ಬೆಂಗಳೂರು: ಕಾರ್ಮಿಕರ ಕನಿಷ್ಠ ಕೆಲಸದ ಅವಧಿಯನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧಿಸಿವೆ. ಮತ್ತೊಂದು ಕಡೆ ಕೈಗಾರಿಕೋದ್ಯಮಿಗಳು ಈ ನಿರ್ಧಾರವನ್ನು ಸ್ವಾಗತಿಸಿವೆ.
ದುಡಿಮೆಯ ಅವಧಿ ಕುರಿತ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ಮಾಡುವ ಸಂಬಂಧ ಕಾರ್ಮಿಕ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅಧ್ಯಕ್ಷತೆಯಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಸಭೆ ನಡೆಯಿತು.
ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸುವ ಸಂಬಂಧ ಕಾಯ್ದೆ ತಿದ್ದುಪಡಿಗೆ ಮುಂಬರುವ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕಾರ್ಮಿಕ ಇಲಾಖೆ ಸಿದ್ಧತೆಗಳನ್ನು ನಡೆಸುತ್ತಿದೆ. ಇದರ ಜತೆಗೆ ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ತಿದ್ದುಪಡಿ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಏನಿದು ಹೊಸ ನೀತಿ
20ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಉತ್ಪಾದನಾ ಘಟಕಗಳಲ್ಲಿ ದಿನದ ಕೆಲಸದ ಅವಧಿಯನ್ನು 8ರಿಂದ 10 ಗಂಟೆಗೆ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಕಾಯ್ದೆ ರೂಪಿಸಿದೆ. ಈ ನೀತಿಗೆ ಪೂರಕವಾಗಿ ಎಲ್ಲ ರಾಜ್ಯಗಳು ಕಾನೂನು ತಿದ್ದುಪಡಿ ಮಾಡಬೇಕಿದೆ. ಕರ್ನಾಟಕದಲ್ಲಿಯೂ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ಕಾರ್ಮಿಕ ಇಲಾಖೆ ಸಭೆ ನಡೆಸಿದೆ. ಆದರೆ, ಈ ತಿದ್ದುಪಡಿಗೆ ಕಾರ್ಮಿಕ ಸಂಘಟನೆಗಳು ಬಲವಾಗಿ ವಿರೋಧ ವ್ಯಕ್ತಪಡಿಸಿದ ಕಾರಣ ಮತ್ತೊಮ್ಮೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಎಂಟು ಗಂಟೆ ಮಾತ್ರ ಕೆಲಸ ಮಾಡಿಸಬೇಕು ಎನ್ನುವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕಾರ್ಮಿಕ ಸಚಿವರಾಗಿದ್ದಾಗ ದೇಶದಲ್ಲಿಯೂ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು.
ಇದೀಗ ಕಾಯ್ದೆ ತಿದ್ದುಪಡಿ ಮಾಡಿದರೆ ಕಾರ್ಮಿಕರ ಶೋಷಣೆಗೆ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಬಾರದು. ಒಂದು ಸಂಸ್ಥೆಯಲ್ಲಿ 10 ಮತ್ತು ಅದಕ್ಕಿಂತ ಕಡಿಮೆ ಕಾರ್ಮಿಕರು ಕೆಲಸ ಮಾಡುತ್ತಿದ್ದರೆ ಕಾರ್ಮಿಕ ನಿಯಮಗಳಿಂದ ಹೊರಗಿಡಬೇಕು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ವರಲಕ್ಷ್ಮೀ ಮತ್ತು ಇತರ ಮುಖಂಡರು ಆಗ್ರಹ ಪಡಿಸಿದರು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲು ಕಾರ್ಮಿಕ ಸಂಘಟನೆಗಳ ಮುಖಂಡರು ನಿಧರಿಸಿದ್ದಾರೆ.
ಹೊಸ ನೀತಿಗೆ ಉದ್ಯಮಿಗಳ ಸ್ವಾಗತ:
ಆದರೆ ಕೈಗಾರಿಕೋದ್ಯಮಿಗಳ ವಾದವೇ ಬೇರೆಯಾಗಿದೆ. ಹೊಸ ನೀತಿ ಕಾರ್ಮಿಕರ ಪರವಾಗಿದ್ದು, ಹೆಚ್ಚುವರಿಯಾಗಿ ಒಂದು ಗಂಟೆ ಕೆಲಸ ಮಾಡಿದರೆ ಕಾರ್ಮಿಕರಿಗೆ ಹೊರೆಯಾಗುವುದಿಲ್ಲ. ಹೆಚ್ಚುವರಿ ಕೆಲಸ ಮಾಡಿದ್ದಕ್ಕಾಗಿ ಅವರಿಗೆ ವಾರದ ರಜೆಯ ಜೊತೆಗೆ, ಇನ್ನೂ ಒಂದು ರಜೆ ಹೆಚ್ಚುವರಿಯಾಗಿ ಸಿಗಲಿದೆ. ಸರ್ಕಾರದ ನೀತಿ ಸರಿಯಿದ್ದು ಈ ತಿದ್ದುಪಡಿಗಳನ್ನು ಸ್ವಾಗತಿಸುತ್ತೇವೆ ಎಂದು ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರ ಪರವಾಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಅಭಿಪ್ರಾಯಪಟ್ಟಿದ್ದಾರೆ.
ಇಂಟಕ್, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು, ಟಿಯುಸಿಸಿ, ಎಚ್ಎಂಕೆಪಿ ಮುಂತಾದ ಕಾರ್ಮಿಕ ಸಂಘಟನೆಯ ಮುಖಂಡರು, ಎಫ್ಕೆಸಿಸಿಐ, ಬಿಸಿಐಸಿ, ಕೆಇಎ, ಕ್ಲಾತ್ ಮರ್ಚೆಂಟ್ ಅಸೋಸಿಯೇಶನ್, ಗ್ರೇಟರ್ ಬೆಂಗಳೂರು ಎಂಪ್ಲಾಯೀಸ್ ಅಸೋಸಿಯೇಶನ್ ಸಹಿತ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.