ಬೆಂಗಳೂರು: ದೇಶದಲ್ಲೇ ಮೊದಲ ಕ್ವಾಂಟಮ್ ಕಂಪ್ಯೂಟರ್ ನಿರ್ಮಾಣದ ಮೂಲಕ ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನ ಹೊಂದಿದೆ. ಈ ಕ್ಷೇತ್ರದ ಹೆಚ್ಚಿನ ಅಭಿವೃದ್ದಿ ಅಗತ್ಯವಿರುವಂತಹ ಸಹಕಾರ ನೀಡಲು ರಾಜ್ಯ ಸರಕಾರ ಸಿದ್ದವಿದ್ದು ಹೊಸ ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಬೃಹತ್ ಕೈಗಾರಿಕೆ ಹಾಗೂ ಐಟಿಬಿಟಿ ಸಚಿವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ತಿಳಿಸಿದರು
ಇಂದು ವಿಕಾಸಸೌಧದ ಕಚೇರಿಯಲ್ಲಿ ರಾಜ್ಯದ ಕ್ವಾಂಟಮ್ ಕ್ಷೇತ್ರದ ಪ್ರಮುಖ ಕಂಪನಿಗಳಾದ ಕ್ಯೂಪೈ ಎಐ ತಕ್ಷೈ ಲ್ಯಾಬ್ಸ್ ಸೇರಿದಂತೆ ಇತರ ಕಂಪನಿಗಳ ಪ್ರತಿನಿಧಿಗೊಳೊಂದಿಗೆ ಸಭೆ ನಡೆಸಿ ವಿಸ್ತ್ರುತ ಮಾಹಿತಿ ಪಡೆದುಕೊಂಡರು.
ಕ್ವಾಂಟಮ್ ಕ್ಷೇತ್ರದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಹಲವಾರು ಸಾಧನೆಗಳನ್ನು ಕರ್ನಾಟಕ ರಾಜ್ಯ ಸಾಧಿಸಿದೆ. ದೇಶದ ಮೊದಲ ಕ್ವಾಂಟ್ಮ್ ಕಂಪ್ಯೂಟರ್ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ದಿಗೊಂಡಿದ್ದು, ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರಕಾರ ಕ್ವಾಂಟಮ್ ಇನ್ನೋವೇಷನ್ ಎಕೋಸಿಸ್ಟಮ್ ಅಭಿವೃದ್ದಿಗೆ ಅಗತ್ಯ ಸಹಕಾರ ನೀಡುತ್ತಿದೆ. ಅಲ್ಲದೇ, ಐಐಎಸ್ಸ್ಸಿ, ಆರ್ಆರ್ಐ, ಐಸಿಟಿಎಸ್ ನಂತಹ ಜಾಗತಿಕ ಸಂಶೋಧನಾ ಸಂಸ್ಥೆಗಳ ಜೊತೆಗೂಡಿ ಸಂಶೋಧನೆಯನ್ನು ಪ್ರಾರಂಭಿಸಿದೆ.
ಹಾಗೆಯೇ, ನಮ್ಮ ರಾಜ್ಯದಲ್ಲಿರುವಂತಹ ಪ್ರಮುಖ ಸಾರ್ವಜನಿಕ ರಕ್ಷಣಾ ಕಂಪನಿಗಳು ಕ್ವಾಂಟಮ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಹೊಂದಿದೆ. ಇಂತಹ ಅವಕಾಶಗಳು ದೇಶದ ಬೇರೆ ರಾಜ್ಯಗಳಲ್ಲಿ ಕಡಿಮೆ. ಈ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ ರಾಜ್ಯ ಸರಕಾರ ಅಗತ್ಯ ಸಹಕಾರ ನೀಡುತ್ತಿದೆ. ಇಂದು ನಡೆದ ಸಭೆಯಲ್ಲಿ ಕಂಪನಿಗಳ ಪ್ರತಿನಿಧಿಗಳು ಅವರಿಗೆ ಸರಕಾರದಿಂದ ಅಗತ್ಯವಿರುವ ಸಹಕಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಹೊಸ ನೀತಿಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಹಾಗೂ ಐಟಿ ಬಿಟಿ ಸಚಿವರಾದ ಪ್ರಿಯಾಂಖ ಖರ್ಗೆ ಅವರೊಂದಿಗೆ ಸಭೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು.
ಸಚಿವರೊಂದಿಗಿನ ಸಭೆಯಲ್ಲಿ ಕ್ವಾಂಟಮ್ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವಂತಹ ಹೊಸ ನೀತಿ ಸೇರಿದಂತೆ ಮುಂದಿನ ರೋಡ್ ಮ್ಯಾಪ್ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಕೆಸ್ಟೆಪ್ಸ್ ನಿರ್ದೇಶಕರಾದ ಸದಾಶಿವ ಪ್ರಭು, ಕ್ಯೂಪೈಎಐ ಸಿಇಓ ನಾಗೇಂದ್ರ ನಾಗರಾಜ, ಕನಿಷ್ಕ, ಕೆಎಸ್ಟಿಎ ಅಧ್ಯಕ್ಷರಾದ ಪ್ರೊ ರಾಜ ಸಾಹೇಬ್, ಸದಸ್ಸರಾದ ಕೃಷ್ಣ ಮೂರ್ತಿ, ಹಿರಿಯ ಕೆಎಎಸ್ ಅಧಿಕಾರಿಗಳಾದ ವೀರಭದ್ರ ಹಂಚಿನಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.