ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ ಮಾಣಿಕ್ ರಾವ್ ಕೊಕಾಟೆ ಅವರು ರಾಜ್ಯ ಸರ್ಕಾರವನ್ನೇ ಭಿಕ್ಷುಕ ಎಂದು ಜರಿಯುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅವರು, ಮೊಬೈಲ್ ನಲ್ಲಿ ರಮ್ಮಿ ಆಡುತ್ತಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.
ಇವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ಸಚಿವರು ಈ ರೀತಿ ಹೇಳುವುದು ಸರಿಯಲ್ಲ. ಹಲವು ಸವಾಲುಗಳ ನಡುವೆಯೂ ರಾಜ್ಯದ ಆರ್ಥಿಕ ವ್ಯವಸ್ಥೆಯು ಸುಸ್ಥಿತಿಯಲ್ಲಿ ಎಂದು ತಿಳಿಸಿದ್ದಾರೆ.
ಎನ್ ಸಿ ಪಿ ನಾಯಕರೂ ಆಗಿರುವ ಕೊಕಾಟೆ ಅವರು, ಈ ವರ್ಷದ ಆರಂಭದಲ್ಲಿ ರೈತರನ್ನು ಭಿಕ್ಷುಕರಿಗೆ ಹೋಲಿಸಿ ಹೇಳಿಕೆ ನೀಡಿದ್ದರು. ಈಗ ಭಿಕ್ಷುಕರು ಸಹ 1 ರೂಪಾಯಿಯನ್ನು ಮುಟ್ಟುವುದಿಲ್ಲ. ಆದರೆ ಇಲ್ಲಿ ನಾವು ರೂ.1ಕ್ಕೆ ಬೆಳೆವಿಮೆ ನೀಡುತ್ತಿದ್ದೇವೆ. ಆದನ್ನೂ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದರು. ಇವರ ಹೇಳಿಕೆಗೆ ರಾಜ್ಯದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಈ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕೊಕಾಟೆ ಅವರು, ಇಲ್ಲಿ ಸರ್ಕಾರ ರೈತರಿಗೆ ಅನ್ನು ನೀಡುತ್ತಿಲ್ಲ. ಬದಲಿಗೆ ಸರ್ಕಾರವೇ ರೈತರಿಂದ ರೂ.1 ಅನ್ನು ತೆಗೆದುಕೊಳ್ಳುತ್ತಿದೆ. ಅಂದರೆ ಇಲ್ಲಿ ಸರ್ಕಾರವೇ ಭಿಕ್ಷುಕನಾಗಿದೆ ಎಂದು ಹೇಳಿದ್ದರು.
ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಆರಂಭಿಸಲಾದ ರೂ.1ರ ಬೆಳೆ ವಿಮೆ ಯೋಜನೆಯನ್ನು ಕೆಲವು ತಿಂಗಳ ಹಿಂದೆಯಷ್ಟೇ ರದ್ದುಪಡಿಸಲಾಗಿದೆ. ಅದರ ಬದಲಿಗೆ ಪ್ರಧಾನ ಮಂತ್ರಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಸುಪ್ರಿಯಾ ಟೀಕೆ: ಕೃಷಿ ಸಚಿವ ಕೊಕಾಟೆ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಎನ್ಸಿಪಿ (ಎಸ್ಪಿ) ಸಂ-ಸುಪ್ರಿಯಾ ಸುಳೆ, ‘ರಾಜ್ಯದ ಆಡಳಿತವನ್ನು ಭಿಕ್ಷುಕ ಎಂದು ಕರೆಯುವುದು ಸರಿಯಲ್ಲ. ಇದರಿಂದ ರಾಜ್ಯದಲ್ಲಿ ಆಡ ನಡೆಸಿದ ಎಲ್ಲ ಮುಖ್ಯಮಂತ್ರಿಗಳ ಶ್ರಮ ಮತ್ತು ರಾಜ್ಯದ ಜನರ ಪರಿಶ್ರಮಕ್ಕೆ ಮಾಡಿದ ಅವಮಾನವಾಗಿದೆ. ಇದನ ಸಹಿಸಿಕೊಳ್ಳಲು ಆಗುವುದಿಲ್ಲ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.