ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿಲ್ಲ, ಆತಂಕವೂ ಬೇಡ; ಸಚಿವ ಡಾ. ಶರಣ್ ಪ್ರಕಾಶ್ ಆರ್‌. ಪಾಟೀಲ್

Most read

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಸರಾಸರಿ ಹೃದಯಾಘಾತದ ಪ್ರಕರಣಗಳು ಕಳೆದ ವರ್ಷದಷ್ಟೇ ಇವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವ ಡಾ. ಶರಣ್ ಪ್ರಕಾಶ್ ಆರ್‌. ಪಾಟೀಲ್ ತಿಳಿಸಿದರು.

ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ವಿಕಾಸ ಸೌಧದಲ್ಲಿ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಸರ್ಕಾರ ಈ ವಿಷಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಆತಂಕಪಡಬಾರದು ಎಂದರು.

ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚುತ್ತಿವೆ ಎನ್ನುವ ಸುದ್ದಿ ಕೇಳಿ ಜಯದೇವ ಆಸ್ಫತ್ರೆ ಸೇರಿದಂತೆ ಆನೇಕ ಆಸ್ಫತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮತ್ತು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ವಿಚಿತ್ರ ಸನ್ನಿವೇಶ ಎದುರಾಗುತ್ತಿದೆ. ಕೋವಿಡ್ ಲಸಿಕೆಗೂ ಹಾಸನದಲ್ಲಿ ಸಂಭವಿಸಿದ ಹೃದಯಾಘಾತ ಪ್ರಕರಣಗಳಿಗೂ ಯಾವುದೇ ಸಂಬಂಧವಿಲ್ಲ. ವ್ಯಾಕ್ಸಿನ್ ಬಗ್ಗೆ ಅನುಮಾನ ಬೇಡ. ಹಾಸನ ಜಿಲ್ಲೆಯಲ್ಲಿ ಮಾತ್ರ ಪ್ರಕರಣ ಬೇರೆ ಆಗಿದೆ ಅನ್ನೋದು ತಪ್ಪು ಎಂದು ಡಾ. ಪಾಟೀಲ್‌ ವಿವರಿಸಿದರು.  

ಹೃದಯಾಘಾತದ ಆತಂಕ ಕೈಬಿಟ್ಟು ಉತ್ತಮ ಜೀವನಶೈಲಿ, ಅಗತ್ಯ ನಿದ್ರೆ ಮತ್ತು ದೈಹಿಕ ವ್ಯಾಯಾಮ ಮಾಡುವುದು ಅಗತ್ಯ.  ಹೃದಯಾಘಾತದ ರೋಗ ಲಕ್ಷಣಗಳು ಇದ್ದರೆ ಮಾತ್ರ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಸುಖಾಸುಮ್ಮನೆ ಹೋಗಬೇಡಿ ಎಂದು ಸಚಿವರು ಕಿವಿಮಾತು ಹೇಳಿದರು.

ಹಾಸನ ಪ್ರಕರಣ ಕುರಿತು ಅಧ್ಯಯನ:

ಹಾಸನ ಪ್ರಕರಣದಲ್ಲಿ 24 ಮಂದಿ ಮೃತರ ಕುರಿತು ಅಧ್ಯಯನ ನಡೆಸಲಾಗುತ್ತಿದೆ. 20 ಪ್ರಕರಣಗಳಲ್ಲಿ 10 ಹಾರ್ಟ್ ಅಟ್ಯಾಕ್ ಆಗಿದೆ. ಇತರೆ ಕಾರಣಗಳಿಂದ ಸಾವು ಸಂಭವಿಸಿವೆ ಎನ್ನುವುದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಜಯದೇವ ಆಸ್ಫತ್ರೆಗಳಲ್ಲಿ ಹೃದ್ರೂಗ ತಜ್ಞ ಡಾ ಕೆ. ಎಸ್. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಅನಾಲಿಸಿಸ್ ಆಗಿದ್ದು. ಹೃದಯಾಘಾತ ಸಂಬಂಧ ಸಾವು ಹೆಚ್ಚಾಗಿಲ್ಲ. ಈ ಹಿಂದೆ  ಆಗ್ತಾ ಇತ್ತು. ಈಗಲೂ ಆಗ್ತಾ ಇದೆ ಎಂದು ವಿವರಿಸಿದರು.

ಕೋವಿಡ್‌ ನಂತರ  ಜನರ ಜೀವನ ಶೈಲಿ ಬದಲು:

ಕೋವಿಡ್‌ ನಂತರದ ಜೀವನ ಶೈಲಿಯಿಂದ ಡಯಾಬಿಟಿಸ್, ಬಿಪಿ ಹೆಚ್ಚಾಗಿದೆ. ಆಹಾರ ಪದ್ದತಿ ಬದಲಾಗಿದೆ. ಒತ್ತಡ ಹೆಚ್ಚಿದೆ. ಈ ಮಧ್ಯೆ ಯುವಕರಲ್ಲಿ ಏಕೆ ಸಾವು ಆಗುತ್ತಿವೆ ಎಂದು ಅಧ್ಯಯನ ಮಾಡುತ್ತಿದ್ದೇವೆ ಎಂದು ಡಾ. ಪಾಟೀಲ್‌ ತಿಳಿಸಿದರು.

ಜನವರಿಯಲ್ಲಿ 178 ಜನರು ಅಡ್ಮಿಟ್ ಆಗಿದ್ದರು 11 ಜನ ಮೃತಪಟ್ಟಿದ್ದಾರೆ. ಫೆಬ್ರವರಿಯಲ್ಲಿ 181 ಜನರ ಪೈಕಿ 10 ಜನ, ಮಾರ್ಚ್‌ನಲ್ಲಿ 200 ಜನರಲ್ಲಿ 9 ಜನ ಹಾಗೂ ಬೆಂಗಳೂರಲ್ಲಿ 2165ರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಪೈಕಿ 101  ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ವರ್ಷಕ್ಕೆ ಒಂದು ಬಾರಿ ಹೃದಯ ತಪಾಸಣೆ  ಮಾಡಿಸಿದರೆ ಸಾಕು. ಆತಂಕದಿಂದ ಆಸ್ಪತ್ರೆಗೆ ಹೋಗುವುದು ಬೇಡ ಎಂದು ಸಚಿವ ಡಾ. ಪಾಟೀಲ್‌ ತಿಳಿಸಿದರು.

ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಮಕ್ಕಳಲ್ಲಿ ಸ್ಕ್ರೀನಿಂಗ್ ಮಾಡುವ ಆಗತ್ಯವಿಲ್ಲ. ಜನರಿಗೆ ಜಯದೇವ ಆಸ್ಪತ್ರೆಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುತ್ತೇವೆ. ರಸ್ತೆ ಬದಿ ಆಹಾರ ಮತ್ತು ಆಹಾರ ತಯಾರಿಸುವ ವಿಧಾನದ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸುತ್ತಿದ್ದೇವೆ. ಈ ಹಿಂದಿನ ಆಹಾರ ಪದ್ದತಿ ಮುಂದುವರಿಸಿ. ಯೋಗ ಅಭ್ಯಾಸ ಮಾಡಿದರೆ ತುಂಬಾ ಉತ್ತಮ, ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಯದೇವ ಆಸ್ಪತ್ರೆಯ ಹೃದಯ ತಜ್ಞರಾದ ಡಾ ಕೆ. ಎಸ್. ರವೀಂದ್ರನಾಥ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಷಿನ್, ಇಲಾಖೆ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ್  ಹಾಗೂ ಇತರರು ಹಾಜರಿದ್ದರು.

More articles

Latest article