ಬೆಂಗಳೂರು: ನಮ್ಮ ಮೆಟ್ರೋದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣ ದರ ಹೊರತುಪಡಿಸಿ ಜಾಹೀರಾತು ಮೂಲಕವೂ ಆದಾಯ ಗಳಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದೆ. ಹಸಿರು ಮತ್ತು ನೇರಳೆ ಮಾರ್ಗದ ರೈಲುಗಳ ಹೊರಭಾಗದಲ್ಲಿ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಜಾಹಿರಾತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಎರಡು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುದ್ರಾ ವೆಂಚರ್ಸ್ ನೇರಳೆ ಮಾರ್ಗದಲ್ಲಿ ಚಲಿಸುವ ರೈಲುಗಳ ಬಗ್ಗೆ ಜಾಹಿರಾತು ನೀಡಲು ಏಳು ವರ್ಷಗಳ ಒಪ್ಪಂದ ಪಡೆದುಕೊಂಡಿದ್ದರೆ ಲೋಕೇಶ್ ಔಟ್ ಡೋರ್ ಜಾಹೀರಾತು ಕಂಪನಿ, ಹಸಿರು ಮಾರ್ಗದಲ್ಲಿ ರೈಲುಗಳಿಗೆ ಜಾಹಿರಾತು ಪೂರೈಕೆ ಮಾಡಲಿದೆ.
ಮೆಟ್ರೋ ರೈಲುಗಳಲ್ಲಿ ಜಾಹೀರಾತುಗಳ ಮೂಲಕ ವಾರ್ಷಿಕವಾಗಿ ರೂ. 25 ಕೋಟಿ ಗಳಿಸುವ ಗುರಿ ಹೊಂದಿದೆ. ಕೆಲವರು ಈ ಕ್ರಮವನ್ನು ಸ್ವಾಗತಿಸಿದರೆ, ಮತ್ತೆ ಕೆಲವರು ಟೀಕಿಸಿದ್ದಾರೆ.
ಆದಾಯ ಸಂಗ್ರಹಣೆಯ ಮಾರ್ಗವಾಗಿ ಇತ್ತೀಚೆಗಷ್ಟೇ ನಮ್ಮ ಮೆಟ್ರೋ ಪ್ರಯಾಣ ದರವನ್ನು ಶೇ.71.ರಷ್ಟು ಹೆಚ್ಚಳ ಮಾಡಲಾಗಿತ್ತು.
ಜಾಹಿರಾತು ಳಿಂದ ರೈಲುಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಹಸಿರು ಮತ್ತು ನೇರಳೆ ಮಾರ್ಗಗಳೆರಡರಲ್ಲೂ ಬಿಎಂಆರ್ ಸಿಎಲ್ ಒಟ್ಟು ಆರು ಕೋಚ್ ಗಳ 57 ರೈಲುಗಳನ್ನು ಓಡಿಸುತ್ತಿದೆ. ಈಗಾಗಲೇ ದೆಹಲಿ, ಹೈದರಾಬಾದ್, ಕೊಚ್ಚಿ ಮೆಟ್ರೋ ನಿಗಮಗಳು ರೈಲುಗಳ ಹೊರಭಾಗದಲ್ಲಿ ಜಾಹಿರಾತು ಳನ್ನು ಪ್ರದರ್ಶಿಸಲುವ ಮೂಲಕ ಆದಾಯ ಗಳಿಸುತ್ತಿವೆ.
ಪ್ರಯಾಣ ದರದ ಜತೆಗೆ ಬಿಎಂಆರ್ ಸಿಎಲ್ ನಿಲ್ದಾಣಗಳಲ್ಲಿ ವಾಣಿಜ್ಯ ಸ್ಥಳಗಳನ್ನು ಬಾಡಿಗೆ ನೀಡುವುದು, ಎಟಿಎಂಗಳ ಸ್ಥಾಪನೆ, ಪಾರ್ಕಿಂಗ್, ಕಿಯೋಸ್ಕ್, ವಿದ್ಯುತ್ ವಾಹನಗಳ ಚಾರ್ಜಿಂಗ್, ಒಎಫ್ ಸಿ ಕೇಬಲ್ ಅಳವಡಿಕೆ ಟೆಲಿಕಾಂ ಟವರ್ ಗಳ ಸ್ಥಾಪನೆ ಮೂಲಕವೂ ಆದಾಯ ಗಳಸುತ್ತಿದೆ.
2017ರಲ್ಲಿ ನಾಗಸಂದ್ರದ 13 ಎಕರೆ ಜಮೀನನ್ನು ಐಕಿಯಾ ಕಂಪನಿಗೆ 60 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದ್ದು, 251 ಕೋಟಿ ರೂ. ಆದಾಯ ಗಳಿಸುತ್ತಿದೆ.