ಖರ್ಗೆಯವರ ಟ್ರಸ್ಟ್​ಗೆ ನಿಯಮಾನುಸಾರವೇ ಸಿ.ಎ ನಿವೇಶನ ಹಂಚಿಕೆ: ಸಚಿವ ಎಂ.ಬಿ.ಪಾಟೀಲ್

Most read

ಕಳೆದ ಕೆಲವು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದವರು ಸಕ್ರಿಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ದೇವನಹಳ್ಳಿ ಸಮೀಪದ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆಯಷ್ಟು ಸಿ.ಎ. ನಿವೇಶನ ಕೊಟ್ಟಿರುವುದು ವಿನಾಕಾರಣ ಸುದ್ದಿಯಾಗುತ್ತಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ಧಾರ್ಥ ವಿಹಾರ ಟ್ರಸ್ಟ್​ಗೆ ನೀಡಿರುವ ಸಿಎ ನಿವೇಶನದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಈ ಆರೋಪಕ್ಕೆ ಇತಿಶ್ರೀಯನ್ನು ಹಾಡಬೇಕಿದೆ. ಇದಕ್ಕೆ ಮೊದಲು ವಿವಾದದ ಬಣ್ಣ ಹಚ್ಚಿದ್ದು ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಅವರು. ನಾನು ಅವರನ್ನು ವಿವೇಕಶಾಲಿಗಳು ಎಂದುಕೊಂಡಿದ್ದೆ. ಆದರೆ, ಅಂತಹ ಹಿರಿಯರು ಕಾನೂನುಬದ್ಧವಾಗಿ ನಡೆದಿರುವ ಒಂದು ಸಿಎ ನಿವೇಶನದ ಹಂಚಿಕೆಗೆ ರಾಜಕೀಯ ಲೇಪ ಹಚ್ಚಿದ್ದು ವಿಷಾದದ ಸಂಗತಿ ಎಂದರು.

ಈ ಬೆನ್ನಲ್ಲೇ ಬಿಜೆಪಿ ತನ್ನ ದಲಿತ ಮುಖಂಡ ಮತ್ತು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ಅಖಾಡಕ್ಕೆ ತಳ್ಳಿದೆ. ಇದು ಒಬ್ಬ ದಲಿತನ ವಿರುದ್ಧ ಇನ್ನೊಬ್ಬ ದಲಿತನನ್ನೇ ಕಣಕ್ಕೆ ನೂಕುವ ಬಿಜೆಪಿಯ ತಂತ್ರದ ಭಾಗ. ಏಕೆಂದರೆ, ಇಬ್ಬರು ದಲಿತರು ಹೊಡೆದಾಡುತ್ತಿದ್ದರೆ ಆರೆಸ್ಸೆಸ್ ಮತ್ತು ಬಿಜೆಪಿಗೆ ಲಾಭ! ಈಗ ನಡೆಯುತ್ತಿರುವುದು ಇಂತಹ ಒಂದು ಪಿತೂರಿ. ಆದರೆ ಛಲವಾದಿ ನಾರಾಯಣಸ್ವಾಮಿ ಆತ್ಮಾವಲೋಕನವನ್ನೂ ಮಾಡಿಕೊಳ್ಳದೆ ಬಿಜೆಪಿಯ ಪಟ್ಟಭದ್ರ ಹಿತಾಸಕ್ತಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕಿಡಿಕಾರಿದರು.

ಮೂಲತಃ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆಯವರು ಎಂಜಿನಿಯರಿಂಗ್ ಪದವೀಧರರು, ಐಐಎಸ್ಸಿಯಲ್ಲಿ ತರಬೇತಿ ಪಡೆದಿದ್ದಾರೆ. ಅವರಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ ಹಲವು ವರ್ಷಗಳಿಂದಲೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ. ನಾವು ಇದನ್ನು ಎಸ್ಸಿ-ಎಸ್ಟಿ ಅಂತೆಲ್ಲ ನೋಡುವುದು ಬೇಡ. ಖರ್ಗೆ ಅವರ ಕುಟುಂಬವು ಇದನ್ನೆಲ್ಲ ಮೀರಿದೆ. ಈ ಟ್ರಸ್ಟ್ ಪರವಾಗಿ ರಾಹುಲ್ ಖರ್ಗೆಯವರು ಉತ್ಕೃಷ್ಟತಾ ಕೇಂದ್ರ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಈ ಮೂರನ್ನೂ ಮಾಡುವುದಾಗಿ ಹೇಳಿ, ಏರೋಸ್ಪೇಸ್ ಪಾರ್ಕಿನಲ್ಲಿ ಸಿ.ಎ. ನಿವೇಶನಕ್ಕೆ ನಿಯಮಾನುಸಾರವೇ ಅರ್ಜಿ ಹಾಕಿದ್ದು ನಿಜ. ಇದರಲ್ಲಿ ತಪ್ಪೇನೂ ಇಲ್ಲ. ಈ ನಿವೇಶನಕ್ಕಾಗಿ ಒಟ್ಟು 6 ಅರ್ಜಿ ಬಂದಿದ್ದವು. ಇದರಲ್ಲಿ 3 ಅರ್ಜಿಗಳು ವಸತಿ ಸಮುಚ್ಚಯ ನಿರ್ಮಾಣಕ್ಕೆ ಅನುಮತಿ ಕೋರಿದ್ದವು. ಆದರೆ ಇಲ್ಲಿ ಈಗಾಗಲೇ ವಸತಿ ಯೋಜನೆಗೆ ಅನುಮತಿ ನೀಡಿದ್ದರಿಂದ ಆ ಅರ್ಜಿಗಳನ್ನು ನಾವು ಪುರಸ್ಕರಿಸಲಿಲ್ಲ. ಇನ್ನೊಂದು ಅರ್ಜಿಯಲ್ಲಿ ಆಸ್ಪತ್ರೆ ನಿರ್ಮಿಸುವ ಉದ್ದೇಶವನ್ನು ತಿಳಿಸಲಾಗಿತ್ತು. ಆದರೆ ಅಗತ್ಯ ದಾಖಲೆಗಳನ್ನು ಲಗತ್ತಿಸಿರಲಿಲ್ಲ. 5ನೇ ಅರ್ಜಿಯಲ್ಲಿ ಕೇವಲ ‘ಸಂಶೋಧನೆ’ ಅಂತ ತಮ್ಮ ಉದ್ದೇಶ ನಮೂದಿಸಲಾಗಿತ್ತು. ಹೀಗಾಗಿ ಈ ಅರ್ಜಿಗಳೂ ತಿರಸ್ಕೃತವಾದವು. ಆಗ ಕೊನೆಗೆ ಉಳಿದಿದ್ದು ರಾಹುಲ್ ಖರ್ಗೆ ಅವರ ಅರ್ಜಿ ಮಾತ್ರ. ಇವರು ಸಂಶೋಧನೆ, ತರಬೇತಿ ಕೇಂದ್ರ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವುದಾಗಿ ಸ್ಪಷ್ಟವಾಗಿ ನಮೂದಿಸಿದ್ದರು. ವಸ್ತುಸ್ಥಿತಿ ಹೀಗಿದ್ದಾಗ ನಾವು ಮೆರಿಟ್ ಆಧರಿಸಿಯೇ ರಾಹುಲ್ ಖರ್ಗೆ ಅವರ ಟ್ರಸ್ಟಿಗೆ ಸಿ.ಎ. ನಿವೇಶನ ಕೊಟ್ಟಿದ್ದೇವೆ. ಇದನ್ನು ಗಮನಿಸದೆ ಬಿಜೆಪಿಯವರು ಇಲ್ಲಿ ರಾಜಕೀಯ ಮಾಡುವ ಆತುರದಲ್ಲಿದ್ದಾರೆ. ನಾವೂ ಸಹ ಅವರಂತೆಯೇ ಬಿಜೆಪಿ ನಾಯಕರ ಜಾತಕ ತೆಗೆದರೆ, ಇವರೆಲ್ಲರ ಬಣ್ಣ ಬಯಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಖರ್ಗೆಯವರ ಟ್ರಸ್ಟಿಗೆ ನಾವು ಸಿ.ಎ. ನಿವೇಶನವನ್ನು ಮೆರಿಟ್ ಮತ್ತು ನಿಯಮಗಳಿಗೆ ಅನುಸಾರವಾಗಿಯೇ ಕೊಟ್ಟಿದ್ದೇವೆ. ಇದರಲ್ಲಿ ನಿಯವೇನೂ ಉಲ್ಲಂಘನೆ ಆಗಿಲ್ಲ. ಜೊತೆಗೆ, ಈ ನಿವೇಶನದ ಬೆಲೆಯಲ್ಲಿ ಅವರಿಗೆ ಯಾವ ರಿಯಾಯಿತಿಯನ್ನೂ ಕೊಟ್ಟಿಲ್ಲ. ಇವೆಲ್ಲವೂ ಸಂಪೂರ್ಣ ಪಾರದರ್ಶಕವಾಗಿಯೇ ನಡೆದಿದೆ ಎಂದರು.

ಈಗ ಕೈಗಾರಿಕಾ ಪ್ರದೇಶಗಳ ಸಿ.ಎ. ಮತ್ತು ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ನಿಯಮಗಳಪ್ರಕಾರ, ಸಿ.ಎ. ನಿವೇಶನಗಳ ಹರಾಜಿಗೆ ಅವಕಾಶವಿಲ್ಲ. ಈ ಅವಕಾಶವಿರುವುದು ಕಮರ್ಷಿಯಲ್ ಪ್ಲಾಟ್​​ಗಳಿಗೆ ಮಾತ್ರ. ಇದು 12-1-2023ರಂದು ಕೆಐಎಡಿಬಿ ಬೋರ್ಡ್ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನ. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು ತಾನೇ? ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಇಬ್ಬರೂ ಯಾವ ಕನ್ನಡಕ ಹಾಕಿಕೊಂಡಿದ್ದಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಛಲವಾದಿ ನಾರಾಯಣಸ್ವಾಮಿ ಕೂಡ 19-7-2006ರಂದು ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿ (ಇದು ವಾಸ್ತವವಾಗಿ ಮಂಡ್ಯ ಜಿಲ್ಲೆಯಲ್ಲಿ ಬರುತ್ತೆ- ಕೆ.ಆರ್. ರಸ್ತೆ) ನಿವೇಶನ ಸಂಖ್ಯೆ 57-ಪಿ1 ಇಲ್ಲಿ ಎರಡು ಎಕರೆ (8,029 ಚದರ ಮೀಟರ್) ಜಮೀನು ಪಡೆದುಕೊಂಡಿದ್ದಾರೆ. ಮೊದಲು ಅವರು ಇಲ್ಲಿ `ಬೃಂದಾವನ ಸಾಫ್ಟ್ವೇರ್ ಟೆಕ್ನಾಲಜೀಸ್’ ಎನ್ನುವ ಹೆಸರಿನ ಉದ್ಯಮ ಸ್ಥಾಪಿಸುತ್ತೇವೆ ಎಂದು ಹೇಳಿದ್ದರು. ಆದರೆ ಅಂತಹ ಕಂಪನಿ ಏನಾಯ್ತೋ ಅವರೇ ಹೇಳಬೇಕು. ಬಳಿಕ ಅಲ್ಲಿ ರೆಡಿಮೇಡ್ ಗಾರ್ಮೆಂಟ್ಸ್ ಘಟಕ ಶುರು ಮಾಡುತ್ತೇವೆ ಎಂದರು. ಈ ಸಂಬಂಧದ ಭೂಮಿ ಹಂಚಿಕೆ 21-07-2006ರಂದು ನಡೆದಿದ್ದು, 22-2-2008ರಂದು ಅವರಿಗೆ ಸ್ವಾಧೀನ ಪತ್ರ ನೀಡಲಾಗಿದೆ. 13-12-2010ರಲ್ಲಿ ಈ ಸಂಬಂಧ ಗುತ್ತಿಗೆ ಕರಾರನ್ನೂ ನೆರವೇರಿಸಲಾಗಿದೆ. ನಾರಾಯಣಸ್ವಾಮಿ ಇದನ್ನು ಪಡೆದುಕೊಂಡಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇತ್ತಲ್ಲವೇ? ವಿಚಿತ್ರವೆಂದರೆ, ಅವರು ಗಾರ್ಮೆಂಟ್ಸ್ ಕೂಡ ಶುರು ಮಾಡಲಿಲ್ಲ. ಆಮೇಲೆ, ನಾರಾಯಣಸ್ವಾಮಿಯವರಿಗೆ ಉಗ್ರಾಣವನ್ನು ಶುರು ಮಾಡುವ ಕನಸು ಬೀಳತೊಡಗಿತು. ಇದಕ್ಕೆ 26-7-2014ರಂದು ಅನುಮೋದನೆಯನ್ನು ಕೂಡ ಕೊಡಲಾಗಿದೆ. ಆದರೆ ಇದು ಕೂಡ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

2006ರಲ್ಲಿ ಪಡೆದುಕೊಂಡ ಜಮೀನಿನಲ್ಲಿ ನಾರಾಯಣಸ್ವಾಮಿಯವರು 2016ರವರೆಗೂ ಯಾವ ಕೈಗಾರಿಕಾ ಚಟುವಟಿಕೆಯನ್ನೂ ಆರಂಭಿಸಲಿಲ್ಲ. ಹೀಗಾಗಿ, ನಿಯಮಾವಳಿಯ ಪ್ರಕಾರ ಸರ್ಕಾರವು 11-11-2016ರಂದು ಈ ಜಮೀನನ್ನು ವಾಪಸ್ ಪಡೆದುಕೊಳ್ಳಲು ಆದೇಶಿಸಿತು. ಈಗ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿರುವ ಅವರು ಆಗ ಇದರ ವಿರುದ್ಧ ಹೈಕೋರ್ಟಿನ ಮೆಟ್ಟಿಲೇರಿದ್ದನ್ನು ಜ್ಞಾಪಿಸಿಕೊಳ್ಳಬೇಕು. ಮತ್ತೆ ನಾರಾಯಣಸ್ವಾಮಿ ಅವರಿಗೆ ಕೈಗಾರಿಕಾ ಚಟುವಟಿಕೆ ಆರಂಭಿಸಲು 7-11-2022ರಿಂದ 6-5-2023ರವರೆಗೆ 6 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಇಷ್ಟಕ್ಕೂ ಇವರಿಗೆ ಹಂಚಿಕೆ ಮಾಡಿದ್ದ ಎರಡು ಎಕರೆಯಲ್ಲಿ ಕನಿಷ್ಠ ಶೇ 50ರಷ್ಟಾದರೂ ಅಭಿವೃದ್ಧಿ ಪಡಿಸಿ, ಬಳಕೆ ಮಾಡಬೇಕು. ಇದು ನಿಯಮ. ಆದರೆ ನಾರಾಯಣಸ್ವಾಮಿ ಅವರು ಬಳಕೆ ಮಾಡಿರುವುದು ಶೇ 5ರಷ್ಟು ಮಾತ್ರ. ಒಂದು ಶೆಡ್ ಕಟ್ಟಿ ಬಾಡಿಗೆಗೆ ಇದೆ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಷ್ಟು ಬಿಟ್ರೆ ಏನೂ ಆಗಿಲ್ಲ. ಈ ಘನಂಧಾರಿ ಕೆಲಸಕ್ಕಾ ಇವರಿಗೆ ಜಾಗ ಕೊಟ್ಟಿದ್ದು? ಇದರಿಂದ ಯಾರಿಗೆ ಏನು ಪ್ರಯೋಜನ ಆಯಿತು? ಎಂದು ಪ್ರಶ್ನಿಸಿದರು.

ಇಂತಹ ವ್ಯಕ್ತಿಗೆ ಕಾಂಗ್ರೆಸ್ ಮತ್ತು ಖರ್ಗೆ ಕುಟುಂಬದ ವಿರುದ್ಧ ಮಾತನಾಡಲು ಯಾವ ನೈತಿಕ ಹಕ್ಕಿದೆ? ನೀತಿ ಪಾಠ ಹೇಳುವ ಇವರು 2006ರಿಂದ ಇಲ್ಲಿಯವರೆಗೂ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ? ಎಷ್ಟು ಹೂಡಿಕೆ ಮಾಡಿದ್ದಾರೆ? ಹಾಗಾದರೆ ಇವರು ನಿವೇಶನ ತೆಗೆದುಕೊಂಡಿದ್ದಾದರೂ ಏಕೆ? ರಿಯಲ್ ಎಸ್ಟೇಟ್ ದಂಧೆ ಮಾಡುವುದಕ್ಕೇ? ಹೋಗಲಿ ಕೈಗಾರಿಕೆ ಮಾಡಲು ಇವರಿಗೆಲ್ಲಿತ್ತು ಪ್ರಾವೀಣ್ಯತೆ ? ನಾರಾಯಣಸ್ವಾಮಿ ರಾಜಕೀಯವಾಗಿ ಈ ಸ್ಥಾನಕ್ಕೆ‌ ಬಂದಿದ್ದರೆ ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಕಾರಣ ಎಂಬುದನ್ನು ಮರೆಯಬಾರದು. ಖರ್ಗೆ ಅವರು ರೈಲ್ವೆ ಸಚಿವರಿದ್ದಾಗ ಇದೇ ನಾರಾಯಣಸ್ವಾಮಿ ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕರನ್ನಾಗಿ ಮಾಡಲಾಯಿತು. ಇವರಿಗೆ ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದವರು. ಆದರೂ ತಿಂದ ಮನೆಗೆ ಮೂರು ಬಗೆದು, ಖರ್ಗೆ ಬಗ್ಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಉನ್ನತ ಸ್ಥಾನ‌ ಪಡೆಯಬಹುದು ಅಂದುಕೊಂಡು ಸುಳ್ಳು ಆರೋಪ ಮಾಡುತ್ತಿದ್ದಾರೆ. ಖರ್ಗೆ ಅವರಿಗೆ ಇಡೀ ಜೀವನ ಪರ್ಯಂತ ನಾರಾಯಣಸ್ವಾಮಿ ಋಣಿಯಾಗಿರಬೇಕು ಎಂದು ಹೇಳಿದರು.

More articles

Latest article