ಬೆಂಗಳೂರು: ಕೇಂದ್ರ ಸರ್ಕಾರದ ಸಂಸದೀಯ ರಾಜಭಾಷಾ ಸಮಿತಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಮೂರು ದಿನಗಳಿಂದ ಕನ್ನಡಿಗರೂ ಸೇರಿದಂತೆ ಹಿಂದಿಯೇತರ ರಾಜ್ಯಗಳ ಜನರ ಮೇಲೆ ಹಿಂದಿ ಹೇರಿಕೆ ಮಾಡುವ ಸಂಬಂಧ ನಡೆಸುತ್ತಿದ್ದ ಕಾರ್ಯಕ್ರಮದ ವಿರುದ್ಧ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆ ನಡೆಸಿದ 40 ಕ್ಕೂ ಹೆಚ್ಚು ಕರವೇ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿರುವ ಕ್ರಮವನ್ನು ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಖಂಡಿಸಿದ್ದಾರೆ.
ಘಟನೆ ನಡೆದ ನಂತರ ಇಡೀ ಪ್ರಕರಣವನ್ನು ತಿರುಚುವ ಯತ್ನಗಳು ನಡೆಯುತ್ತಿವೆ. ಈ ಕಾರ್ಯಕ್ರಮ ಹಿಂದಿ ಹೇರಿಕೆಯ ಕಾರ್ಯಕ್ರಮ ಅಲ್ಲ, ಅದು ಹಿಂದಿ ಭಾಷೆಗೆ ಸಂಬಂಧಿಸಿದ್ದೇ ಅಲ್ಲ ಎಂದು ತಿರುಚಲಾಗುತ್ತಿದೆ. ಕೇಂದ್ರ ಸರ್ಕಾರದ ರಾಜಭಾಷಾ ಸಮಿತಿ ಇರುವುದೇ ಹಿಂದಿ ಪ್ರಚಾರಕ್ಕೆ ಮತ್ತು ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರುವುದಕ್ಕೆ. ಹಿಂದಿ ಸಾಮ್ರಾಜ್ಯಶಾಹಿಯನ್ನು ಸ್ಥಾಪಿಸುವ ಸಲುವಾಗಿಯೇ ಈ ರಾಜಭಾಷಾ ಸಮಿತಿ ಕೆಲಸ ಮಾಡುತ್ತಿದೆ. ಯಾರಿಗಾದರೂ ಅನುಮಾನವಿದ್ದರೆ ರಾಜಭಾಷಾ ಸಮಿತಿ ಇದುವರೆಗೆ ಏನು ಕೆಲಸ ಮಾಡಿದೆ ಎಂಬುದನ್ನು ಗಮನಿಸಬಹುದು.
ಭಾರತದಲ್ಲಿ ರಾಜಶಾಹಿ ವ್ಯವಸ್ಥೆ ಹೋಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿದ್ದು 1947ರಲ್ಲಿ. ಆದರೆ ರಾಜಭಾಷೆಯ ಹೆಸರಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನ ಅಂದಿನಿಂದಲೂ ಜಾರಿಯಲ್ಲಿದೆ. ದೇಶದಲ್ಲಿ ಈಗ ರಾಜರೂ ಇಲ್ಲ, ರಾಜಭಾಷೆಗಳೂ ಇಲ್ಲ. ಇರುವುದು ಈ ನೆಲದ ಭಾಷೆಗಳು. ನಮಗೆ ನಮ್ಮ ಕನ್ನಡವೇ ರಾಷ್ಟ್ರಭಾಷೆ. ಇನ್ಯಾವುದೋ ಭಾಷೆಯನ್ನು ರಾಜಭಾಷೆ ಎಂದು ಹೇಳಿ ನಮ್ಮ ಮೇಲೆ ಹೇರಲು ಯತ್ನಿಸಿದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ.
ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನ ನೀಡಲು ಯತ್ನಿಸಿ ಹಿಂದಿ ಸಾಮ್ರಾಜ್ಯಶಾಹಿಗಳು ವಿಫಲವಾಗಿದ್ದು ಇತಿಹಾಸ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಸುಳ್ಳು ಪ್ರಚಾರ ಮಾಡಲಾಯಿತು. ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಸುಳ್ಳು ಬಹಿರಂಗವಾದಮೇಲೆ ಈಗ ಅದನ್ನು ರಾಜಭಾಷೆ ಎಂದು ಮೆರೆಸಲಾಗುತ್ತಿದೆ. ಈ ಹುನ್ನಾರವನ್ನು ನಾವು ವಿಫಲಗೊಳಿಸದೇ ಬಿಡುವುದಿಲ್ಲ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ಕೇಸಿಗೆ, ಜೈಲಿಗೆ ಬೆದರುವುದಿಲ್ಲ. ಆದರೆ ನಮ್ಮ ಮುಖಂಡರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ಹಾಕಿ, ಸಂಬಂಧಪಡದ ಸೆಕ್ಷನ್ ಗಳನ್ನು ಹೇರಿದರೆ ನಾವು ಸುಮ್ಮನಿರುವುದಿಲ್ಲ. ರಾಜ್ಯದ ಎಲ್ಲ ಭಾಗಗಳಿಂದ ನಮ್ಮ ಕಾರ್ಯಕರ್ತರು ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಏನಾದರೂ ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಹೊರಟರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲು ಬಯಸುತ್ತೇನೆ.
ಇನ್ ಸ್ಪೆಕ್ಟರ್ ಅಮಾನತು ಏಕೆ?:
ನಮ್ಮ ಪ್ರತಿಭಟನೆಗೆ ಸಂಬಂಧಪಟ್ಟಂತೆ ಹೈಗ್ರೌಂಡ್ಸ್ ಠಾಣೆಯ ಇನ್ ಸ್ಪೆಕ್ಟರ್ ಅಮಾನತು ಮಾಡಿರುವುದು ನಾಚಿಕೆಗೇಡಿತನ. ರಾಜಭಾಷಾ ಸಮಿತಿ ಕಾರ್ಯಕ್ರಮವನ್ನು ಪಂಚತಾರಾ ಹೋಟೆಲ್ ನಲ್ಲಿ ಕದ್ದುಮುಚ್ಚಿ ನಡೆಸಲಾಗುತ್ತಿತ್ತು. ಪೊಲೀಸರಿಗಾಗಲೇ, ಮಾಧ್ಯಮದವರಿಗಾಗಲೇ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ. ಹೀಗಿದ್ದಾಗ್ಯೂ ಕೂಡ ಇನ್ಸ್ ಪೆಕ್ಟರ್ ಅಮಾನತು ಮಾಡಿದ ಉದ್ದೇಶವೇನು? ಸರ್ಕಾರ ಈ ಕೂಡಲೇ ಈ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಾವು ನಮ್ಮ ಪ್ರಾಣ ಒತ್ತೆಯಿಟ್ಟಾದರೂ ಈ ಕುತಂತ್ರವನ್ನು ಬಗ್ಗುಬಡಿಯುತ್ತೇವೆ. ಇದರಲ್ಲಿ ಯಾವುದೇ ರಾಜಿ ಇಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು, ಇದು ನನ್ನ ಆಗ್ರಹ. ದೇಶದ ಐಕ್ಯತೆಗೆ ಧಕ್ಕೆ ತರುತ್ತಿರುವ ರಾಜಭಾಷಾ ಸಮಿತಿಯನ್ನು ರದ್ದುಪಡಿಸಬೇಕು. ಅದರ ಅಗತ್ಯ ದೇಶಕ್ಕೆ ಇಲ್ಲ ಎಂದು ಹೇಳಿದ್ದಾರೆ.