ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಂಟ್ರೋಲ್ ರೂಮ್ ನಲ್ಲಿ ಕುಳಿತು ಪರಿಶೀಲನೆ ನಡೆಸಿದರು.
ಮಳೆ ಅನಾಹುತಗಳನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ ಅವರು ಅಧಿಕಾರಿಗಳ ವಿರುದ್ಧ ಗರಂ ಆದರು. ಮಳೆಗಾಲದಲ್ಲಿ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಶೇ.ನೂರರಷ್ಟು ಅಲ್ಲದಿದ್ದರೂ ಶೇ.50 ರಷ್ಟಾದರೂ ಸಮಸ್ಯೆ ಬಗೆಹರಿಸುವಂತೆ ತಾಕೀತು ಮಾಡಿದರು. ಮಳೆ ಬರಲಿ, ಬಾರದಿರಲಿ ನಾವು ಸಿದ್ಧರಿರಬೇಕು. ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟರು
ಸಿಎಂ, ಡಿಸಿಎಂ ಇಬ್ಬರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆ ಹಾನಿ ವೀಕ್ಷಿಸಿದರು. ಮಳೆ ಹಾನಿ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಮಳೆ ಹಾನಿ ಕುರಿತು ವಿವರಿಸಿದರು.
ಸಾಯಿ ಲೇಔಟ್ ಸೇರಿದಂತೆ ಎಲ್ಲೆಲ್ಲಿ ಸಮಸ್ಯೆ ಆಗಿದೆ ಎಂದು ವಿವರಣೆ ನೀಡಿದರು. ನಂತರ ಮಾತನಾಡಿದ ಸಿಎಂ, ಡಿಸಿಎಂ ಮಾತನಾಡಿ ಬೆಂಗಳೂರಿನಲ್ಲಿ ಇಂದು, ನಿನ್ನೆ 104 ಮಿ.ಮೀ ಮಳೆ ಬಿದ್ದಿದೆ. ಬೆಂಗಳೂರಿನಲ್ಲಿ ತಗ್ಗುಪ್ರದೇಶಗಳನ್ನ ಗುರುತಿಸಿದ್ದೇವೆ. ರಾಜಕಾಲುವೆ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
166 ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ನಡೆದಿದೆ. ಟ್ರಾಫಿಕ್ ಜಾಮ್ ಆಗಲಿದೆ ಎಂದು ಇಂದಿನ ಸಿಟಿ ರೌಂಡ್ಸ್ ರದ್ದುಮಾಡಲಾಗಿದೆ. ನಾಡಿದ್ದು ಇಡೀ ದಿನ ಬೆಂಗಳೂರು ನಗರ ಪ್ರದಕ್ಷಿಣೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಎಲ್ಲೆಲ್ಲಿ ಅನಾಹುತ ಆಗಿದೆ ಅಲ್ಲೆಲ್ಲ ಭೇಟಿ ನೀಡುತ್ತೇವೆ. ಜನರಿಂದ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇವೆ ಎಂದೂ ತಿಳಿಸಿದರು. ಸಾಯಿ ಲೇಔಟ್ ವಸ್ತುಸ್ಥಿತಿ ಅರಿಯಲು ವಿಡಿಯೋ ಕಾನ್ಪರೆನ್ಸ್ ನಡೆಸಿ ಮಹದೇವಪುರ ಚೀಫ್ ಇಂಜಿನಿಯರ್ ಗೆ ಸಲಹೆ ಸೂಚನೆಗಳನ್ನು ನೀಡಿದರು.