ಬೆಂಗಳೂರು: ಅಂಗಾಂಗ ದಾನ ಕಾರ್ಯದಲ್ಲಿ ಕರ್ನಾಟಕ 2025ನೇ ಸಾಲಿನಲ್ಲಿ ದೇಶದಲ್ಲೇ 3ನೇ ಸ್ಥಾನ ಪಡೆದಿದೆ. ಕಳೆದ ವರ್ಷ 198 ದಾನಿಗಳಿಂದ 564 ಅಂಗಾಂಗಗಳ ಕಸಿ ಮಾಡುವ ಮೂಲಕ ನೂರಾರು ಜೀವಗಳಿಗೆ ಮರುಜನ್ಮ ಸಿಕ್ಕಿದಂತಾಗಿದೆ. ಇದು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ! ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು ಅಂಕಿಅಂಶಗಳ ವಿವರ ನೀಡಿದ್ದಾರೆ.
ಮುಖ್ಯ ಅಂಕಿ-ಅಂಶಗಳು (2025):
ಒಟ್ಟು ದಾನಿಗಳು: 198
ಕಿಡ್ನಿ: 306
ಲಿವರ್: 167
ಹೃದಯ: 50
ಶ್ವಾಸಕೋಶ: 29
ಕಣ್ಣು (Cornea): 288
ರಾಜ್ಯದಲ್ಲಿ 2016 ರಿಂದ ಈವರೆಗೂ ದಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅಂಗಾಂಗ ದಾನವು ಕೇವಲ ಒಂದು ಕೊಡುಗೆಯಲ್ಲ, ಅದು ಮತ್ತೊಬ್ಬರಿಗೆ ನೀಡುವ ಜೀವದಾನ. ಹಾಗಾಗಿ ಇಡೀ ರಾಜ್ಯದ ಜನತೆಯಲ್ಲಿ ವಿನಂತಿಸುವೆ, ‘ಜೀವಸಾರ್ಥಕತೆ’ ಕಾರ್ಯಕ್ರಮದೊಂದಿಗೆ ಕೈಜೋಡಿಸೋಣ ಅಂಗಾಂಗ ದಾನ ಮಾಡುವ ಮೂಲಕ ಸಾವಿನ ನಂತರವೂ ಜೀವಂತವಿರೋಣ ಹಾಗೂ ಜೀವ ಉಳಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

