Sunday, September 8, 2024

ಮಂಡ್ಯ ಬಂದ್ ಸಂಪೂರ್ಣ ವಿಫಲ: ಕ್ಯಾರೇ ಎನ್ನದ ಜನತೆ, ಸಂಘಪರಿವಾರದ ಸಂಘಟನೆಗಳಿಗೆ ಮುಖಭಂಗ!

Most read

ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮಧ್ವಜ ವಿಷಯ ರಾಜ್ಯಾದ್ಯಂತ ಕೋಮುದ್ವೇಷ ಚರ್ಚೆ, ವಾಗ್ವಾದಕ್ಕೆ ಕಾರಣವಾಗಿತ್ತು. ಅನೇಕ ವಿರೋಧ ಪಕ್ಷದ ಶಾಸಕರು, ನಾಯಕರು ಈ ಒಂದು ಪ್ರಕರಣಕ್ಕೆ ರಾಜಕೀಯ ಲೇಪ ಬಳಿದು ಇಡೀ ಮಂಡ್ಯ ವಾತಾವರಣವನ್ನೇ ಕೆಡಿಸುವ ಪ್ರಯತ್ನಗಳು ನಡೆಸಿದಿದ್ದಾರೂ, ಎಚ್ಚೆತ್ತ ಮಂಡ್ಯ ಜನತೆ ಇದಕ್ಕೆಲ್ಲ ಕ್ಯಾರೆ ಅನ್ನದೆ ತಮ್ಮ ದಿನನಿತ್ಯದ ಕೆಲಸದಲ್ಲಿ ತೊಡಗಿದ್ದಾರೆ.

ಇಂದು ಮಂಡ್ಯ ಬಂದ್ ಕರೆ ಕೊಟ್ಟಿದ್ದ ಸಂಘಪರಿವಾರದ ಸಂಘಟನೆಗಳು ತಮ್ಮ ಪಾಡಿಗೆ ಬೈಕ್ ರ್ಯಾಲಿ ಮಾಡಿಕೊಂಡು ಜೈ ಶ್ರೀರಾಮ್ ಎಂದು ಕಿರುಚುತ್ತಾ ಸಾಗಿದರೆ. ಮಂಡ್ಯ ಜನತೆ ತಮ್ಮ ಪಾಡಿಗೆ ವ್ಯಾಪಾರ ವಹಿವಾಟಿನಲ್ಲಿ ಬ್ಯೂಸಿಯಾಗಿದ್ದರು.

ಮಂಡ್ಯ ಜಿಲ್ಲಾಧಿಕಾರಿಗಳು ಎರಡು ಪ್ರತ್ಯೇಕ ಸಭೆ ನಡೆಸಿ ಬಂದ್ ಕೈಬಿಡುವಂತೆ ಮನವಿ ಮಾಡಿದ ಬೆನ್ನಲ್ಲೇ ಮಂಡ್ಯ ಸಮಾನ ಮನಸ್ಕರ ವೇದಿಕೆ ಬಂದ್ ಅನ್ನು ಷರತ್ತುನಿಯ ಮೇಲೆ ಕೈಬಿಟ್ಟಿತ್ತು. ಆದರೆ ಸಂಘಪರಿವಾರದ ಸಂಘಟನೆಗಳು ಜಿಲ್ಲಾಧಿಕಾರಿಗಳ ಮನವಿಗೂ ಕ್ಯಾರೆ ಅನ್ನದೆ ಇಂದು ಶುಕ್ರವಾರ ಬಂದ್ ಕರೆ ಕೊಟ್ಟು ಕೆರೆಗೋಡಿನಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿವರೆಗೂ ರ್ಯಾಲಿ ಮಾಡಿದೆ.

ಕೆರೆಗೋಡು ಗ್ರಾಮದ ಜನರೇ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡು ಬಂದ್ಗೆ ಸಾಂಕೇತಿಕವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಬಹುದು. ಇನ್ನು ಮಂಡ್ಯ ಬಂದ್ ಸಂಪೂರ್ಣ ವಿಫಲವಾಗಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ದಿನನಿತ್ಯದಂತೆ ನಡೆಯುತ್ತಿದೆ. ಮಂಡ್ಯ ಜನತೆಯ ಈ ನಡೆ ರಾಜಕೀಯ ದ್ವೇಷ ನಮ್ಮ ಮಂಡ್ಯ ಜಿಲ್ಲೆಯ ಶಾಂತಿಯನ್ನು ಕೆಡಿಸಲು ಸಾಧ್ಯವಿಲ್ಲ ಎಂದು ಸಾರಿ ಸಾರಿ ಹೇಳುತ್ತಿದೆ.

ಇಂದು ಶುಕ್ರವಾರ ಸಂಘಪರಿವಾರ ಸಂಘಟನೆಗಳು ಮಂಡ್ಯ ಬಂದ್‌‌ಗೆ ಕರೆ ನೀಡಿದ್ದವು. ಈ ಬಂದ್‌ಗೆ ಜೆಡಿಎಸ್, ಬಿಜೆಪಿ ಬೆಂಬಲ ಇಲ್ಲ ಅಂತ ಬಿಜೆಪಿ ಮುಖಂಡ ಅಶೋಕ್ ಜಯರಾಂ ಹೇಳಿದ್ದರು. ಧ್ವಜ ವಿವಾದ ಎಬ್ಬಿಸಿದ ದಿನದಿಂದಲೂ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದ ಬಿಜೆಪಿ ಜೆಡಿಎಸ್ ನಾಯಕರು ಇದರಿಂದ ಲಾಭವಾಗುವುದು ಕಷ್ಟ ಎಂದು ತಿಳಿದ ತಕ್ಷಣ ಬಂದ್ನಿಂದ ಹಿಂದೆ ಸರಿದಂತೆ ಕಾಣುತ್ತಿದೆ.

ಈ ಕುರಿತು ಮಂಡ್ಯದ ಸ್ಥಳೀಯ ನಿವಾಸಿಗಳಾದ ಲಕ್ಷ್ಮಣ್ ಅವರು ಕನ್ನಡಪ್ಲಾನೆಟ್ ಜೊತೆ ಮಾತನಾಡಿ, ಮಂಡ್ಯ ಜನತೆ ಆರಾಮವಾಗಿದ್ದಾರೆ. ದಿನನಿತ್ಯದ ವ್ಯವಹಾರದಲ್ಲಿ ತೊಡಗಿದ್ದಾರೆ. ವರ್ತಕರ ಸಂಘ, ಆಟೋ ಚಾಲಕರ ಸಂಘ ಇನ್ನಿತರೆ ಸಂಘಗಳು ಎಲ್ಲರೂ ಈ ಬಂದ್ ಅನ್ನು ವಿರೋಧಿಸಿದೆ. ಕೇಸರಿ ಧ್ವಜದಿಂದ ಬಿಜೆಪಿ ಜೆಡಿಎಸ್ ಗೆ ರಾಜಕೀಯ ಲಾಭ ಸಿಗೋದಿಲ್ಲ ಎಂಬ ಕಾರಣಕ್ಕೆ ಬಂದ್‌ನಿಂದ ಹಿಂದೆಸರಿದು ಸೇಫ್ ಆಗಿದ್ದಾರೆ. ಸಂಘಪರಿವಾರಕ್ಕೆ ಸಂಪೂರ್ಣ ಮುಖಭಂಗವಾಗಿದೆ.

‘ಮಂಡ್ಯದಲ್ಲಿ ಮಾರ್ವಾಡಿಗಳ ಒಂದಷ್ಟು ಅಂಗಡಿಗಳು ಬಂದ್ ಗೆ ಬೆಂಬಲ ಕೊಟ್ಟಿದ್ದು ಶಾಂತಿಪ್ರಿಯರಿಗೆ ಬೇಸರ ಮೂಡಿಸಿದೆ. ಭಾರತ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದವರನ್ನು ಈ ವ್ಯಾಪಾರಿ ಸಮುದಾಯ ಬೆಂಬಲಿಸಿರುವುದು ದೇಶದ್ರೋಹದ ಕೆಲಸ. ಇನ್ನು ಕರೆಗೋಡಿನಲ್ಲಿ ಬಲವಂತವಾಗಿ ನಾಲ್ಕು ಅಂಗಡಿಗಳನ್ನು ಮುಚ್ಚಿಸಲು ಸಾಧ್ಯವಾಗಿದೆ ಆದರೆ ಗ್ರಾಮದ ಜನರು ದಿನನಿತ್ಯದ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿದ್ದಾರೆ’ ಎಂದು ಹೇಳಿದರು.

More articles

Latest article