ಬೆಂಗಳೂರು: ಹಂಪನಾ ಅವರು ಕೇವಲ ಸಾಹಿತ್ಯ ರಚನೆಗಾಗಿ ಸಾಹಿತಿಯಾದವರಲ್ಲ. ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. ಗಾಂಧಿ ಭವನದಲ್ಲಿ ನಡೆದ “ಹಂಪನಾ– 90″ ಸಾಹಿತ್ಯ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಂಪನಾ ಅವರನ್ನು ಅಭಿನಂದಿಸಿ ಮಾತನಾಡಿದರು.
ಹಂಪನಾ ಅವರು ಸಮಾಜಮುಖಿ ಆಗುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ಇವರು ಕನ್ನಡಿಗರ ಹೆಮ್ಮೆಯ ನಾಗರಾಜಯ್ಯ. ಇವರ ಸಾಹಿತ್ಯ ಮತ್ತು ಬದುಕಿಗೆ ನಾನು ಸಾಕ್ಷಿ ಆಗಿರುವುದು ನನ್ನ ಜೀವನದ ಸೌಭಾಗ್ಯ ಎಂದರು. ಇವರ ಬದುಕು ಮತ್ತು ಬರಹ ಹಾಗೂ ಸಾರ್ಥಕತೆ ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದರು.
ಸಾಹಿತ್ಯ ಕೃಷಿಯಲ್ಲಿ ಮಾತ್ರವಲ್ಲದೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ. ಇವರ ಕೆಲಸ ಕನ್ನಡ ಜಗತ್ತಿಗೆ ತಲುಪಿರುವುದು ಅತ್ಯಂತ ಮಹತ್ವದ ಸಂಗತಿ. ಭಾಷಾ ಶಾಸ್ತ್ರ, ಸಂಶೋಧನೆ, ಮಕ್ಕಳ ಸಾಹಿತ್ಯ, ವಿಮರ್ಶೆ ಸೇರಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬೆರಗು ಮೂಡಿಸುವ ಕೆಲಸ ಮಾಡಿದ್ದಾರೆ.
ಹಂಪನಾ ಅವರು ಒಳ್ಳೆ ವಾಗ್ಮಿ. ಸಮಾಜಕ್ಕೆ ಇವರಿಂದ ಬಹಳ ಉಪಕಾರ ಆಗುತ್ತದೆ. ಅಧ್ಯಾಪಕರೂ ಆಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರೂ ಆಗಿದ್ದರು. ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಆದರೂ ಸಾಹಿತ್ಯ ವಲಯದ ಒಡನಾಟ ಹೆಚ್ಚಾಗಿದ್ದು ನಾನು ಹಂಪನಾ ಅವರ ಅಭಿಮಾನಿ ಎಂದರು.
ಹಂಪನಾ ಅವರು ಇನ್ನೂ ನೂರು ಕಾಲ ಆರೋಗ್ಯವಂತರಾಗಿ ಬದುಕಲಿ ಎಂದು ಹಾರೈಸಿದರು.
ಕಮಲಾ ಮತ್ತು ಹಂಪನಾ ಅವರದ್ದು ಅದ್ಭುತ ದಾಂಪತ್ಯ. ಇಬ್ಬರೂ ಸಾಹಿತ್ಯ ಕೃಷಿಯಲ್ಲಿ ಸಾಧನೆ ಮಾಡಿದವರು. ಇಬ್ಬರೂ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.