‘ದಿ ಕೇರಳ ಸ್ಟೋರಿ’ಗೆ ರಾಷ್ಟ್ರೀಯ ಪ್ರಶಸ್ತಿ: ಸಂಘ ಪರಿವಾರದ ಹುನ್ನಾರ ಎಂದ ಕೇರಳ ಸಚಿವ ಸಾಜಿ ಚೆರಿಯನ್

Most read

ತಿರುವನಂತರಪುರ: ‘ದಿ ಕೇರಳ ಸ್ಟೋರಿ’ ಚಲನಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪ್ರಕಟಿಸಿರುವುದರ ಹಿಂದೆ ಆರ್‌ ಎಸ್‌ ಎಸ್‌ ನ ರಾಜಯಕೀಯ ಅಜೆಂಡಾ ಕೆಲಸ ಮಾಡಿದೆ ಎಂದು ಕೇರಳದ ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ವಾಗ್ದಾಳಿ ನಡೆಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ಭಯೋತ್ಪಾದಕ ಸಂಘಟನೆಯು ಬಲವಂತದಿಂದ ಅನ್ಯ ಧರ್ಮದ ಮಹಿಳೆಯರನ್ನು ಮತಾಂತರ ಗೊಳಿಸಿ ಅವರನ್ನು ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಳ್ಳುವ ಕಥಾವಸ್ತುವನ್ನು ಚಿತ್ರ ಹೊಂದಿತ್ತು. ಈ ಸಿನಿಮಾ ತೀವ್ರ ವಿವಾದ ಸೃಷ್ಟಿಸಿ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು.

ದಿ ಕೇರಳ ಸ್ಟೋರಿ ಚಿತ್ರದ ನಿರ್ದೇಶಕ ಸುದಿಪ್ತೊ ಸೇನ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಇದೇ ಚಿತ್ರಕ್ಕೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.

ಸಚಿವ ಚೆರಿಯನ್‌ ಪ್ರತಿಕ್ರಿಯಿಸಿ ಈ ಚಿತ್ರವು ಸಮಾಜದಲ್ಲಿ ಒಡಕು ಹಾಗೂ ದ್ವೇಷ ಸೃಷ್ಟಿಸುವ ಕೃತ್ಯವಾಗಿದ್ದು, ಕೇರಳಕ್ಕೆ ಮಾಡಿದ ಅವಮಾನವಾಗಿದೆ. ಯಾವುದೇ ಮಾನದಂಡಗಳನ್ನು ಅನುಸರಿಸದೇ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ಕಲಾವಿದರಾದ ಊರ್ವಶಿ ಮತ್ತು ವಿಜಯರಾಘವನ್ ಅವರಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

ಈ ಚಿತ್ರದಿಂದ ಸಮಾಜಕ್ಕೆ ಯಾವುದೇ ಉತ್ತಮ ಸಂದೇಶವಿಲ್ಲ. ಆದರೆ ಕೆಲವು ವರ್ಗಗಳನ್ನು ಸಂತುಷ್ಟಗೊಳಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗಿದೆ. ಸಂಘ ಪರಿವಾರವು ಇಂಥ ರಾಜಕೀಯದಿಂದ ದೇಶದ ಜನರಲ್ಲಿ ಭೀತಿ ಮೂಡಿಸುತ್ತಿದೆ. ದೇಶದಲ್ಲಿ ಒಗ್ಗಟ್ಟು ಮೂಡಿಸಬೇಕಾದ ರಾಜಕೀಯ ಪಕ್ಷಗಳು ದೇಶವನ್ನೇ ಇಬ್ಭಾಗ ಮಾಡುತ್ತಿವೆ. ಅದಕ್ಕಾಗಿ ಇಂಥ ಸಣ್ಣ ಕೆಲಸಗಳಲ್ಲೂ ತಮ್ಮ ಸಿದ್ಧಾಂತವನ್ನು ತೂರಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಚಿತ್ರಕ್ಕೆ ಪ್ರಶಸ್ತಿ ಘೋಷಿಸಿದ್ದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಿನಿಮಾದ ಭವ್ಯ ಪರಂಪರೆಯನ್ನೇ ತೀರ್ಪುಗಾರ ಮಂಡಳಿ ನಾಶ ಮಾಡಿದೆ ಎಂದು ಟೀಕಿಸಿದ್ದಾರೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರೂ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ.

2023ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ನಿನ್ನೆ ಘೋಷಿಸಲಾಗಿದ್ದು, ತೀರ್ಪುಗಾರರ ಮುಖ್ಯಸ್ಥರಾದ ಚಿತ್ರ ನಿರ್ದೇಶಕ ಆಶುತೋಷ್‌ ಗೋವಾರಿಕರ್‌ ಪ್ರಕಟಿಸಿದರು.

More articles

Latest article