ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂತು, ಸಾವಿಗೆ ಕಾರಣ ಏನು ಗೊತ್ತೇ?

Most read

ಬೆಂಗಳೂರು: ಚಿತ್ರನಟ ದರ್ಶನ್, ನಟಿ ಪವಿತ್ರಗೌಡ ಮತ್ತು ತಂಡ ಪಟ್ಟಣಗೆರೆಯ ಖಾಸಗಿ ಶೆಡ್ ಒಂದರಲ್ಲಿ ನಡೆಸಿದ ಕ್ರೌರ್ಯದಿಂದಾಗಿ ಚಿತ್ರದುರ್ಗದ ರೇಣುಕಾಸ್ವಾಮಿ ಮೃತಪಟ್ಟಿದ್ದ. ರೇಣುಕಾಸ್ವಾಮಿಯ ಪೋಸ್ಟ್ ಮಾರ್ಟಂ ವರದಿ ಈಗ ಪೊಲೀಸರ ಕೈ ಸೇರಿದೆ.

ಪಟ್ಟಣಗೆರೆಯ ಶೆಡ್ ನಲ್ಲಿ ಜೂ.8 ರಂದು ರೇಣುಕಾಸ್ವಾಮಿಗೆ ವಿಧವಿಧವಾಗಿ ಟಾರ್ಚರ್ ನೀಡಲಾಗಿತ್ತು. ಹೀಗಾಗಿ ಆತ ಯಾವ ಕಾರಣಕ್ಕಾಗಿ, ಎಲ್ಲಿಗೆ ಏಟು ಬಿದ್ದು ಸತ್ತಿರಬಹುದು ಎಂಬ ಕುತೂಹಲವಿತ್ತು. ಈಗ ಹೊರಬಂದಿರುವ ಫೋಸ್ಟ್ ಮಾರ್ಟಂ ವರದಿ ಎಲ್ಲ ಕುತೂಹಲಕ್ಕೂ ತೆರೆ ಎಳೆದಿದೆ.

ಡಿ ಗ್ಯಾಂಗ್ ನಿಂದ ದಾರುಣವಾಗಿ ಹಿಂಸೆಗೆ ಒಳಗಾದ ರೇಣುಕಾಸ್ವಾಮಿ ಸತ್ತಿರುವುದು ಆತನ ಮರ್ಮಾಂಗಕ್ಕೆ ಬಿದ್ದ ಏಟಿನಿಂದ ಎಂದು ಪೋಸ್ಟ್ ಮಾರ್ಟಂ ವರದಿ ಹೇಳುತ್ತಿದೆ. ಮೃತನ ಮರ್ಮಾಂಗದ ಬಳಿ ರಕ್ತಸ್ರಾವವಾಗಿರುವುದು ಕಂಡುಬಂದಿತ್ತು. ಈ ಭಾಗಕ್ಕೆ ಬಲವಾಗಿ ಏಟು ಬಿದ್ದಿರುವುದರಿಂದ ಆತ ಮೃತಪಟ್ಟಿದ್ದಾನೆ.
ಆರೋಪಿಗಳು ಈಗಾಗಲೇ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ ರೇಣುಕಾಸ್ವಾಮಿ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಪವಿತ್ರಗೌಡ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಗಳ ಮೇಲೆ ಕೆಟ್ಟದಾಗಿ ಕಮೆಂಟ್ ಹಾಕುತ್ತಿದ್ದ. ಪವಿತ್ರಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ. ಆತ ಇತ್ತೀಚಿಗಷ್ಟೇ ತನ್ನ ಮರ್ಮಾಂಗದ ಫೊಟೋ ಕೂಡ ಕಳಿಸಿದ್ದ ಎಂದು ಆರೋಪಿಗಳು ಹೇಳುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಜೂ.8ರಂದು ಆತನನ್ನು ಕಿಡ್ನಾಪ್ ಮಾಡಿಕರೆತಂದಾಗ ಆತನ ಮರ್ಮಾಂಗದ ಮೇಲೆ ಒದೆಯಲಾಗಿತ್ತಲ್ಲದೆ, ಮರದ ತುಂಡುಗಳಿಂದ ಬಲವಾಗಿ ಹೊಡೆಯಲಾಗಿತ್ತು. ಈಗ ಪೋಸ್ಟ್ ಮಾರ್ಟಂ ವರದಿಯ ಪ್ರಕಾರವೂ ಆತನ ಜನನಾಂಗಕ್ಕೆ ಬಿದ್ದ ಏಟು, ರಕ್ತಸ್ರಾವದಿಂದಲೇ ಆತ ಮೃತಪಟ್ಟಿರುವುದು ಖಚಿತವಾಗಿದೆ.

More articles

Latest article