ಬೆಂಗಳೂರು: ಕರ್ನಾಟಕವನ್ನು ದೇಶದಲ್ಲೇ ನಂ.1 ಉತ್ಪಾದನಾ ವಲಯವನ್ನಾಗಿ ಅಭಿವೃದ್ಧಿಪಡಿಸಲು ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಮ್ಮ ಇಲಾಖೆಯ 2 ವರ್ಷಗಳ ಸಾಧನೆ ಹಾಗೂ ಭವಿಷ್ಯದ ಪಥ ಕುರಿತು ವಿವರ ನೀಡಿದರು.
ತಮ್ಮ ಸರ್ಕಾರ ಬಂದ 2 ವರ್ಷಗಳಲ್ಲಿ ರಾಜ್ಯದಲ್ಲಿ 6,57,660 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, 115 ಒಡಂಬಡಿಕೆಗಳಾಗಿವೆ. ಇದರಿಂದ 2,32,771 ಉದ್ಯೋಗ ಸೃಷ್ಟಿ ಆಗಲಿದೆ. ಏಕಗವಾಕ್ಷಿ ಅನುಮೋದನೆ ಸಮಿತಿಯೂ 906 ಯೋಜನೆಗೆ ಒಪ್ಪಿಗೆ ನೀಡಿದ್ದು, ಇದರಿಂದ 1,13,200 ಕೋಟಿ ರೂ. ಹೂಡಿಕೆ ನಿರೀಕ್ಷೆ ಇದೆ. 2,23,982 ಉದ್ಯೋಗ ಸೃಷ್ಟಿ ಆಗಲಿದೆ ಎಂದು ವಿವರಿಸಿದರು.
ವಿಯೆಟ್ನಾಂ ಹಾಗೂ ಇತರ ದೇಶಗಳಂತೆ ಕರ್ನಾಟಕದಲ್ಲೂ ಉತ್ಪಾದನಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗ ನಾಲ್ಕನೇ ಸ್ಥಾನದಲ್ಲಿರುವ ರಾಜ್ಯವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಶ್ರೀನಿವಾಸಪುರದಲ್ಲಿ ಫಾರ್ಮ ಪಾರ್ಕ್, ವಿಜಯಪುರದಲ್ಲಿ ಎಲೆಕ್ಟ್ರಿಕಲ್ ಸೆಲ್ ಉತ್ಪಾದನೆ, ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್, ಹುಬ್ಬಳ್ಳಿಯಲ್ಲಿ ನವೋದ್ಯಮ ಹಾಗೂ ಭವಿಷ್ಯದ ತಾಂತ್ರಿಕ ಅಭಿವೃದ್ಧಿ, ದಾಬಸ್ಪೇಟೆ-ದೊಡ್ಡಬಳ್ಳಾಪುರ ನಡುವೆ ಆರೋಗ್ಯ, ಶಿಕ್ಷಣ ಸೇವೆಗಳ ಮೂಲಕ ಕ್ಲೀನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಡೆ ವಿಶೇಷ ಪಾರ್ಕ್ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹುಬ್ಬಳ್ಳಿಯ ಎನ್ ಜಿ ಎಫ್ ಅನ್ನು ಪುನರುಜ್ಜೀವನಗೊಳಿಸಲಾಗುವುದು. ಎಂಎಸ್ ಐಎಲ್ನ ಚಿಟ್ ಫಂಡ್ ವಹಿವಾಟನ್ನು 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಫೆಬ್ರವರಿಯಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 3,550 ಉದ್ಯಮಿಗಳು ಭಾಗವಹಿಸಿದ್ದು, 6,23,957 ಕೋಟಿ ರೂ.ಗಳ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರಲ್ಲಿ 4.03 ಲಕ್ಷ ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶೇ.75 ರಷ್ಟು ಬೆಂಗಳೂರಿನ ಹೊರವಲಯದಲ್ಲಿದ್ದು, ಶೇ.45 ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಹೂಡಿಕೆಯಾಗುತ್ತದೆ ಎಂದರು.
ಬಂಡವಾಳ ಹೂಡಿಕೆದಾರರಿಗೆ ಉದ್ಯೋಗ ಸೃಷ್ಟಿ, ಹೂಡಿಕೆ, ಪರಿಸರ ಸ್ನೇಹಿ ಕ್ರಮಗಳನ್ನು ಆಧರಿಸಿ ವಿವಿಧ ರಿಯಾಯಿತಿ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ. ಕೈಗಾರಿಕಾ ಪ್ರದೇಶಗಳಿಗೆ ಸಮರ್ಪಕ ನೀರಿನ ವ್ಯವಸ್ಥೆಗಾಗಿ 3,600 ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. 18 ಪ್ರದೇಶಗಳಲ್ಲಿ 44,165 ಎಕರೆಯಲ್ಲಿ ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದರು. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮೂರನೇ ಸ್ಥಾನದಿಂದ ಕರ್ನಾಟಕ, 2024-25ನೇ ಸಾಲಿನಲ್ಲಿ 56 ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ 2ನೇ ಸ್ಥಾನಕ್ಕೇರಿದೆ. 1,65,545 ಮಿಲಿಯನ್ ಡಾಲರ್ ರಫ್ತಿನೊಂದಿಗೆ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದ್ದೇವೆ ಎಂದು ವಿವರಿಸಿದರು. ಮೈಸೂರು ಸ್ಯಾಂಡಲ್ನ ಕೆಎಸ್ ಡಿ ಸಿಎಲ್ ವಹಿವಾಟು ಈ ತಿಂಗಳಿನಲ್ಲಿ 180 ಕೋಟಿ ರೂ. ದಾಟಿದ್ದು ಮುಂದಿನ 3 ವರ್ಷದಲ್ಲಿ 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವ ಗುರಿ ಇದೆ ಎಂದರು.
ಅಭಿವೃದ್ಧಿಗೆ ಪೂರಕವಾದ ಹೊಸ ಕೈಗಾರಿಕಾ ನೀತಿ 2025-30 ಘೋಷಣೆ ಮಾಡಲಾಗಿದೆ. ಹೊಸ ಕೈಗಾರಿಕೆ ನೀತಿ ಕೈಗಾರಿಕಾ. 5 ವರ್ಷಗಳಲ್ಲಿ 7.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಣೆ ಮಾಡುವುದು ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.
ಪರಿಸರ ಸ್ನೇಹಿ ಇಂಧನ ನೀತಿ 2024-29 ಜಾರಿ ಮಾಡಲಾಗಿದೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. 50 ಸಾವಿರ ಹೂಡಿಕೆ ಆಕರ್ಷಣೆಯ ಗುರಿ ಇದೆ. ಕ್ವೀನ್ ಸಿಟಿ ವಿನೂತನ ಯೋಜನೆ ಅನುಷ್ಠಾನ ಮಾಡಲಾಗ್ತಿದೆ. 2000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಈ ಕ್ವೀನ್ ಸಿಟಿ ಬರಲಿದೆ. 40 ಸಾವಿರ ಹೂಡಿಕೆ ಆಗಲಿದೆ. 80 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ತಿಳಿಸಿದರು.
ಹುಬ್ಬಳ್ಳಿ, ಬೆಳಗಾವಿ ಏರ್ ಪೋರ್ಟ್ ಅನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಪ್ರಯತ್ನ ಮಾಡ್ತಿದ್ದೇವೆ. ಶೀಘ್ರವೇ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಶಿವಮೊಗ್ಗ ವಿಮಾನ ನಿಲ್ದಾಣ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ. ವಿಜಯಪುರ ವಿಮಾನ ನಿಲ್ದಾಣದ ಕೆಲಸ ಬಹುತೇಕ ಮುಕ್ತಾಯವಾಗಿದ್ದು, ಶೀಘ್ರವೇ ಪ್ರಾರಂಭವಾಗಲಿದೆ. ಹಾಸನ, ರಾಯಚೂರು, ಬಳ್ಳಾರಿ ಏರ್ ಪೋರ್ಟ್ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ. 3 ಹೆಲಿಪೋರ್ಟ್ ನಿರ್ಮಾಣದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರವಾರ ಸಿವಿಲ್ ಎನ್ ಕ್ಲೈವ್ಗೆ ಭೂಸ್ವಾಧೀನ ಆಗ್ತಿದೆ. ಬೆಂಗಳೂರಿನಲ್ಲಿ ಎರಡನೇ ಏರ್ಪೋರ್ಟ್ ಆಗಲಿದೆ. ಈಗಾಗಲೇ ಕೇಂದ್ರದ ತಂಡ ಪರಿಶೀಲನೆ ಮಾಡಿದೆ. ಸ್ಥಳ ಯಾವುದು ಎಂದು ಅಂತಿಮವಾಗಿಲ್ಲ ಎಂದು ತಿಳಿಸಿದರು.