ಬೆಂಗಳೂರು: ಇಬ್ಬರು ಮಹಿಳೆಯರನ್ನು ತಬ್ಬಿಕೊಂಡು ಬಲವಂತವಾಗಿ ಚುಂಬಿಸಿ ಪರಾರಿಯಾಗಿದ್ದ ಆರೋಪಿಯನ್ನು ಪುಲಿಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಣಸವಾಡಿ ನಿವಾಸಿ ಮದನ್ (37) ಬಂಧಿತ ಆರೋಪಿ. ಸ್ನಾತಕೋತ್ತರ ಪದವೀಧರನಾದ ಈತ ಜೂನ್ 6ರಂದು ಕೃತ್ಯ ಎಸಗಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣಾ ವ್ಯಾಪ್ತಿಯ ಉದ್ಯಾನವೊಂದರಲ್ಲಿ ಮಹಿಳೆಯೊಬ್ಬರು ವಾಯುವಿಹಾರ ನಡೆಸುತ್ತಿದ್ದಾಗ ಆರೋಪಿ ಮಹಿಳೆಯನ್ನು ಆರೋಪಿ ಬಲವಂತವಾಗಿ ತಬ್ಬಿಕೊಂಡು ಚುಂಬಿಸಿದ್ದ. ಅದೇ ದಿನ ಸಂಜೆ ಅಂಗಡಿಯೊಂದರಲ್ಲಿ ವ್ಯಾಪಾರ ಮಾಡುತ್ತಾ ನಿಂತಿದ್ದ ಮಹಿಳೆಯೊಂದಿಗೂ ಇದೇ ರೀತಿ ವರ್ತಿಸಿದ್ದ. ಪ್ರಕರಣದಿಂದ ಹೆದರಿಕೊಂಡಿದ್ದ ಇಬ್ಬರೂ ಮಹಿಳೆಯರು ಜೋರಾಗಿ ಕೂಗಿಕೊಂಡಿದ್ದರು. ಸ್ಥಳೀಯರು ಆತನನ್ನು ಹಿಡಿಯಲು ಮುಂದಾದಾಗ ಆರೋಪಿ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಆರೋಪಿ ಪರಾರಿಯಾಗುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆ ಆಗಿತ್ತು. ಈ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ಪೋಷಕರ ಜತೆಗೆ ಬಾಣಸವಾಡಿಯಲ್ಲಿ ವಾಸಿಸುತ್ತಿದ್ದಾನೆ. ಈ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ವಿಚಿತ್ರವಾಗಿ ವರ್ತಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಯನ್ನು ಪರೀಕ್ಷಿಸಿದ್ದ ವೈದ್ಯರು, ಮದನ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಹೇಳಿದ್ದರು ಎಂದು ಪೋಷಕರು ತಿಳಿಸಿದ್ದಾರೆ.