ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಬೇಕು: ಸಿ.ಪಿ.ಐ.(ಎಂ) ಆಗ್ರಹ

Most read

ಬೆಂಗಳೂರು: ನಗರದ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ತೆರೆಯಲು ಆದ್ಯತೆ ನೀಡಬೇಕು ಎಂದು ಸಿ.ಪಿ.ಎಂ.ಪಕ್ಷ ಒತ್ತಾಯಿಸಿದೆ.

ರೈತರ ಸಹಾರಿಯಾಗಿರುವ ನಂದಿನಿಯನ್ನು ಬೆಳೆಸುವ ಉಳಿಸುವುದು ಸರಕಾರದ ಆದ್ಯತೆಯಾಗಬೇಕು ಎಂದು ಸಿ.ಪಿ.ಐ.(ಎಂ) ಕರ್ನಾಟಕ ರಾಜ್ಯ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಪ್ರಕಾಶ್‌ ಪ್ರಕಟಣೆ ಮೂಲಕ ಆಗ್ರಹಪಡಿಸಿದ್ದಾರೆ.

ಸರಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ನಂದಿನಿ ಹಾಲನ್ನೇ ನೀಡಲಾಗುತ್ತಿದೆ. ಸಂಗ್ರಹವಾಗುವ ಎಲ್ಲ ಹಾಲು ಮಾರಾಟವಾಗುವುದಿಲ್ಲ, ಹಲವು ಉಪ ಉತ್ಪನ್ನಗಳನ್ನು ತಯಾರಿಸಿದ ನಂತರವೂ ಹಾಲು ಹೆಚ್ಚುವರಿಯಾಗಿ ಉಳಿಯುತ್ತದೆ. ಹೀಗಿರುವಾಗ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳನ್ನು ತೆರೆಯಲು ಆದ್ಯತೆ ನೀಡಬೇಕು ಎಂದು ಸಿ.ಪಿ.ಎಂ.ಪಕ್ಷ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

ಮೆಟ್ರೋ ರೈಲು ನಿಲ್ದಾಣಗಳಲ್ಲಿ ಅಮುಲ್ ಉತ್ಪಾದನೆಗಳ ಮಾರಾಟ ಮಳಿಗೆಗಳು ತಲೆ ಎತ್ತಿವೆ. ರಾಜ್ಯದ ನಂದಿನಿ ಎಲ್ಲ ರೀತಿಯಲ್ಲಿಯೂ ಉತ್ತಮ ಗುಣಮಟ್ಟದ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಮಾರುತ್ತ ಜನಮನ್ನಣೆ ಗಳಿಸಿದೆ. ಬಹುತೇಕ ಸಣ್ಣ ಮತ್ತು ಅತಿ ಸಣ್ಣ ಹೈನುಗಾರರಿಂದ ಪ್ರತಿದಿನ ಸುಮಾರು ಒಂದು ಕೋಟಿ ಲೀಟರ್‌ ಗಿಂತ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿರುವ ಕೆ.ಎಂ.ಎಫ್ ಬಹುತೇಕ ಮಾರುಕಟ್ಟೆಗೆ ಬೆಂಗಳೂರು ಮಹಾನಗರವನ್ನೇ ಆಶ್ರಯಿಸಿದೆ.

ಪ್ರತಿಯೊಂದು ರಾಜ್ಯವು ತನ್ನದೇ ಆದ ಸಹಕಾರಿ ಒಕ್ಕೂಟವನ್ನು ಹೊಂದಿದ್ದು ಕೆಲವು ರಾಜ್ಯಗಳು ಕೊರತೆಯನ್ನು ಕೆಲವು ರಾಜ್ಯಗಳು ಮಿಗತೆಯನ್ನು ಹೊಂದಿವೆ. ಇಂತಹ ಸಂದರ್ಭದಲ್ಲಿ ಪರಸ್ಪರರ ಮಾರುಕಟ್ಟೆ ಕಸಿಯುವ ಆನಾರೋಗ್ಯಕರ ಪೈಪೋಟಿ ನಿವಾರಿಸಲು ಈ ಹಿಂದೆ ಎನ್.ಡಿ.ಡಿ.ಬಿ (NDDB) ಮೂಲಕ ಹೆಚ್ಚುವರಿ ಹಾಲು ಲಭ್ಯ ಇರುವ ಸಹಕಾರಿ ಒಕ್ಕೂಟಗಳಿಂದ ಪಡೆದು ಕೊರತೆ ಇರುವ ರಾಜ್ಯಗಳಲ್ಲಿ ಆ ರಾಜ್ಯದ ಬ್ರಾಂಡ್ ಹೆಸರಿನಲ್ಲೇ ಮಾರಾಟ ಮಾಡಲುಕ್ರಮ ವಹಿಸಲಾಗುತ್ತಿತ್ತು ಆ ಮೂಲಕ ರಾಜ್ಯಗಳ ಸಹಕಾರಿ ಒಕ್ಕೂಟಗಳು ಪರಸ್ಪರ ಅನಾರೋಗ್ಯಕರ ಪೈಪೋಟಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುತ್ತಿತ್ತು ಎಂದು ನೆನಪಿಸಿದ್ದಾರೆ.

ಕಳೆದ ಚುನಾವಣೆಯ ಸಂದರ್ಭದಲ್ಲಿ ಸಹಕಾರಿ ವಲಯಕ್ಕೆ ಅಮುಲ್ ಲಗ್ಗೆ ಇಡುತ್ತದೆ ಎನ್ನುವ ವಿಷಯವೂ ಚುನಾವಣೆಯಲ್ಲಿ  ಚರ್ಚೆಯ ವಿಷಯವಾಗಿತ್ತು. ಈಗ ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರೇ ಕೆ.ಎಂ.ಎಫ್.ನ ನಿರ್ದೇಶಕರಾಗಿದ್ದು ಮುಂದೆ ಅಧ್ಯಕ್ಷರಾಗಲು ಎಲ್ಲ ತಯಾರಿ ನಡೆಸಿರುವ ಸಂದರ್ಭದಲ್ಲಿ ಅಮುಲ್ ಉತ್ಪನ್ನಗಳನ್ನು ಮೆಟ್ರೋ ನಿಲ್ದಾಣಗಳು ಅಥವಾ ಇತರ ಸರಕಾರಿ ಒಡೆತನದ ಜಾಗಗಳಲ್ಲಿ ಮಾರಾಟಕ್ಕೆ ಅನುಕೂಲ ಮಾಡಿಕೊಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಈಗಾಗಲೇ ವಿವಿಧ ಖಾಸಗೀ ಹಾಲು ಉತ್ಪಾದಕ ಕಂಪನಿಗಳಿಗೆ ಅವಕಾಶ ಕೊಟ್ಟಿದ್ದು ಸಹಕಾರಿ ಹೈನುಗಾರಿಕಾ ವಲಯಕ್ಕೆ ಪೆಟ್ಟು ನೀಡಿದೆ.ರೈತರ ಸಹಾರಿಯಾಗಿರುವ ನಂದಿನಿಯನ್ನು ಬೆಳೆಸುವ ಉಳಿಸುವುದು ಸರಕಾರದ ಆದ್ಯತೆಯಾಗಬೇಕು. ಟೆಂಡ‌ರ್ ಪ್ರಕ್ರಿಯೆಯಲ್ಲಿ ಅಮುಲ್ ಮಾತ್ರ ಭಾಗವಹಿಸಿತ್ತು ಕೆ.ಎಂ.ಎಫ್ ಭಾಗವಹಿಸಿಲ್ಲ ಎಂದರೆ ಅದರ ಹೊಣೆಯಾರದು? ಟೆಂಡ‌ರ್ ಹಾಕದಿರಲು ಕಾರಣವೇನೆಂದು ಬಹಿರಂಗಪಡಿಸಬೇಕು ಎಂದೂ  ಡಾ.ಕೆ.ಪ್ರಕಾಶ್‌ ಆಗ್ರಹಪಡಿಸಿದ್ದಾರೆ.

More articles

Latest article