ದಕ್ಷಿಣ ಕನ್ನಡ: ತಾಲ್ಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿಇಂದು ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಳತ್ತಮಜಲು ನಿವಾಸಿ ರಹೀಂ (34) ಎಂಬಾತ ಹತ್ಯೆಯಾದ ವ್ಯಕ್ತಿ. ಕೊಳತ್ತಮಜಲು ನಿವಾಸಿ ರಹೀಂ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ರಹೀಂ ಇರಾಕೋಡಿಯಲ್ಲಿ ಪಿಕಪ್ ವಾಹನದಿಂದ ಮರಳನ್ನು ಇಳಿಸುವ ಸಂದರ್ಭದಲ್ಲಿ, ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ದಾಳಿಯ ಸಂದರ್ಭದಲ್ಲಿ ರಹೀಂ ಜೊತೆ ಶಾಫಿ ಎಂಬಾತನೂ ಅಲ್ಲಿಯೇ ಸ್ಥಳದಲ್ಲಿದ್ದು, ಆತನ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆತನ ಕೈಗೆ ಏಟಾಗಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾಳಿ ನಡೆದಿದ್ದು ನಿಜ. ಈ ಕುರಿತ ವಿವರಗಳನ್ನು ನಂತರ ಹಂಚಿಕೊಳ್ಳಲಿದ್ದೇವೆ ಎಂದು ಯತೀಶ್ ತಿಳಿಸಿದ್ದಾರೆ.