ಬೆಂಗಳೂರು : ಬೆಂಗಳೂರು ನಗರದ ಸ್ಯಾಂಕಿ ಕೆರೆಯಲ್ಲಿ ” ಕಾವೇರಿ ಆರತಿ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಪರಿಸರಕ್ಕೆ ಪೂರಕವಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. 5 ಗಂಟೆಗಳ ಕಾಲ ನಡೆದ ಕಾರ್ಯಕ್ರಮದ ನಂತರ ಸ್ಯಾಂಕಿ ಕೆರೆಯ ಸುತ್ತ ಮತ್ತಲೂ ಕಸ ಸಂಗ್ರಹವಾಗಿತ್ತು. ಕಾರ್ಯಕ್ರಮ ಮುಗಿದ ಕೆಲವೇ ಕ್ಷಣಗಳಲ್ಲಿ ಕಾರ್ಯತತ್ಪರರಾದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್, ಸಿಬ್ಬಂದಿಗಳು ಹಾಗೂ ಬಿಬಿಎಂಪಿ ಸ್ವಚ್ಚತಾ ಕಾರ್ಮಿಕರ ಜೊತೆಗೂಡಿ ಕೆಲವೇ ಗಂಟೆಗಳಲ್ಲಿ ಸ್ವಚ್ಚಗೊಳಿಸಿ ಮಾದರಿಯಾದರು.
ಸರಿಯಾದ ಸಮಯದಲ್ಲಿ ಕಾರ್ಯಕ್ರಮವನ್ನು ಮುಗಿಸಿ ಸಾರ್ವಜನಿಕರೆಲ್ಲಾ ಹೊರಡುವ ವರೆಗೂ ಕಾಯಲಾಯಿತು. ನಂತರ, ರಾತ್ರಿ 10.30 ಕ್ಕೆ ಪ್ರಾರಂಭವಾದ ಈ ಸ್ವಚ್ಚತಾ ಬೆಳಗಿನ ಜಾವ 3 ಗಂಟೆಗಳ ವರೆಗೂ ನಡೆಯಿತು. ಕಾರ್ಯಕ್ರಮದಲ್ಲಿ ಯಶಸ್ಸಿಗೆ ಶ್ರಮಿಸಿದ ತಮ್ಮ ಸುಸ್ತಿನ ನಡುವೆಯೇ, ರಾಮ್ ಪ್ರಸಾತ್ ಮನೋಹರ್ ಸ್ವತಃ ತಾವೇ ಈ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಸಿಬ್ಬಂದಿಗಳಿಗೆ ಪ್ರೋತ್ಸಾಹಿಸಿ, ಸ್ಯಾಂಕಿ ಕೆರೆಯ ಆವರಣ ಸ್ವಚ್ಚವಾಗಿ ಬೆಳಗಿನ ವಾಯುವಿಹಾರಕ್ಕೆ ಸಿದ್ದವಾಗಿರುವಂತೆ ಮಾಡುವಲ್ಲಿ ಯಶಸ್ವಿಯಾದರು.
ಜಲಮೂಲಗಳ ಸಂರಕ್ಷಣೆ ನಮ್ಮ ಜಾಗೃತಿ ಅಭಿಯಾನದ ಪ್ರಮುಖ ಉದ್ದೇಶ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಈ ಪ್ರದೇಶವನ್ನು ಸ್ವಚ್ಚಗೊಳಿಸುವುದು ನಮ್ಮ ಕರ್ತವ್ಯವಾಗಿತ್ತು. ಈ ನಿಟ್ಟಿನಲ್ಲಿ ಸ್ಯಾಂಕಿ ಕೆರೆಯ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆವಹಿಸಲಾಗಿತ್ತು. ಕಾರ್ಯಕ್ರಮ ಸ್ಥಳದಲ್ಲಿ ಕಸದ ಬುಟ್ಟಿಗಳನ್ನು ಇಡಲಾಗಿತ್ತು. ಕೆರೆಯ ಆವರಣ ಅಷ್ಟೇ ಅಲ್ಲದೇ ಸುತ್ತಲಿನ ರಸ್ತೆಗಳನ್ನು ಸ್ವಚ್ಚಗೊಳಿಸಲಾಯಿತು. ಈ ಕಾರ್ಯದಲ್ಲಿ ಜಲಮಂಡಳಿ ಸಿಬ್ಬಂದಿಗಳು, ಬಿಬಿಎಂಪಿ ಸ್ವಚ್ಚತಾ ಕಾರ್ಮಿಕರು ಪಾಲ್ಗೊಳ್ಳುವ ಮೂಲಕ ಇದನ್ನ ಸಾಧ್ಯವಾಗಿಸಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಸಾರ್ವಜನಿಕರಿಗೆ ನಮ್ಮ ಜಲಮಂಡಳಿ ವತಿಯಿಂದ ವಂದನೆಗಳು. ನೀರಿನ ಹಾಗೂ ಜಲಮೂಲಗಳ ಸಂರಕ್ಷಣೆಗೆ ಪಣತೊಡುವ ಮೂಲಕ ನಿಸರ್ಗದ ಅಮೂಲ್ಯ ಸಂಪತ್ತಿನ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಜಲಮಂಡಳಿ ಜೊತೆಗೆ ಕೈಜೋಡಿಸುವಂತೆ ಡಾ ರಾಮ್ ಪ್ರಸಾತ್ ಮನೋಹರ್ ಕರೆ ನೀಡಿದರು.
ಬೆಳಗಿನ ವಾಯುವಿಹಾರಕ್ಕೆ ಬಂದಂತಹ ಹಲವರು ಸ್ವಚ್ಚ ಸುಂದರ ಸ್ಯಾಂಕಿ ಕೆರೆಯನ್ನು ಕಂಡು ಆಶ್ಚರ್ಯಚಕಿತರಾದರು ಹಾಗೆಯೇ ಈ ಕಾರ್ಯವನ್ನು ಶ್ಲಾಘಿಸಿದರು.