ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ಏಕೆ ದಾಖಲಿಸಿಲ್ಲ ಎಂದು ಸಂಸದೀಯ ಸಮಿತಿ ಪ್ರಶ್ನಿಸಿದೆ.
ಬಿಜೆಪಿಯ ರಾಜ್ಯಸಭಾ ಸಂಸದ ಬ್ರಿಜ್ ಲಾಲ್ ನೇತೃತ್ವದ ಸಿಬ್ಬಂದಿ ಸಾರ್ವಜನಿಕ ಕುಂದುಕೊರತೆ ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸಮಿತಿ ಈ ಪ್ರಕರಣ ಕುರಿತು ಚರ್ಚೆ ನಡೆಸಿತ್ತು. ಸಮಿತಿ ಮುಂದೆ ಹಾಜರಾಗಿದ್ದ ನ್ಯಾಯಾಂಗ ಇಲಾಖೆ ಕಾರ್ಯದರ್ಶಿ ಪ್ರಕರಣ ಕುರಿತು ವಿವರಣೆ ನೀಡಿದ್ದಾರೆ. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಹಾಗೂ ಪ್ರಸ್ತಾಪಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಸಮಿತಿಯ ಮುಂದಿನ ಸಭೆಯಲ್ಲಿ ಸಮಗ್ರ ವರದಿ ಮಂಡಿಸುವಂತೆ ಸೂಚಿಸಲಾಯಿತು ಎಂದು ತಿಳಿದು ಬಂದಿದೆ.
ಈ ಪ್ರಕರಣವು ನ್ಯಾಯಾಂಗ ಕುರಿತು ಸಾರ್ವಜನಿಕರಲ್ಲಿ ಆತಂಕ ಮೂಡುವಂತೆ ಮಾಡಿದೆ. ನ್ಯಾಯಾಧೀಶರು ಹಾಗೂ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆ ರೂಪಿಸಬೇಕು. ಇದಕ್ಕಾಗಿ ಸಮಗ್ರ ಮಸೂದೆಯೊಂದರ ಅಗತ್ಯವಿದೆ ಎಂಬುದಾಗಿ ಸಮಿತಿ ಸದಸ್ಯರು ಪ್ರತಿಪಾದಿಸಿದರು ಎಂದು ಮೂಲಗಳು ತಿಳಿಸಿವೆ.
ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಹಣ ವಶಪಡಿಸಿಕೊಂಡಿರುವುದು ಸತ್ಯ ಎಂಬುದಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿಗಳ ಸಮಿತಿ ತಿಳಿಸಿದೆ. ಹಾಗಾದರೆ ನ್ಯಾಯಮೂರ್ತಿ ವರ್ಮಾ ಅವರ ಪದಚ್ಯುತಿಗೆ ಸಂಬಂಧಿಸಿದಂತೆ ಸರ್ಕಾರ ಗೊತ್ತುವಳಿ ಮಂಡಿಸಬೇಕಿತ್ತು ಎಂದು ಸಮಿತಿಯ ಕೆಲ ಸದಸ್ಯರು ಆಗ್ರಹಪಡಿಸಿದ್ದಾರೆ. ವಿವಿಧ ಪಕ್ಷಗಳ ಸಂಸದರು ಸಮಿತಿ ಸದಸ್ಯರಾಗಿದ್ದು, ಸಮಿತಿ ಸದಸ್ಯರ ಪೈಕಿ ಒಬ್ಬರಾದ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಸಭೆಗೆ ಹಾಜರಾಗಿರಲಿಲ್ಲ.
ಸಮಿತಿಯು ಹಲವು ಸಲಹೆಗಳನ್ನು ನೀಡಿದೆ. ನಿವೃತ್ತಿ ನಂತರ ಐದು ವರ್ಷ ಪೂರ್ಣಗೊಳ್ಳುವವರೆಗೆ ನ್ಯಾಯಮೂರ್ತಿಗಳು ಸರ್ಕಾರ ನೀಡುವ ಯಾವುದೇ ಹುದ್ದೆಯನ್ನು ಒಪ್ಪಿಕೊಳ್ಳಬಾರದು. ನ್ಯಾಯಮೂರ್ತಿ ವರ್ಮಾ ಅವರ ನಿವಾಸದಲ್ಲಿ ಲೆಕ್ಕಪತ್ರವಿಲ್ಲದ ನಗದು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ ಏಕೆ?. ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸುವ ಕುರಿತ ಗೊತ್ತುವಳಿ ಮಂಡನೆ ಏಕೆ ಮಾಡಿಲ್ಲ. ಸಣ್ಣ ಪ್ರಮಾಣದ ಭ್ರಷ್ಟಾಚಾರದಲ್ಲಿ ಸರ್ಕಾರಿ ನೌಕರ ತನ್ನ ಉದ್ಯೋಗ ಕಳೆದುಕೊಳ್ಳುತ್ತಾರೆ. ಆದರೆ ನ್ಯಾಯಾಂಗದ ಅತ್ಯುನ್ನತ ಹುದ್ದೆಯಲ್ಲಿರುವ ವ್ಯಕ್ತಿಯ ನಿವಾಸದಲ್ಲಿ ಲೆಕ್ಕಪತ್ರ ಇಲ್ಲದ ನಗದು ವಶಪಡಿಸಿಕೊಂಡಿದ್ದರೂ ಏಕೆ ಕ್ರಮ ಜರುಗಿಸಿಲ್ಲ ಎಂದೂ ಸಮಿತಿ ಪ್ರಶ್ನಿಸಿದೆ.