ಮುಂಬೈ ಮಹಾಮಳೆ: ಹಿಂದೆಂದೂ ಕಂಡಿರದ ಧೂಳಿನ ಬಿರುಗಾಳಿ

Most read

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಇಂದು ಧೂಳಿನ ಬಿರುಗಾಳಿಗೆ ಸಿಕ್ಕು ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿತ್ತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಭಾರೀ ಬಿರುಗಾಳಿಗೆ ಎದ್ದ ಧೂಳು ಆಕಾಶವನ್ನು ಆವರಿಸಿಕೊಂಡು ರಾತ್ರಿಯ ಕತ್ತಲೆಯ ಅನುಭವ ನೀಡಿತು.

ಬಿರುಗಾಳಿಯೊಂದಿಗೆ ಬಂದ ಈ ವರ್ಷದ ಮೊದಲ ಮಳೆ ಮುಂಬೈ ನಿವಾಸಿಗಳಿಗೆ ಹರ್ಷ ತಂದರೂ, ಮಹಾನಗರವನ್ನು ಆವರಿಸಿಕೊಂಡ ಧೂಳಿನ ಬೆಟ್ಟದಿಂದ ಆತಂಕವೂ ಮೂಡಿತು.

ಬಿರುಗಾಳಿ ಏಳುತ್ತಿದ್ದಂತೆ ಗಾಬರಿಯಾದ ಜನರು ಸುರಕ್ಷಿತ ಜಾಗಗಳನ್ನು ತಲುಪಿಕೊಂಡರು. ವಾಹನ ಸವಾರರು ವಾಹನಗಳನ್ನು ಪಾರ್ಕ್‌ ಮಾಡಿ ಸಿಕ್ಕ ಸಿಕ್ಕ ಕಟ್ಟಡಗಳಲ್ಲಿ ಆಸರೆ ಪಡೆದುಕೊಂಡರು.

ಬಾಂದ್ರಾ ಕುರ್ಲಾ, ಧಾರಾವಿ, ಘಾಟ್ಕೋಪರ್‌ ಪ್ರದೇಶಗಳಲ್ಲಿ ಧೂಳು ಸಹಿತ ಬಿರುಗಾಳಿ ತೀವ್ರವಾಗಿತ್ತು. ಬಿರುಗಾಳಿಯ ಕಾರಣದಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ನೂರು ಅಡಿ ಎತ್ತರದ ಜಾಹೀರಾತು ಫಲಕವೊಂದು ಮುಂಬೈನ ಚೆಡ್ಡಾನಗರದ ಪೆಟ್ರೋಲ್‌ ಪಂಪ್‌ ಮೇಲೆ ಬಿತ್ತು. ಧರಾಶಾಹಿಯಾಗಿದ್ದ ಫಲಕದ ಕೆಳಗೆ ಕೆಲವು ವ್ಯಕ್ತಿಗಳು ಸಿಲುಕಿರಬಹುದು ಎಂದು ಭಾವಿಸಲಾಗಿತ್ತಾದರೂ ಯಾರಿಗೂ ಯಾವುದೇ ಅಪಾಯ ಸಂಭವಿಸಲಿಲ್ಲ.

ಭಾರತೀಯ ಹವಾಮಾಣ ಇಲಾಖೆ ( IMD) ಮುಂಬೈನ ಥಾಣೆ, ಪಾಲ್ಗರ್‌ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

ಕೆಲವು ಭಾಗಗಳಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಬರ್ಬನ್‌ ರೈಲು ಸೇವೆಯಲ್ಲೂ ಹಲವೆಡೆ ವ್ಯತ್ಯಯವಾಗಿದೆ.

ನಗರದ ಹಲವು ಭಾಗಗಳಲ್ಲಿ ಮರಗಳು ಉರುಳಿ ಬಿದ್ದಿವೆ. ರಸ್ತೆಗಳ ಮೇಲೇ ಬಿದ್ದ ಮರಗಳನ್ನು ತೆರವುಗೊಳಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

More articles

Latest article