ನೇಹಾ ಹತ್ಯೆ ಪ್ರಕರಣ: ಇಂಥ ಘಟನೆಗಳನ್ನೂ ರಾಜಕೀಯಕ್ಕೆ ಬಳಸಿಕೊಳ್ಳಬೇಕಾ? ಸಂತೋಷ್ ಲಾಡ್ ವಿಷಾದ

Most read

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸುತ್ತ, ಭಾರತೀಯ ಜನತಾ ಪಕ್ಷದ ಮುಖಂಡರು ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ಸಚಿವ ಸಂತೋಷ್ ಲಾಡ್ ಬೇಸರ ವ್ಯಕ್ತಪಡಿಸಿದ್ದಾರೆ.

ನೇಹಾ ನಿವಾಸಕ್ಕೆ ಬಂದು ಆಕೆಯ ಪೋಷಕರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಿಂದ ನನಗೆ ತೀವ್ರ ನೋವಾಗಿದೆ. ಇಂಥದ್ದು ಎಲ್ಲೂ ನಡೆಯಬಾರದು ಎಂದು ದುಃಖ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಈ ಪ್ರಕರಣ ನಡೆದಿದೆ. ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣದಿಂದ ಈ ಕೊಲೆ ನಡೆದಿದೆ ಎಂಬ ಬಿಜೆಪಿ ನಾಯಕರ ಆರೋಪಗಳ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಈ ದುಃಖದ ಸನ್ನಿವೇಶದಲ್ಲಿ ರಾಜಕೀಯ ಬೇಕೆ? ಇಂಥ ಹಲವಾರು ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಎಲ್ಲ ಘಟನೆಗಳ ಅಂಕಿಅಂಶ ಇಟ್ಟುಕೊಂಡು ನಾನು ವಿರೋಧ ಪಕ್ಷಗಳಿಗೆ ಕೌಂಟರ್ ನೀಡುತ್ತ ಕೂರಬೇಕೇ? ಇದು ಸರಿಯೇ ಎಂದು ಪ್ರಶ್ನಿಸಿದರು.

ಸರ್ಕಾರ ಒಂದು ಹೆಣ್ಣುಮಗಳ ಹತ್ಯೆಗೆ ಕುಮ್ಮಕ್ಕು ನೀಡುತ್ತದೆಯೇ? ಆರೋಪಕ್ಕೆ ಒಂದು ತರ್ಕ ಬೇಡವೇ? ಎಂದು ಪ್ರಶ್ನಿಸಿದ ಅವರು, ಇಂಥ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ಆರೋಪಿಯನ್ನು ಎನ್ ಕೌಂಟರ್ ಮಾಡಬೇಕು ಎಂಬ ಬೇಡಿಕೆ ಬಗ್ಗೆ ಪ್ರಶ್ನಿಸಿದಾಗ, ಇಂಥ ಘಟನೆಗಳ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಸಾಯಿಸುವ ಕಾನೂನು ಜಾರಿಗೆ ತನ್ನಿ, ನಾನೂ ಕೂಡ ಬೆಂಬಲ ಕೊಡುತ್ತೇನೆ ಎಂದು ಅವರು ನುಡಿದರು.

More articles

Latest article