ಬೆಂಗಳೂರು: ಕರಾಟೆಕಿಂಗ್ ದಿ. ಶಂಕರ್ನಾಗ್ ಅವರ ಜನ್ಮದಿನದ ಪ್ರಯುಕ್ತ ಆಟೋ ಚಾಲಕರ ಸಂಘಟನೆಗಳ ನೇತೃತ್ವದಲ್ಲಿ 12ನೇ ವರ್ಷದ “ಚಾಲಕರ ದಿನಾಚರಣೆ”ಯನ್ನು ನವೆಂಬರ್ 9ರಂದು ಜಯನಗರ 5ನೇ ಬ್ಲಾಕ್, ಶಾಲಿನಿ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದು, ಆದಿಚುಂಚನಗಿರಿ ಮಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳು ಸಾನಿದ್ಯ ವಹಿಸಲಿದ್ದಾರೆ.
ಈ ಕುರಿತು ಪೀಸ್ ಆಟೋ ಮತ್ತು ವಿಷ್ಣುಸೇನಾ ಸಮಿತಿ ಹಾಗೂ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದ ಪೀಸ್ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ರಘು ಎನ್. ನಾರಾಯಣ್ ಗೌಡ ಮಾತನಾಡಿದರು.
ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎಸ್. ಅಶ್ವತ್ಥನಾರಾಯಣ್, ಸಾರಿಗೆ ಆಯುಕ್ತ ಎ.ಎಂ. ಯೋಗೇಶ್, ಆರಕ್ಷಕ ಮಹಾನಿರೀಕ್ಷಕ ಡಾ.ಎಂ.ಎ.ಸಲೀಂ ಪಾಲ್ಗೊಳ್ಳಲಿದ್ದಾರೆ. ಈ ಬಾರಿಯ ಚಾಲಕರ ದಿನಾಚರಣೆಗೆ “ಆಟೋ ರಾಯಭಾರಿ”ಯಾಗಿ ಡಿಂಪಲ್ ಕ್ವೀನ್ ನಟಿ ರಚಿತರಾಮ್ ಆಯ್ಕೆಯಾಗಿದ್ದಾರೆ ಎಂದರು.
ಪ್ರತಿವರ್ಷದಂತೆ ಈ ವರ್ಷವೂ ಶಂಕರ್ನಾಗ್ ಅವರ ಜನ್ಮದಿನವನ್ನು ಚಾಲಕರ ದಿನವನ್ನಾಗಿ ಸಮಸ್ತ ಆಟೋ ಚಾಲಕರ ಸಮ್ಮುಖದಲ್ಲಿ ಅದ್ಧೂರಿಯಿಂದ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ 7 ಪ್ರಾಮಾಣಿಕ ಚಾಲಕರು, ಹಿರಿಯ ಹಾಗೂ ಮಹಿಳಾ ಆಟೋಚಾಲಕರಿಗೆ ತಮ್ಮ ಸೇವೆಯನ್ನು ಗೌರವಿಸಿ ಚಿನ್ನದ ಪದಕವನ್ನು ವಿತರಣೆ ಮಾಡಲಾಗುತ್ತಿದ್ದು, ಈ ಮೂಲಕ ಪ್ರಾಮಾಣಿಕ ಆಟೋ ಚಾಲಕರಿಗೆ ಇನ್ನಷ್ಟು ಹುರಿದುಂಬಿಸುವ ಕೆಲಸ ಮಾಡಲಿದ್ದೇವೆ ಎಂದರು.
ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್ಯೂನಿಯನ್ ಅಧ್ಯಕ್ಷ ಎಂ. ಮಂಜುನಾಥ್ ಗೌಡ ಮಾತನಾಡಿ, ಶಂಕರ್ನಾಗ್ ಅವರ ದಿನಾಚರಣೆ ಎಲ್ಲಾ ಚಾಲರಕರಿಗೂ ಹಬ್ಬದ ದಿನದಂತೆ, ಹೀಗಾಗಿ ಹಬ್ಬದಂತೆಯೇ ಸಂಭ್ರಮಿಸಲು ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರು ಸೇರಲಿದ್ದಾರೆ. ಆಗಮಿಸುವ ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ. ನಟ ಅಜಯ್ ರಾವ್ ಅವರು ಇಬ್ಬರು ಚಾಲಕರಿಗೆ ಧನಸಹಾಯ ಮಾಡಲಿದ್ದಾರೆ ಎಂದರು.
ಸರ್ಕಾರವೇ ಚಾಲಕರ ದಿನ ಆಚರಿಸಲಿ:
ಆಟೋ ಮತ್ತು ಟ್ಯಾಕ್ಸಿ ಚಾಲಕರಿಲ್ಲದೇ ಸಾರಿಗೆ ವ್ಯವಸ್ಥೆಯೇ ಇಲ್ಲ, ಚಾಲಕರನ್ನು ಗೌರವಿಸಲು ಪ್ರತಿವರ್ಷ ನಡೆಸುತ್ತಿರುವ ಚಾಲಕರ ದಿನಾಚರಣೆಯನ್ನು ಸರ್ಕಾರವೇ ಜವಾಬ್ದಾರಿ ಹೊತ್ತು ಆಚರಿಸಬೇಕು, ಜೊತೆಗೆ, ಈ ದಿನವನ್ನು ಸರ್ಕಾರ ಅಧಿಕೃತವಾಗಿ “ಚಾಲಕರ ದಿನ”ವನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಬಿ.ಪ್ಯಾಕ್ ಸದಸ್ಯ ರಾಘವೇಂದ್ರ ಪೂಜಾರಿ ಮಾತನಾಡಿ, ಸಾಹಸಸಿಂಹ ದಿ. ಡಾ. ವಿಷ್ಣುವರ್ಧನ್ ಅವರಿಗೆ “ಕರ್ನಾಟಕ ರತ್ನ” ಗೌರವ ಸಂಧಿರುವ ಹಿನ್ನೆಲೆಯಲ್ಲಿ ಚಾಲಕರ ದಿನಾಚರಣೆ ವೇಳೆ ಎಲ್ಲಾ ಆಟೋ ಚಾಲಕರು “ವಿಷ್ಣು ನಮನ” ಸಲ್ಲಿಸಲಿದ್ದೇವೆ ಎಂದು ಹೇಳಿದರು. ಶಂಕರ್ನಾಗ್ ಅವರ ಜನ್ಮದಿನದ ಪ್ರಯುಕ್ತ “ಹಂಪಿ ರಥ”ದಂತೆ ಸಿಂಗಾರಗೊಂಡ ಆಟೋಗೆ ಚಾಲನೆ ನೀಡಲಾಗಿದ್ದು, ಶಂಕರ್ನಾಗ್ ಹಾಗೂ ಡಾ. ವಿಷ್ಣವರ್ಧನ್ ಫೋಟೋ ಹೊತ್ತ ಈ ರಥ ಬೆಂಗಳೂರಿನಾದ್ಯಂತ ಎಲ್ಲೆಡೆ ಮೆರವಣಿಗೆ ಸಾಗಲಿದೆ.

