ಬೆಂಗಳೂರು: ಅರಣ್ಯ ಪರಿಸರ ನಾಶವಾಗುವುದು ಸಾಂಸ್ಕೃತಿಕ ದೃಷ್ಠಿಕೋನದಿಂದ ಒಳ್ಳೆಯ ಬೆಳವಣಿಗೆಯಲ್ಲ. ಅರಣ್ಯವನ್ನು ಸಂರಕ್ಷಿಸಿದರೆ ಕನ್ನಡ ಸಂಸ್ಕೃತಿ ಉಳಿಯುತ್ತದೆ. ಅರಣ್ಯದ ಕುರಿತಾದ ಸಂಶೋಧನಾ ಚಟುವಟಿಕೆಗಳು ಕೂಡ ಕನ್ನಡದಲ್ಲಿ ನಿರ್ವಹಿಸಪಟ್ಟಲ್ಲಿ ಅದು ಕನ್ನಡದ ಉಳಿವಿಗೆ ತನ್ನದೇ ಆದ ಕಾಣಿಕೆಯನ್ನು ನೀಡುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಅರಣ್ಯ ಇಲಾಖೆಯ ಪ್ರಧಾನ ಕಚೇರಿಯಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಪರಿಸರ ನಾಶದ ಜೊತೆಯಲ್ಲಿ ಕನ್ನಡವು ಮರೆಯಾಗುವ ಎಲ್ಲ ಅವಕಾಶಗಳಿದ್ದು, ಭಾಷೆ ಕೊಲ್ಲಲ್ಪಟ್ಟಲ್ಲಿ ನಮ್ಮ ಸಂಸ್ಕೃತಿಯು ನಾಶವಾಗುತ್ತದೆ. ಹಾಗಾಗಿ ಕನ್ನಡದ ಅಸ್ಮಿತೆಯನ್ನು ಕಾಯುವ ಜವಾಬ್ದಾರಿ ಬೇರೆ ಎಲ್ಲಾ ಇಲಾಖೆಗಳಿಗಿಂತಲೂ ಅರಣ್ಯ ಇಲಾಖೆಗೆ ಹೆಚ್ಚಿದೆ ಎಂದರು. ಕುವೆಂಪು, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿಯಂತಹ ಕೆಲವೇ ಲೇಖಕರನ್ನು ಹೊರತುಪಡಿಸಿದರೆ ಕಾಡಿನ ಭಾಷೆಯ ಸತ್ವ ಶಕ್ತಿಯನ್ನು ಕನ್ನಡ ಸಾಹಿತ್ಯವು ಹಿಡಿದಿಟ್ಟಿರುವುದು ತುಂಬಾ ಕಡಿಮೆ ಇದ್ದು, ಕನ್ನಡದ ಕಾಡು ಒಂದು ಜ್ಞಾನ ಭಂಡಾರವಾಗಿ ರೂಪಿತವಾಗಬೇಕಾದಲ್ಲಿ ಅರಣ್ಯ ಇಲಾಖೆ ಇನ್ನಷ್ಟು ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಳ್ಳಬೇಕಿದೆ ಎಂದರು.
ಕನ್ನಡೇತರ ಅಧಿಕಾರಿಗಳು ಕನ್ನಡದ ಬಗ್ಗೆ ಸಾಕಷ್ಟು ಅಭಿಮಾನ ಹೊಂದಿದ್ದಾರೆ. ಆದರೆ ಹಲವು ಬಾರಿ ಕನ್ನಡದ ಅಧಿಕಾರಿಗಳೇ ಕನ್ನಡದ ಅನುಷ್ಠಾನಕ್ಕೆ ಹಿಂಜರಿಕೆ ತೋರುತ್ತಾರೆ ಎಂದ ಡಾ.ಬಿಳಿಮಲೆ, ಕೆಪಿಎಸ್ ಸಿ ಕನ್ನಡ ಪ್ರಶ್ನೆ ಪತ್ರಿಕೆಗಳ ಲೋಪವನ್ನು ನೆನೆದರು. ಕನ್ನಡದವರಿಗೆ ಕನ್ನಡ ಕಲಿಸುವ ದುಸ್ಥಿತಿಯಲ್ಲಿ ನಾವಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ ಅವರು ಕನ್ನಡವನ್ನು ಕಡೆಗಣಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾದರಷ್ಟೇ ಒಂದು ಹಂತದ ಪರಿಹಾರ ದೊರಕಬಹುದೆಂದು ಅಭಿಪ್ರಾಯಿಸಿದರು.
ಕನ್ನಡ ಬೆಳವಣಿಗೆ ನಿರೀಕ್ಷೆಗಿಂತಲೂ ಕಡಿಮೆಯಾಗಿರುವುದಕ್ಕೆ ಸಂವಹನದ ಕೊರತೆ ಕಾರಣವೆಂದ ಡಾ. ಬಿಳಿಮಲೆ, 90ರ ದಶಕದ ಜಾಗತಿಕರಣದ ಬಳಿಕ ಅಸಂಖ್ಯ ಸಣ್ಣ ಭಾಷೆಗಳು ಜನ ಬಳಕೆಯಿಂದ ಮರೆಯಾಗುತ್ತಿದ್ದು, ಕನ್ನಡಕ್ಕೆ ಈ ದುಸ್ಥಿತಿ ಒದಗದೆ ಇರಬೇಕಾದರೆ ಇಲಾಖೆಗಳು ಜನಸಾಮಾನ್ಯರೊಂದಿಗೆ ಕನ್ನಡದಲ್ಲಿ ಉತ್ತಮ ಸಂವಹನವನ್ನು ಸಾಧಿಸಬೇಕೆಂದರು.
ಕನ್ನಡ ಘಟಕ ಸ್ಥಾಪಿಸಲು ಕರೆ:
ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಕನ್ನಡಿಗರ ಹಿತವನ್ನು ಕಾಯಲು ಕೂಡಲೇ ಕನ್ನಡ ಘಟಕವನ್ನು ಸ್ಥಾಪಿಸಬೇಕೆಂದು ಕರೆ ನೀಡಿದ ಡಾ. ಬಿಳಿಮಲೆ, ಕನ್ನಡಿಗರು ತಮ್ಮದೆ ನೆಲದಲ್ಲಿ ಅನಾಥ ಪ್ರಜ್ಞೆಯಿಂದ ನರಳದಿರಲು ಇಂತಹ ಕನ್ನಡಪರ ನಿಲುವುಗಳು ಅಗತ್ಯವಿದೆ ಎಂದರು. ಕಾಲಕಾಲಕ್ಕೆ ಕನ್ನಡ ಭಾಷೆ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸೂಚಿಸಿದ ಅವರು ಈ ರೀತಿಯ ಕನ್ನಡ ಘಟಕಗಳು ಕನ್ನಡಿಗರ ಸಂವೇದನಾಶೀಲತೆಗೆ ಸಹಕರಿಸಲಿವೆ ಎಂದರು. ಮೈಸೂರಿನ ಮೃಗಾಲಯದ ಜಾಲತಾಣವೂ ಸೇರಿದಂತೆ ಇಲಾಖೆಯ ವಿವಿಧ ಕಚೇರಿಗಳ ಜಾಲತಾಣಗಳಲ್ಲಿ, ಕನ್ನಡಕ್ಕೆ ಆದ್ಯತೆಯನ್ನು ನೀಡದಿರುವ ಅಂಶವನ್ನು ಉಲ್ಲೇಖಿಸಿದ ಬಿಳಿಮಲೆಯವರು ಕನ್ನಡವನ್ನು ಆದ್ಯತೆಯ ಭಾಷೆಯನ್ನಾಗಿ ಬಳಸುವ ವ್ಯವಸ್ಥೆಯನ್ನು ಕೂಡಲೇ ರೂಪಿಸಬೇಕು, ಸಾರ್ವಜನಿಕರೊಂದಿಗೆ ಸ್ಪಂದಿಸುವ ಪತ್ರ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಕನ್ನಡ ಬಳಕೆಗೆ ಮುಂದಾಗಬೇಕು ಎಂದರು. ಇಲಾಖೆಯ ಜಾಲತಾಣಗಳಲ್ಲಿ ದಾಖಲಿಸಿರುವ ಆದೇಶಗಳು, ಸುತ್ತೋಲೆಗಳು ಆಂಗ್ಲಭಾಷೆಯಲ್ಲಿದ್ದು, ಕೂಡಲೇ ಇದನ್ನು ಸರಿಪಡಿಸಬೇಕೆಂದು ಸೂಚನೆ ನೀಡಿದರು.
2022ರಲ್ಲಿ ಜಾರಿಗೆ ಬಂದಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈ ಕಾಯ್ದೆ ಅನುಸಾರ ಕನ್ನಡವನ್ನು ನಾಮಫಲಕಗಳಲ್ಲಿ ಶೇ.60ರ ಪ್ರಾತಿನಿಧ್ಯದೊಂದಿಗೆ ಪ್ರದರ್ಶಿಸಬೇಕಿರುತ್ತದೆ. ಅರಣ್ಯ ಇಲಾಖೆಗೆ ಸೇರಿದ ಕಚೇರಿಗಳು, ಸಾರ್ವಜನಿಕ ಸಂಪರ್ಕ ಸ್ಥಳಗಳಲ್ಲಿ ಕನ್ನಡ ಭಾಷೆಗೆ ಸಿಗಬೇಕಾದ ಪ್ರಾತಿನಿಧ್ಯ ದೊರಕುತ್ತಿಲ್ಲವೆಂದ ಬಿಳಿಮಲೆ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತಂತೆ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.
ಅರಣ್ಯ ಇಲಾಖೆಯ ಪಾರಿಭಾಷಿಕ ಪದಕೋಶ ರಚಿಸಿ:
ತಾಂತ್ರಿಕತೆಯನ್ನು ಆಡಳಿತ ವ್ಯವಸ್ಥೆಯಲ್ಲಿ ಹೊಂದಿರುವ ಕೆಲವು ಇಲಾಖೆಗಳಲ್ಲಿ ಅರಣ್ಯ ಇಲಾಖೆಯು ಒಂದಾಗಿದ್ದು, ಸಾರ್ವಜನಿಕರು ಈ ಇಲಾಖೆಯೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಇಲ್ಲಿನ ಪದ ಬಳಕೆಯ ಕುರಿತಂತೆ ಹೆಚ್ಚಿನ ಜಾಗೃತಿ ಹೊಂದಿರಬೇಕಾಗುತ್ತದೆ. ಆಡಳಿತ ವ್ಯವಸ್ಥೆಯ ಭಾಗವಾಗಿರುವ ಅಧೀನ ಅಧಿಕಾರಿ ಸಿಬ್ಬಂದಿಗಳಿಗೂ ಇಲಾಖೆಯ ತಾಂತ್ರಿಕ ಅಂಶಗಳ ಅರಿವು ಅವಶ್ಯವಿರುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೂಡಲೇ ಪಾರಿಭಾಷಿಕ ಪದಕೋಶ ರಚನೆಗೆ ಮುಂದಾಗಬೇಕೆಂದು ಸೂಚಿಸಿದ ಡಾ.ಬಿಳಿಮಲೆ, ಈ ಪಾರಿಭಾಷಿಕ ಪದಕೋಶವು ಮಾದರಿಯಾಗಿ ರೂಪುಗೊಳ್ಳಬೇಕಾದ ಅವಶ್ಯಕತೆ ಇದೆ. ಈ ಸಂದರ್ಭದಲ್ಲಿ ಅರಣ್ಯ ವಾರ್ತೆ ವಾರ್ತಾ ಪತ್ರಿಕೆಯಲ್ಲಿ ಇಲಾಖೆಯು ಬಳಸುತ್ತಿರುವ “ಕೇಳರಿಯದ ಕನ್ನಡದ ಪದʼ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಪ್ರಾಧಿಕಾರದ ಸದಸ್ಯ ಡಾ. ವಿ.ಪಿ. ನಿರಂಜನಾರಾಧ್ಯ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ಒಣಕೃಷಿ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಛಾಯಾ ಎ.ಎಂ., ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ವನ್ಯಜೀವಿ ಪರಿಪಾಲಕರಾದ ಸುಭಾಷ್ ಕೆ ಮಾಲ್ಖಡೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಸೀಮಾ ಗರ್ಗ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂಪನ್ಮೂಲ ನಿರ್ವಹಣೆ) ವನಶ್ರೀ ಸಿಂಗ್, ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆಡಳಿತ ಮತ್ತು ಸಮನ್ವಯ) ಕುಮಾರ್ ಪುಷ್ಕರ್ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.