ಭಾವಗೀತೆಗಳ ಹರಿಕಾರ, ಖ್ಯಾತ ಕವಿ, ನಾಟಕಕಾರ ಎಚ್‌ ಎಸ್‌ ವೆಂಕಟೇಶಮೂರ್ತಿ ಇನ್ನಿಲ್ಲ

Most read

ಬೆಂಗಳೂರು: ಖ್ಯಾತ ಕವಿ,ನಾಟಕಕಾರ ಅನುವಾದಕ ಎಚ್. ಎಸ್.‌ ವೆಂಕಟೇಶ ಮೂರ್ತಿ ನಿಧನಹೊಂದಿದ್ದಾರೆ. 80 ವರ್ಷದ ಅವರು ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.  ಇಂದು ಬೆಳಿಗ್ಗೆ 7 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಎಚ್ ಎಸ್‌ ವಿ ಅವರಿಗೆ  ನಾಲ್ವರು ಪುತ್ರರಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ ವೆಂಕಟೇಶಮೂರ್ತಿ ಅವರು, 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಆರಂಭಿಸಿದರು.  ಮೂರು ದಶಕಗಳ ಕಾಲ ಅಲ್ಲಿಯೇ ಕಾರ್ಯನಿರ್ವಹಿಸಿ 2000ನೇ ಇಸವಿಯಲ್ಲಿ ನಿವೃತ್ತರಾಗಿದ್ದರು.

ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ ಸೇರಿ ಮೊದಲಾದ ಪ್ರಕಾರಗಳಲ್ಲಿ ಅವರು ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಆದರೂ ಅವರು ಭಾವಿಗೀತೆಗಳಿಂದಲೇ ಪ್ರಸಿದ್ಧಿ ಪಡೆದಿದ್ದರು.

ಕ್ರಿಯಾಪರ್ವ, ಒಣಮರದ ಗಿಳಿಗಳು, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲುಹಬ್ಬ, ನದಿತೀರದಲ್ಲಿ, ಉತ್ತರಾಯಣ ಮತ್ತು ಕನ್ನಡಿಯ ಸೂರ್ಯ, ವೈದೇಹಿ ಮತ್ತು ಇತರ ಕವನಗಳು ಮೊದಲಾದುವು ಇವರ ಮುಖ್ಯ ಕಾವ್ಯಕೃತಿಗಳು. ಅಗ್ನಿವರ್ಣ, ಚಿತ್ರಪಟ, ಉರಿಯ ಉಯ್ಯಾಲೆ, ಮಂಥರೆ ಸೇರಿ ವಿವಿಧ ನಾಟಕಗಳು, ತಾಪಿ, ಅಮಾನುಷರು, ಕದಿರನಕೋಟೆ, ಅಗ್ನಿಮುಖಿ, ವೇದವತಿ ನದಿಯಲ್ಲ ಕಾದಂಬರಿಗಳನ್ನು ರಚಿಸಿದ್ದಾರೆ. ವಿವಿಧ ಪ್ರಶಸ್ತಿ ಪುರಸ್ಕೃತರಾದ ಅವರು, ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಕವಿಗಳು ಸಾಂಸಕೃತಿಕ ಲೋಕದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇವರ ಕೆಲವು ಪ್ರಸಿದ್ಧ ಭಾವಗೀತೆಗಳ ಸಾಲುಗಳು ಹೀಗಿವೆ…

 ಲೋಕದ ಕಣ್ಣಿಗೆ ರಾಧೆಯು ಕೂಡ…

ತೂಗುಮಂಚದಲ್ಲಿ ಕೂತು…

ಹುಚ್ಚುಖೋಡಿ ಮನಸು…

ಅಮ್ಮ ನಾನು ದೇವರಾಣೆ…

ಆ ನೀಲಿ ಕೊಳವನ್ನು ಪ್ರೀತಿಸುವೆ ನಾನು…

ಹೇಗೆ ನಿನ್ನ ಹುಡುಕಲಿ ವಿಳಾಸವಿಲ್ಲದೆ

 ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ…

ಎಲ್ಲಿರುವೆಯೊ ಘನಶಾಮ ತೊರೆದು ರಾಧೆಯ…

ಅಕ್ಕ ನನ್ನ ದುಃಖವನ್ನು ಹೇಗೆ ಹೇಳಲಿ…

ಭಾವಬೃಂಗ ಹೂದೋಟದ ಬೇಲಿಯ…

*ಮಾರ ಸುಂದರ ಆಕಾರ ಸುಂದರ…

*ಸಾವಿರದಳ ಕಮಲಿನಿ ಓ ಭಾರತಿ…

*ದಾರಿ ಮರೆತಿರುವಾಗ ಊರು ಬಲು ದೂರ…

More articles

Latest article