ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿರುವ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೊ ಇಂಡಿಯಾ 2025ಕ್ಕೆ ಇಂದು ಕೊನೆಯ ದಿನ. ಏರ್ ಶೋ ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದ್ದು ಈ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ. ಇಂದು ಬೆಳಿಗ್ಗೆಯೇ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು. ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ಬಳ್ಳಾರಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ತೆರಳುವವರಿಗೆ ದಟ್ಟಣೆಯ ಬಿಸಿ ತಟ್ಟಿದೆ.
ಇಂದೂ ಸಹ ವೈಮಾನಿಕ ಪ್ರದರ್ಶನ ಹಾಗೂ ಪ್ರದರ್ಶನ ಮಳಿಗೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲಲ್ಪಿಸಲಾಗಿದೆ. ಹೀಗಾಗಿ, ಸಾವಿರಾರು ನಾಗರೀಕರು ಏರ್ ಶೋ ನೋಡಲು ವಾಯುನೆಲೆಯತ್ತ ಧಾವಿಸುತ್ತಿದ್ದಾರೆ. ಇದೇ ಮಾರ್ಗದ ಮೂಲಕ ದೂರದ ಊರುಗಳಿಗೆ ತೆರಳುವವರು ಬೆಂಗಳೂರು -ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 44ರ ಬದಲು ಹೆಬ್ಬಾಳ- ಹೆಣ್ಣೂರು-ಬಾಗಲೂರು ಮಾರ್ಗ ಬಳಸುವಂತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಮನವಿ ಮಾಡಿದ್ದಾರೆ.