ಮೈಸೂರು: ಭಾರತ ದೇಶದಲ್ಲಿದ್ದುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುವವರನ್ನು ನಾನು ಬೆಂಬಲಿಸುವುದಿಲ್ಲ. ನನ್ನ ಕುಟುಂಬದವರು ಕೂಗಿದರೂ ಅವರ ಮೇಲೆ ಕ್ರಮವಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ವಿಮಾನನಿ ಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ಹಾಗೆ ಕೂಗುವವರು ಏಕೆ ಕೂಗುತ್ತಿದ್ದಾರೆ ಎಂಬುದಕ್ಕೆ ನೂರಾರು ಕಾರಣಗಳಿವೆ. ಅವರ ಮೇಲೆ ಆಗಿರುವ ಅತ್ಯಾಚಾರಗಳೇನು ಕಡಿಮೆಯೇ? ಅದನ್ನೂ ನಾವು ನೋಡಬೇಕಲ್ಲವೇ? ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ವಿವಿಧ ಭಾಗಗಳಲ್ಲಿ ಅಂತಹ ಘಟನೆಗಳು ನಡೆದಿವೆ. ಯಾಕೆ ನಡೆಯುತ್ತಿದೆ ಎಂಬುದಕ್ಕೆ ನಾನು ಹೊಣೆಗಾರ ಅಲ್ಲ ಎಂದು ಹೇಳಿದರು.
ವಿರೋಧಿಗಳನ್ನು ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. 1971ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಪಾಕಿಸ್ತಾನದವರ ಮಂಡಿಯೂರಿಸಿದ್ದರು. ಈಗ ಲಕ್ಷಾಂತರ ಜನರ ಮಂಡಿಯೂರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತೀರ್ಮಾನಗಳಿಗೆ ನಮ್ಮ ಬೆಂಬಲವಿದೆ. ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆಯಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಕ್ಕಾಗಲೂ ಇದನ್ನೇ ಹೇಳಿದ್ದೇನೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ಬದಲಾಗುವುದಿಲ್ಲ ಎಂದು ಹೇಳಿದರು.