ನವದೆಹಲಿ: ಗಾಜಾ ಮೇಲೆ ಇಸ್ರೇಲ್ ನಡೆಸಿರುವ ಹಠಾತ್ ದಾಳಿಯನ್ನು ಕಾಂಗ್ರೆಸ್ ನಾಯಕಿ ಸಂಸದೆ ಪ್ರಿಯಾಂಕಾ ಗಾಂಧಿ ಖಂಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಪ್ರಿಯಾಂಕಾ, ‘ಇಸ್ರೇಲ್ ಸರ್ಕಾರವು 130 ಮಕ್ಕಳು ಸೇರಿದಂತೆ 400 ಅಮಾಯಕ ನಾಗರಿಕರನ್ನು ಕ್ರೂರವಾಗಿ ಹತ್ಯೆ ಮಾಡಿದೆ. ಮಾನವೀಯತೆಗೆ ಇಸ್ರೇಲ್ ಬೆಲೆಯೇ ಕೊಡುತ್ತಿಲ್ಲ’ ಎಂದು ತೀಕ್ಷ್ಮವಾಗಿ ಪ್ರತಿಕ್ರಿಸಿಯಿದ್ದಾರೆ.
ಕದನ ವಿರಾಮ ಉಲ್ಲಂಘಿಸಿ ಗಾಜಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರಲ್ಲದೆ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
‘ಇಸ್ರೇಲ್ ನರಮೇಧವನ್ನು ಪಾಶ್ಚಿಮಾತ್ಯ ಶಕ್ತಿಗಳು ಬೆಂಬಲಿಸಿದರೂ ಆತ್ಮಸಾಕ್ಷಿ ಹೊಂದಿರುವ ಜಗತ್ತಿನ ಎಲ್ಲ ನಾಗರಿಕರು ಖಂಡಿಸುತ್ತಾರೆ. ಈ ದಾಳಿಯು ದೌರ್ಬಲ್ಯ ಮತ್ತು ಸತ್ಯವನ್ನು ಎದುರಿಸುವಲ್ಲಿ ಇಸ್ರೇಲ್ ಅಸಮರ್ಥತೆಯನ್ನು ತೋರಿಸುತ್ತದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
‘ಇಸ್ರೇಲ್ ಸರ್ಕಾರ ಕ್ರೂರವಾಗಿ ವರ್ತಿಸಿದಷ್ಟು ನಿಜಕ್ಕೂ ಹೇಡಿತನವನ್ನು ಬಹಿರಂಗಪಡಿಸುತ್ತದೆ. ಮತ್ತೊಂದೆಡೆ ಪಾಲೆಸ್ಟೀನಿಯರ ಧೈರ್ಯ ಮೇಲುಗೈ ಸಾಧಿಸುತ್ತದೆ. ಅವರು ಊಹಿಸಲು ಸಾಧ್ಯವಾಗದಷ್ಟು ನೋವನ್ನು ಸಹಿಸಿಕೊಂಡಿದ್ದಾರೆ. ಅವರ ಛಲ ಅಚಲವಾಗಿ ಉಳಿದಿದೆ. ಸತ್ಯಮೇವ ಜಯತೇ’ ಎಂದು ಹೇಳಿದ್ದಾರೆ.