ಪ್ರಧಾನಿ ಮೋದಿ ಸರ್ಕಾರ ರೈತರ ಕತ್ತು ಹಿಸುಕುತ್ತಿದೆ: ಅಂಕಿ ಅಂಶಗಳ ಸಹಿತ ವಿವರಿಸಿದ ಕಾಂಗ್ರೆಸ್‌ ಮುಖಂಡ ಸುರ್ಜೇವಾಲ

Most read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನೀತಿಯಿಂದಾಗಿ ಕರ್ನಾಟಕ ಮತ್ತು ದೇಶದ ತೊಗರಿ ಬೇಳೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರದ ಆಮದು ನೀತಿಯಿಂದಾಗಿ ಕರ್ನಾಟಕದ ತೊಗರಿ ಬೆಳೆಗಾರರು ವಾರ್ಷಿಕವಾಗಿ 1,550 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸಚಿವರಾದ ರಾಜ್ಯದ ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಸ್ವಯಂ ಘೋಷಿತ ರೈತ ಪುತ್ರ ಎಚ್.ಡಿ.ಕುಮಾರಸ್ವಾಮಿ ಏಕೆ ಮೌನ ತಾಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಮೋಜಾಂಬಿಕ್, ಮಯನ್ಮಾರ್, ಕೆನಡಾ, ಆಸ್ಟ್ರೇಲಿಯಾ ದೇಶದ ತೊಗರಿ ರೈತರಿಗೆ ಬಿಜೆಪಿ ಸರ್ಕಾರ ಉತ್ತೇಜನ ನೀಡುತ್ತಿದೆ. ಇಡೀ ಪ್ರಪಂಚದ ಯಾವುದೇ ದೇಶದಿಂದ ತೊಗರಿಯನ್ನು ಆಮದು ಮಾಡಿಕೊಳ್ಳಬಹುದು ಎಂದು ನಿಯಮ ರೂಪಿಸಲಾಗಿದೆ. ಕಳೆದ ಐದು ವರ್ಷಗಳಿಂದ ಇದೇ ವಂಚನೆ ಎಸಗಲಾಗುತ್ತಿದೆ.  ಹಾಗಾದರೆ ಬಿಜೆಪಿ ಸರ್ಕಾರಕ್ಕೆ ದೇಶದ, ಕರ್ನಾಟಕದ ರೈತರು ಬೇಡವೇ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

2022-23 ರಲ್ಲಿ ಮೋದಿ ಸರ್ಕಾರ 24.90 ಲಕ್ಷ ಕೋಟಿ ಆಹಾರ ಧಾನ್ಯಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದೆ. 2023-24 ರಲ್ಲಿ 48 ಲಕ್ಷ ಕೋಟಿ ಮತ್ತು ಈ ವರ್ಷ 67 ಲಕ್ಷ ಕೋಟಿ ರೂ ಮೌಲ್ಯದ ಧಾನ್ಯಗಳನ್ನು ಆಮದು ಮಾಡಿಕೊಂಡಿದ್ದು, ಇದು ದೇಶದ ರೈತರಿಗೆ ಮಾಡುತ್ತಿರುವ ವಂಚನೆಯಲ್ಲವೇ? ಮೊಜಂಬಿಕ್ ದೇಶದಿಂದ 2 ಲಕ್ಷ ಕೋಟಿ ಟನ್ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ಎಂದು ಸುರ್ಜೆವಾಲಾ ಆಪಾದಿಸಿದ್ದಾರೆ.

ಮಹಾರಾಷ್ಟ್ರ ಹಾಗೂ ಕರ್ನಾಟಕ ಶೇ.50 ರಷ್ಟು ತೊಗರಿ ಉತ್ಪಾದನೆ ಮಾಡುತ್ತವೆ. ಬೀದರ್, ಕಲಬುರ್ಗಿ, ರಾಯಚೂರು ಸೇರಿದಂತೆ ಮಹಾರಾಷ್ಟ್ರದ ಲಾಥೂರ್ ವರೆಗೆ ತೊಗರಿ ಬೆಳೆಗಾರರು ಇದ್ದಾರೆ.  ಆಗಸ್ಟ್ 14, 2019 ರಲ್ಲಿ ಕಲಬುರ್ಗಿ ತೊಗರಿಗೆ ಜಿಐ ಟ್ಯಾಗ್ ಸಿಕ್ಕಿದೆ. ಕರ್ನಾಟದ ತೊಗರಿಗೆ ವಿಶ್ವಮಾನ್ಯತೆ ದೊರೆತಿದೆ. ಆದರೆ ಬಿಜೆಪಿ ರೈತರನ್ನು ಬೀದಿಗೆ ನೂಕಿದೆ. 2024- 25 ರಲ್ಲಿ ತೊಗರಿಗೆ ಇದ್ದ ಬೆಂಬಲ ಬೆಲೆ ಕ್ವಿಂಟಾಲ್ ಗೆ 7,550 ರೂಪಾಯಿ ಇತ್ತು. 2025-26 ರಲ್ಲಿ 8,000 ರೂಪಾಯಿ ಬೆಂಬಲ ಬೆಲೆಯನ್ನು ನಿಗಧಿ ಮಾಡಲಾಗಿದೆ. ಆದರೆ 2024-25 ರಲ್ಲಿ ಕರ್ನಾಟಕದ ರೈತರು 5,500-6000 ಕ್ಕೆ ಮಾರಾಟ ಮಾಡಿದ್ದಾರೆ. ಅಂದರೆ ಪ್ರತಿ ರೈತನಿಗೆ  ರೂ.1000 ದಿಂದ 1,500 ರೂಪಾಯಿ ಹಣ ನಷ್ಟವಾಗಿದೆ. ಈ ವರ್ಷದಲ್ಲಿ ಕರ್ನಾಟಕದಲ್ಲಿ ಸುಮಾರು 10 ಲಕ್ಷ ಕ್ವಿಂಟಾಲ್ ತೊಗರಿ ಬೆಳೆಯಲಾಗಿದ್ದು, ರಾಜ್ಯದ ರೈತರು 1,550 ಸಾವಿರ ಕೋಟಿ ಹಣ ಕಳೆದುಕೊಂಡಿದ್ದಾರೆ ಎಂದು ಅಂಕಿಅಂಶ ನೀಡಿದರು.

ಕರ್ನಾಟಕ ಸರ್ಕಾರ 11, 032 ಮೂಲಬೆಲೆಯೊಂದಿಗೆ 16,548 ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ತೊಗರಿಗೆ ಘೋಷಣೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಆಗ್ರಹ ಮಾಡಿದ್ದರು. ಆದರೂ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಎಸಗುತ್ತಿದೆ ಎಂದರು.

ದೇಶದ ರೈತರು 276 ಲಕ್ಷ ಕೋಟಿ ಟನ್ ಬೇಳೆ ಕಾಳುಗಳ ಉತ್ಪಾದನೆ ಮಾಡಿದ್ದಾರೆ. ಕುಚೋದ್ಯವೆಂದರೆ ಮೋದಿ ಸರ್ಕಾರ ಖರೀದಿ ಮಾಡಿರುವುದು 1.20 ಲಕ್ಷ ಕೋಟಿ ಟನ್ ಮಾತ್ರ. ಅಂದರೆ 274 ಲಕ್ಷ ಕೋಟಿ ಟನ್ ಬೆಳೆ ಎಂಎಸ್ ಪಿ ವ್ಯಾಪ್ತಿಗೆ ಒಳಪಟ್ಟಿಲ್ಲಎಂಎಸ್ ಪಿ ಎನ್ನುವುದು ರೈತರಿಗೆ ಹಕ್ಕಿಯ ಹಿಕ್ಕೆಯಂತಾಗಿದೆ ಎಂದು ಹೇಳಿದರು.

ಸಂಸದ ತೇಜಸ್ವಿ ಕರ್ನಾಟಕ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, ಮೊದಲು ಈತ ಅಮೆರಿಕಾದಲ್ಲಿ ಅನುಭವಿಸಿದ ಅವಮಾನದ ಬಗ್ಗೆ ಉತ್ತರ ನೀಡಲಿ. ಇದು ಅವರಿಗೆ ಮಾತ್ರ ಆದ ಅವಮಾನವಲ್ಲ, ದೇಶಕ್ಕಾದ ಅಪಮಾನ. ಅಪಮಾನ ಅನುಭವಿಸಿದರೂ ಸುಮ್ಮನಿರುವ ಬಗ್ಗೆ ಕೇಳಿ ಎಂದರು.

ಶಾಸಕರ ಕ್ಷೇತ್ರದ ಪ್ರಗತಿ ಸೇರಿದಂತೆ ಗ್ಯಾರಂಟಿ ಯೋಜನೆಗಳು ಹೇಗೆ ಜನರಿಗೆ ತಲುಪಿವೆ ಎಂದು ತಿಳಿದುಕೊಳ್ಳುವುದು. ಮುಂದಿನ ವಿಧಾನಸಭಾ ಚುನಾವಣೆ ಬಗ್ಗೆ ಸಂಘಟನೆ ವಿಚಾರ ಚರ್ಚೆ ನಡೆಸಲಾಗುತ್ತಿದೆ. ನಮ್ಮ ಶಾಸಕರು ಒಂದಷ್ಟು ಇರುಸು ಮುರುಸು ಅನುಭವಿಸುತ್ತಿದ್ದಾರೆ. ಇದನ್ನು ಬರವಣಿಗೆ ರೂಪದಲ್ಲಿ ನೀಡಿ ಎಂದು ಹೇಳಿದ್ದೇನೆ ಎಂದರು.

More articles

Latest article