ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾರಾಯಣಪುರ ಎಂಬ ಗ್ರಾಮದಲ್ಲಿ ಸಾಲವನ್ನು ಮರಳಿಸಿಲ್ಲ ಎಂಬ ಆರೋಪದ ಮೇಲೆ ಗ್ರಾಮಸ್ಥರು, ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಅವಮಾನಿಸಿರುವ ಪ್ರಕರಣ ವರದಿಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಪೊಲೀಸರಿಂದ ಘಟನೆಯ ಕುರಿತು ಸಮಗ್ರ ಮಾಹಿತಿ ಪಡೆದಿದ್ದಾರೆ. ಅಮಾನವೀಯ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ.
ತಿಮ್ಮರಾಯಪ್ಪಎಂಬುವರು ತಮ್ಮದೇ ಗ್ರಾಮದ ಮುನಿಕಣ್ಣಪ್ಪ ಎನ್ನುವವರ ಬಳಿ ರೂ.80 ಸಾವಿರ ಸಾಲ ಮಾಡಿದ್ದರು. ಸಾಲ ಪಡೆದ ನಂತರ ತಿಮ್ಮರಾಯಪ್ಪ ಕುಟುಂಬವು ಬೆಂಗಳೂರಿಗೆ ವಲಸೆ ಹೋಗಿತ್ತು. ಮಕ್ಕಳ ಟಿಸಿ ಪಡೆಯಲು ಗ್ರಾಮದ ಶಾಲೆಗೆ ತಿಮ್ಮರಾಯಪ್ಪನ ಹೆಂಡತಿ ಸಿರಿಶಾಗೆ ಸಾಲ ಮರುಪಾವತಿಸುವಂತೆ ಸಾಲಗಾರರು ದುಂಬಾಲು ಬಿದ್ದಿದ್ದರು. ಪತಿಯನ್ನು ಕರೆಸುವಂತೆ ಒತ್ತಾಯಿಸಿ ಅವರನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಕುಪ್ಪಂ ಡಿಎಸ್ಪಿ ಬಿ. ಪಾರ್ಥಸಾರಥಿ ತಿಳಿಸಿದ್ದಾರೆ
ಆರು ತಿಂಗಳ ಹಿಂದೆಯೇ ಬೆಂಗಳೂರಿನಲ್ಲಿ ಗಂಡ ನನ್ನನ್ನ ಬಿಟ್ಟು ಹೋಗಿದ್ದಾರೆ. ಅವರ ಸಾಲಕ್ಕೂ ನನಗೂ ಸಂಬಂಧವಿಲ್ಲ ಎಂದು ಸಿರಿಶಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆದರೆ, ದಂಪತಿಗಳು ಇನ್ನೂ ಜತೆಯಲ್ಲೇ ವಾಸಿಸುತ್ತಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿಗಳು ಖಂಡಿಸಿದ್ದು ಅಮಾನವೀಯ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.