ಆಪರೇಷನ್ ಎಲಿಫೆಂಟ್: ಮತ್ತೊಂದು ನರಹಂತಕ ಆನೆ ‘ಸೀಗೆ’ ಸೆರೆ

Most read

ಸಕಲೇಶಪುರ: ಮೂರನೇ ದಿನದ ಪುಂಡಾನೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿದ್ದು ಮತ್ತೊಂದು ದೈತ್ಯಾಕಾರದ ನರಹಂತಕ ಕಾಡಾನೆ ಸೆರೆಯಾಗಿದೆ.

ಸಕಲೇಶಪುರ ತಾಲ್ಲೂಕಿನ, ಹೆತ್ತೂರು ಹೋಬಳಿ ನಿಡಿಗೆರೆ ಅರಣ್ಯ ವ್ಯಾಪ್ತಿಯಲ್ಲಿ ಸೀಗೆ ಹೆಸರಿನ ಒಂಟಿಸಲಗವನ್ನು ಅರಣ್ಯ ಇಲಾಖೆ ತಂಡ ಸೆರೆ ಹಿಡಿದಿದೆ.

ನಿನ್ನೆ ಮಧ್ಯಾಹ್ನ ಏಳು ಕಾಡಾನೆಗಳೊಂದಿಗೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಆಪರೇಷನ್‌ ಎಲಿಫೆಂಟ್ ಟೀಂ ಆರಂಭಿಸಿತ್ತು. ಆದರೆ ಸೀಗೆ ಕಾಡಾನೆ ಕಾಡಿನೊಳಗೆ ಸೇರಿಕೊಂಡಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಇಂದು ಬೆಳಿಗ್ಗೆಯಿಂದಲೇ ನರಹಂತಕ ಸೀಗೆ ಕಾಡಾನೆಯನ್ನು ಟ್ರ್ಯಾಕ್ ಮಾಡಿದರು.

ನಿಡಿಗೆರೆ ಅರಣ್ಯ ಪ್ರದೇಶದಲ್ಲಿದ್ದ ನರಹಂತಕ ಕಾಡಾನೆ ಇರುವುದನ್ನು ಖಚಿತಪಡಿಸಿಕೊಂಡು ಬಿಕ್ಕೋಡು ಬಳಿಯಿರುವ ತಾತ್ಕಾಲಿಕ ಶಿಬಿರದಿಂದ ಲಾರಿಗಳ ಮೂಲಕ ನಿಡಿಗೆರೆ ಅರಣ್ಯ ಪ್ರದೇಶಕ್ಕೆ ಸಾಕಾನೆಗಳನ್ನು ಸ್ಥಳಾಂತರ ಮಾಡಿ ಆಪರೇಷನ್ ಎಲಿಫೆಂಟ್ ಟೀಂ ಕಾರ್ಯಾಚರಣೆ ಆರಂಭಿಸಿತು.

ಮ.12:20 ಕ್ಕೆ ವೈದ್ಯರ ಸೀಗೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಡಾರ್ಟ್ ಆದ ನಂತರವೂ ಕಿಲೋಮೀಟರ್‌ಗಟ್ಟಲೆ ಓಡಿದ ಸೀಗೆ ಮ.12.38 ಕ್ಕೆ ಪ್ರಜ್ಞೆತಪ್ಪಿ ಬಿತ್ತು. ಕಾಡಾನೆ ಆರೈಕೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಅದರ ಪ್ರಜ್ಞೆ ಮರಳಿದ ನಂತರ ಬಂಧಿಸಿ ಸ್ಥಳಾಂತರ ಕಾರ್ಯ ಆರಂಭಿಸಿದರು.

ಅಭಿಮನ್ಯು ನೇತೃತ್ವದಲ್ಲಿ ನಡೆದ ಆಪರೇಷನ್ ನಲ್ಲಿ ಹರ್ಷ, ಪ್ರಶಾಂತ, ಕರ್ನಾಟಕ ಭೀಮ, ಮಹೇಂದ್ರ ಧನಂಜಯ, ಅಶ್ವತ್ಥಾಮ ಭಾಗವಹಿಸಿದ್ದವು.

ಇಂದು ಸೆರೆಯಾದ ಸೀಗೆ ಇಬ್ಬರನ್ನು ಬಲಿ ಪಡೆದಿದ್ದಲ್ಲದೇ ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿ ಆತಂಕ ಸೃಷ್ಟಿಸಿತ್ತು. ಆಕ್ರಮಣಕಾರಿ ಸೀಗೆ ಸೆರೆಯಿಂದ ಮಲೆನಾಡು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

More articles

Latest article