಲಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ಶಿಕ್ಷಕರಿಗೆ ಅಗತ್ಯ ತರಬೇತಿ ಹಾಗೂ ಪಠ್ಯಕ್ರಮ, ಕಲಿಕೆಯನ್ನು ಸರಳಗೊಳಿಸಿದರೆ ಕನ್ನಡ ಪ್ರಥಮಭಾಷೆ ಅಂಕವನ್ನು 100ಕ್ಕೆ ಇಳಿಸಿದ್ದನ್ನು ಒಪ್ಪಬಹುದು. ರಾಜ್ಯ ಶಿಕ್ಷಣ ನೀತಿ (ಎಸ್ ಇಪಿ) ಸಮಿತಿ ಜುಲೈ ಅಂತ್ಯದ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸುವ ಸಂಭವವಿದ್ದು, ದ್ವಿಭಾಷಾ ಸೂತ್ರ ಕುರಿತ ಶಿಫಾರಸು ಕುರಿತು ಚರ್ಚಿಸಿ ಪ್ರಾಧಿಕಾರದ ತನ್ನ ನಿರ್ಧಾರವನ್ನು ಪ್ರಕಟಿಸಲಿದೆ ಎಂದೂ ಹೇಳಿದರು.