Sunday, September 8, 2024

ಅಕ್ರಮ ಆಸ್ತಿ ಪ್ರಕರಣದಲ್ಲಿ ಆರು ಸರ್ಕಾರಿ ಅಧಿಕಾರಿಗಳ ಮೇಲೆ ಕರ್ನಾಟಕ ಲೋಕಾಯುಕ್ತ ದಾಳಿ

Most read

ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ ಆರು ಸರ್ಕಾರಿ ಅಧಿಕಾರಿಗಳ ಮೇಲೆ ಸುಮಾರು 30 ಸ್ಥಳಗಳಲ್ಲಿ ತಮ್ಮ ಆದಾಯ ಮೀರಿ ಆಸ್ತಿಯನ್ನು ಸಂಗ್ರಹಿಸಿದ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. 

ಪಿಡಬ್ಯೂಡಿ (PWD), ಪಿಡಿಓ (PDO) , ಬೆಸ್ಕಾಂ (BESCOM), ಕೆಆರ್​ಐಡಿಎಲ್ (KRIDL)​ ಹಾಗೂ ಪಂಚಾಯತ್ ಸದಸ್ಯ ಮತ್ತು ಟೌನ್ ಪ್ಲ್ಯಾನಿಂಗ್ ಅಧಿಕಾರಿ​ಗೆ ಸೇರಿದ ಜಾಗಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಕುಂದಣ ಪಿಡಿಒ ಪದ್ಮನಾಭ​ ಅವರಿ​ಗೆ ಸೇರಿದ​​​​ ಮೂರು ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ. ಜೊತೆಗೆ ದಾಬಸ್​ಪೇಟೆ ಹಾಗೂ ತುಮಕೂರಿನಲ್ಲಿ ಸಹ ಪದ್ಮನಾಭ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ಮುಂದುವರೆದಿದೆ. ಅದೇ ರೀತಿ ವಿಜಯನಗರ ಜಿಲ್ಲೆಯ ಬೆಸ್ಕಾಂ ಜನರಲ್ ಮ್ಯಾನೇಜರ್ ನಾಗರಾಜ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ನಾಗರಾಜ್ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ, ಪೆಟ್ರೋಲ್ ಬಂಕ್, ಮನೆ, ಜಮೀನು ಹೊಂದಿರುವ ಆರೋಪವಿದೆ.

ಬೆಸ್ಕಾಂ ಚೀಫ್​ ಜನರಲ್​​​ ಮ್ಯಾನೇಜರ್​​ ಎಂ.ಎಲ್. ನಾಗರಾಜ್ ಅವರಿಗೆ ಸೇರಿದ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ​​ ಲೋಕಾಯುಕ್ತ ದಾಳಿ ವೇಳೆ 9 ನಿವೇಶನ, ಮೂರು ಮನೆ, ಎರಡು ಪೆಟ್ರೋಲ್ ಬಂಕ್​, ಶಿಕ್ಷಣ ಸಂಸ್ಥೆ ಮತ್ತು ನಾಲ್ಕು ಕಡೆ ಕೃಷಿ ಜಮೀನು ಹೊಂದಿರುವ ದಾಖಲೆ ಪತ್ತೆಯಾಗಿದೆ. ಕಳೆದ ಕೆಲ ದಿನಗಳ ಹಿಂದೆ ನಾಗರಾಜ್​ 7.50 ಲಕ್ಷ ರೂ. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾಸಲುಪುರ ಗ್ರಾಮದಲ್ಲಿರುವ ಟೌನ್ ಅಂಡ್‌ ರೂರಲ್ ಪ್ಲ್ಯಾನಿಂಗ್ ಜಂಟಿ ನಿರ್ದೇಶಕ‌ ಮಂಜೇಶ್ ಅವರ ಮಂಜೇಶ್ ಫಾರ್ಮ್​ಹೌಸ್ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಮಂಜೇಶ್ ಆನೇಕಲ್​ನಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸ್ತಿದ್ದಾರೆ. 

ಅಕ್ರಮ ಆಸ್ತಿ ಗಳಿಕೆ‌‌ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ‌ ಚೆನ್ನೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ಮನೆ ಮೇಲೆ ಲೋಕಾಯುಕ್ತ ಡಿವೈಎಸ್​ಪಿ ಗೌತಮ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅಧಿಕಾರಿಗಳು ಕಳೆದ 1 ಗಂಟೆಯಿಂದ ದಾಖಲೆ ಪರಿಶೀಲಿಸುತ್ತಿದ್ದಾರೆ.

More articles

Latest article