ಚೆನ್ನೈ: ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಮೇಕೆದಾಟು ಯೋಜನೆಗೆ ಕರ್ನಾಟಕ ಅನುಮತಿ ಪಡೆಯಲು ಮುಂದಾಗಿರುವ ಬೆನ್ನಲ್ಲೇ, ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಕರ್ನಾಟಕದ ಯೋಜನೆಗೆ ಅವಕಾಶ ನೀಡದಂತೆ ತಡೆಯಲು ಕಾನೂನು ರೂಪಿಸುವುದೂ ಸೇರಿದಂತೆ ಸಾಧ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಅನುಸರಿಸುವುದಾಗಿ ತಮಿಳುನಾಡು ತಿಳಿಸಿದೆ.
2025–26ನೇ ಸಾಲಿನ ನೀತಿ ಟಿಪ್ಪಣಿಗಳನ್ನು ಮಂಡಿಸಿದ ತಮಿಳುನಾಡು ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ಅವರು, ಮೇಕೆದಾಟು ಯೋಜನೆ ಜಾರಿಗೆ ಸಂಬಂಧಿಸಿದಂತೆ ಕರ್ನಾಟಕವು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರ ತಮಿಳುನಾಡಿಗೆ ಮಾಹಿತಿ ನೀಡಿದೆ ಎಂದು ಹೇಳಿದರು.
ಮೇಕೆದಾಟು ಅಥವಾ ಕರ್ನಾಟಕದ ಯಾವುದೇ ಸ್ಥಳದಲ್ಲಿ ಜಲಾಶಯ ನಿರ್ಮಾಣ ಮಾಡುವುದನ್ನು ತಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೊತೆಗೆ ಕರ್ನಾಟಕದ ಜಲಾಶಯ ನಿರ್ಮಾಣದ ನಿಲುವು ಸುಪ್ರೀಂ ಕೋರ್ಟ್ನ ಅಂತಿಮ ತೀರ್ಪು, ನ್ಯಾಯಾಧೀಕರಣದ ಅಂತಿಮ ಆದೇಶ ಮತ್ತು ತಮಿಳುನಾಡಿನ ಹಕ್ಕುಗಳ ಸುರಕ್ಷತೆಯ ಉಲ್ಲಂಘನೆಯಾಗಿದೆ ಎಂದು ದೊರೈ ಮುರುಗನ್ ಮಾಹಿತಿ ನೀಡಿದರು.
ಮೇಕೆದಾಟು ಯೋಜನೆಗೆ ಆದ್ಯತೆ ಮೇರೆಗೆ ಅನುಮೋದನೆ ನೀಡಲು ಕೇಂದ್ರೀಯ ಜಲ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕರ್ನಾಟಕದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ ಒಂದು ತಿಂಗಳ ಬಳಿಕ, ತಮಿಳುನಾಡು ಸಚಿವರು ಈ ಹೇಳಿಕೆ ನೀಡಿದ್ದಾರೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಭಾಗವಾಗಿ 67.16 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯದ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕರ್ನಾಟಕ ಮುಂದಾಗಿದೆ. ಆದರೆ, ತನ್ನ ಅನುಮತಿ ಇಲ್ಲದೆ ಕರ್ನಾಟಕವು ಈ ಯೋಜನೆಯನ್ನು ಜಾರಿಗೊಳಿಸುವಂತಿಲ್ಲ. ಜೊತೆಗೆ ಮೇಕೆದಾಟು ಯೋಜನೆಯಿಂದ ಸ್ವಾಭಾವಿಕವಾಗಿ ಹರಿಯುವ ನದಿಗೆ ಅಡ್ಡಿಯಾಗಲಿದೆ ಎಂದು ತಮಿಳುನಾಡು ವಾದಿಸುತ್ತಿದೆ.