ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೋಟೆ ಕಲ್ಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಜಾನಕಿ ದೇವರ ಹೆಸರಿನಲ್ಲಿ ದೇವಸ್ಥಾನ ಸೃಷ್ಟಿಸಿ ಮುಜರಾಯಿ ಇಲಾಖೆಯಿಂದ ನೇಮಕಾತಿ ಪಡೆದು, ಲಕ್ಷಾಂತರ ಹಣ ಸಂಭಾವನೆ ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ದೇವರ ಹೆಸರಿನಲ್ಲಿ ದೇವರು ಮತ್ತು ಸರ್ಕಾರಕ್ಕೆ ವಂಚಿಸಿದವರು ಸಹೋದರರಾದ ರಾಮಾಚಾರ್ ಹಾಗೂ ಚನ್ನಕೇಶವಚಾರ್.
ಇವರ ವಂಚನೆಯನ್ನು ತಿಳಿದು ಟ್ರಸ್ಟ್ ಹಾಗೂ ಗ್ರಾಮಸ್ಥರು ಇವರನ್ನು ಪ್ರಶ್ನಿಸಿದ್ದಾರೆ. ಆಗ ಇವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ರಾತ್ರೋರಾತ್ರಿ ಗ್ರಾಮದ ಹೊರವಲಯದಲ್ಲಿ ಜಾನಕಿ ದೇವಾಲಯ ನಿರ್ಮಾಣ ಮಾಡಿದ್ದಾರೆ. ಮುಜರಾಯಿ ಇಲಾಖೆಗೆ ಇದು ಜಾನಕಿ ದೇವಾಲಯ ಎಂದೂ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇವರಿಬ್ಬರೂ ಪ್ರತಿ ತಿಂಗಳು ಸರ್ಕಾರದಿಂದ ಸಂಬಳ ಪಡೆಯುತ್ತಿದ್ದಾರೆ. ರಾತ್ರೋರಾತ್ರಿ ಸೃಷ್ಟಿಯಾದ ಜಾನಕಿ ದೇವರ ದಾಖಲೆಗಳನ್ನು ಅದಲು ಬದಲು ಮಾಡಲು ವಿಎ, ಆರ್ ಐ ಹಾಗೂ ತಹಶಿಲ್ದಾರ್ ಲಂಚ ಪಡೆದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿರುವ ನೂರಾರು ವರ್ಷಗಳ ಇತಿಹಾಸ ಇರುವ ಚನ್ನಕೇಶವ ಸ್ವಾಮಿ ದೇವಾಲಯವನ್ನು ಬಳಸಿಕೊಂಡು, ಮುಜರಾಯಿ ಇಲಾಖೆಗೆ ಜಾನಕಿ ದೇವಾಲಯ ಎಂದು ನಕಲಿ ದಾಖಲೆ ಕೊಟ್ಟು ವಂಚನೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ಗ್ರಾಮದ ಇಂಜಿನಿಯರ್ ನಾರಾಯಣಸ್ವಾಮಿ ಅವರು ಚನ್ನಕೇಶವಸ್ವಾಮಿ ಟೆಂಪಲ್ ಸೇವಾ ಟ್ರಸ್ಟ್ ನೋಂದಣಿ ಮಾಡಿಸಿ ರೂ. 9 ಕೋಟಿಗೂ ಹೆಚ್ಚು ಹಣದಲ್ಲಿ ಈ ಚನ್ನಕೇಶವ ದೇವಾಲಯವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಟ್ರಸ್ಟ್ ರಚನೆ ಆದಾಗಿನಿಂದಲೂ ದೇವಾಲಯದ ಅಭಿವೃದ್ಧಿ ಸಹಿಸದ ಇದೇ ಗ್ರಾಮದ ಲಚ್ಚಿರೆಡ್ಡಿ ನವೀನ್ ರೆಡ್ಡಿ, ಶಂಕರ್ ಪ್ರಸಾದ್, ಚನ್ನಕೇಶವಚಾರ್, ರಾಮಚಾರ್ ಅವರು ಈ ಅಕ್ರಮಗಳನ್ನು ನಡೆಸಿದ್ದಾರೆ.
ಚನ್ನಕೇಶವಸ್ವಾಮಿ ದೇವಾಲಯ ನಾಲ್ಕು ಊರಿಗೆ ಸೇರಿದ್ದು, ಈಗಿರುವ ಟ್ರಸ್ಟ್ ಯಥಾ ಪ್ರಕಾರ ದೇವಾಲಯವನ್ನು ನಡೆಸಿಕೊಂಡು ಹೋಗಲಿಬೇಕು ಎಂದು ಬಹುತೇಕ ಗ್ರಾಮಸ್ಥರ ಬೇಡಿಕೆಯಾಗಿದೆ. ಈ ಎಲ್ಲ ಘಟನೆಗಳಿಗೆ ಕಾರಣರಾದ ತಹಸೀಲ್ದಾರ್ , ವಿಎ, ಆರ್ ಐ, ಚನ್ನಾಕೇಶವಚಾರ್ ಸೇರಿದಂತೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.