ಬೆಂಗಳೂರು: ಅಂತಾರಾಷ್ಟ್ರೀಯ ಪ್ರಾಗೈತಿಹಾಸ ತಜ್ಞ ಪ್ರೊಫೆಸರ್ ರವಿ ಕೋರಿಶೆಟ್ಟರ್ ಅವರಿಗೆ ಐದನಿ ಎಂಟರ್ಟೈನ್ಮೆಂಟ್ ಜೀವಮಾನ ಸಾಧನೆಗಾಗಿ ಕೊಡಮಾಡುವ ಐದನಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಐದನಿ ಎಂಟರ್ಟೈನ್ಮೆಂಟ್ ಅಧ್ಯಕ್ಷ, ಖ್ಯಾತ ಗೀತ ರಚನೆಕಾರ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಅವರು ಈ ಪ್ರಶಸ್ತಿಗೆ ಪ್ರೊ.ರವಿ ಕೋರಿಶೆಟ್ಟರ್ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದರು.
ನಂತರ ಅಂತಾರಾಷ್ಟ್ರೀಯ ಪ್ರಾಗೈತಿಹಾಸ ತಜ್ಞ ಪ್ರೊಫೆಸರ್ ರವಿ ಕೋರಿಶೆಟ್ಟರ್ ಅವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂದು ಅವರು ಕಾರಣಗಳನ್ನು ವಿವರಿಸಿದರು.

ಬಳ್ಳಾರಿಯಲ್ಲಿ ಪ್ರೊ. ರವಿ ಕೋರಿಶೆಟ್ಟರ್ ತಮ್ಮ ಬಳಗದೊಂದಿಗೆ ಸೇರಿ ಜಿಲ್ಲಾಡಳಿತದ ಸಹಾಯದಿಂದ ನಿರ್ಮಿಸಿರುವ ರಾಬರ್ಟ್ ಬ್ರೂಸ್ ಫೂಟ್ ಪ್ರಾಗೈತಿಹಾಸ ವಸ್ತು ಸಂಗ್ರಹಾಲಯವು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಇಂತಹ ಒಂದು ಅದ್ಭುತ ವಸ್ತು ಸಂಗ್ರಹಾಲಯ ಏಷಿಯಾದಲ್ಲೇ ಇಲ್ಲ ಎಂದರು. ಐದು ಸಾವಿರ ವರ್ಷಗಳ ಹಿಂದೆಯೇ ಕಲ್ಲುಗಳಲ್ಲಿ ಸಪ್ತ ಸ್ವರಗಳನ್ನು ಗುರುತಿಸಿ ಅಂದಿನ ಕಾಲದಲ್ಲಿಯೇ ಸಂಗೀತ ಪ್ರವರ್ಧಮಾನದಲ್ಲಿತ್ತು ಎನ್ನವುದನ್ನು ಅವರು ಸಂಶೋಧನೆಗಳ ಮೂಲಕ ಪತ್ತೆಹಚ್ಚಿದ್ದಾರೆ. ಇಂದಿಗೂ ಅದರ ದಾಖಲೆಗಳಿವೆ ಎಂದರು. ಪ್ರೊ. ರವಿಕೋರಿಶೆಟ್ಟರ್ ಪೂರ್ವೇತಿಹಾಸದ ಕುರಿತು ಮಾಡಿರುವ ಕೆಲಸ ಹರಪ್ಪಾ ಲಿಪಿ ಕುರಿತು ಕೆಲಸ ಮಾಡಿದ್ದ ಐರವತ್ತಂ ಮಹದೇವನ್ ಅವರಿಗೆ ಸಮನಾದದ್ದು. ಅವರ ಕಾರ್ಯವೈಖರಿ ನೋಡಿ ನಾನೇ ಅಚ್ಚರಿಗೊಳಗಾಗಿದ್ದೇನೆ ಎಂದು ಹಂಸಲೇಖ ಹೇಳಿದರು
ಪ್ರೊಫೆಸರ್ ರವಿ ಕೋರಿಸೆಟ್ಟರ್ ಅಂತಾರಾಷ್ಟ್ರೀಯ ಪ್ರಾಗೈತಿಹಾಸ ತಜ್ಞರು. ಇವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿಗೂ ಇವರು ಭಾಜನರಾಗಬೇಕಿತ್ತು. ಆದರೆ ಅವರು ಸದಾ ಪ್ರಚಾರದಿಂದ ದೂರವಿರುವ ಅಂತರ್ಮುಖಿ ಎಂದು ಬಣ್ಣಿಸಿದರು. ಇದೇ ಕಾರಣಕ್ಕಾಗಿ ಅವರನ್ನು ಐದನಿ ಗುರುತಿಸಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ನವಂಬರ್ 14ರಂದು ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರೊ. ಶೆಟ್ಟರ್ ಅವರಿಗೆ ಚಿನ್ನದ ಪದಕ ಪ್ರಧಾನ ಮಾಡುವ ಮೂಲಕ ಅವರನ್ನು ಪುರಸ್ಕರಿಸುವುದಾಗಿ ಹಂಸಲೇಖ ತಿಳಿಸಿದರು.


ಇತಿಹಾಸ ದರ್ಪಣ ಪತ್ರಿಕೆ ಸಂಪಾದಕ ಹಂ.ಗು.ರಾಜೇಶ್ ಮತ್ತು ಪತ್ರಕರ್ತ ಹರ್ಷಕುಮಾರ್ ಕುಗ್ವೆ ಅವರು ಕೋರಿಶೆಟ್ಟರ್ ಅವರನ್ನು ಪರಿಚಯಿಸಿ ಅವರ ಸಾಧನೆಗಳನ್ನು ವಿವರಿಸಿದರು.
ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಹಿರಿಯ ಶೈಕ್ಷಣಿಕ ತಜ್ಞ ಪ್ರೊಫೆಸರ್ ರವಿ ಕೋರಿಶೆಟ್ಟರ್ ಭಾರತೀಯ ಪ್ಯಾಲಿಯೊಲಿಥಿಕ್ ಪುರಾತತ್ತ್ವ ಶಾಸ್ತ್ರಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ಇತಿಹಾಸಪೂರ್ವ ಮಾನವರು ಮತ್ತು ಅವರ ಪರಿಸರಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಭೂ-ಪುರಾತತ್ವ ವಿಧಾನಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಭಾರತದಲ್ಲಿ ಏಳು ಪುಸ್ತಕಗಳನ್ನು ಮತ್ತು ವಿದೇಶಗಳಲ್ಲಿ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಮತ್ತು ಭಾರತದ ಪ್ರಮುಖ ವಿಜ್ಞಾನ ಪಾಕ್ಷಿಕ ʼಜರ್ನಲ್ ಕರೆಂಟ್ ಸೈನ್ಸ್ʼ ಸಂಪಾದಕರಾಗಿದ್ದಾರೆ. ವಿದ್ವಾಂಸರಾದ ಗಣೇಶ್ ದೇವಿ ಹಾಗೂ ಟೋನಿ ಜೊಸೆಫ್ ಅವರೊಂದಿಗೆ ಸೇರಿಕೊಂಡು ಭಾರತದ ಭಾರತದ 12,000 ವರ್ಷಗಳ ಇತಿಹಾಸ ತಿಳಿಸುವ- ಇಂಡಿಯನ್ಸ್ ಎಂಬ ಬೃಹತ್ ಆಂಗ್ಲ ಕೃತಿಯನ್ನು ಸಂಪಾದಿಸಿದ್ದು ಅದು ಈಗಾಗಲೇ ಹಲವಾರು ಭಾಷೆಗಳಿಗೆ ಅನುವಾದವಾಗಿದೆ. ಸಧ್ಯದಲ್ಲೇ ಕನ್ನಡದಲ್ಲೂ ಪ್ರಕಟಗೊಳ್ಳಲಿದೆ. ಪ್ರೊ. ಶೆಟ್ಟರ್ ಅವರ ಕಲ್ಪನೆಯ ಕೂಸಾದ ಬಳ್ಳಾರಿಯ ಪ್ರಾಗೈತಿಹಾಸಿಕ ವಸ್ತು ಸಂಗ್ರಹಾಲಯವು ಎಲ್ಲರೂ ಹೋಗಿ ನೋಡಬೇಕಾದ ಒಂದು ಅಭೂತಪೂರ್ವ ಸಂಗ್ರಹಾಲಯವಾಗಿದೆ.


