ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಮೃತ ಸೌಜನ್ಯ ಮನೆಯ ಸಮೀಪ ಬಿಗ್ ಬಾಸ್ನ ರಜತ್ ಅವರ ಸಂದರ್ಶನ ಮಾಡುತ್ತಿದ್ದ ನಾಲ್ಕು ಮಂದಿ ಯೂಟ್ಯೂಬ್ ಮಾಧ್ಯಮ ಪ್ರತಿನಿಧಿಗಳ ಮೇಲೆ ಧರ್ಮಸ್ಥಳದ ಕೆಲವು ಗೂಂಡಾಗಳು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಇಂದು ಸಂಜೆ ನಡೆದಿದೆ.
ಸೌಜನ್ಯ ಅವರ ನಿವಾಸದ ಪಾಂಗಳ ಕ್ರಾಸ್ ಬಳಿ ದಾಳಿ ನಡೆದಿದೆ. ಕುಡ್ಲ ರ್ಯಾಂಪೇಜ್ ನ ಯೂಟ್ಯೂಬರ್ ಆಗಿರುವ ಅಜಯ್ ಅಂಚನ್ ಅವರ ಜತೆಗೆ, ಯುನೈಟೆಡ್ ಮೀಡಿಯಾ ಪ್ರತಿನಿಧಿ ಅಭಿಷೇಕ್, ಸಂಚಾರಿ ಸ್ಟುಡಿಯೋದ ವಿಜಯ್ ಮತ್ತು ಕುಡ್ಲಾ ರ್ಯಾಂಪೇಜ್ ನ ಛಾಯಾಗ್ರಾಹಕರ ಮೇಲೆ ದಾಳಿ ಮಾಡಲಾಗಿದೆ. ಇವರ ಕ್ಯಾಮೆರಾವನ್ನು ನಾಶಗೊಳಿಸಿದ್ದಾರೆ. ಇವರಲ್ಲಿ ಒಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ:
ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರಜತ್ ಇಂದು ವಕೀಲರ ಜತೆ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ಸೌಜನ್ಯ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ರಜತ್ ಅವರ ಸಂದರ್ಶನ ಮಾಡಲು ಯೂಟ್ಯೂಬರ್ಗಳು ಆಗಮಿಸಿದ್ದರು.
ಸೌಜನ್ಯ ಮನೆಯಿಂದ ಹೊರಟಿದ್ದ ರಜತ್, ಪಾಂಗಳ ಕ್ರಾಸ್ ಸಮೀಪ ಸಂದರ್ಶನ ನೀಡುತ್ತಿದ್ದರು. ಇಲ್ಲಿಗೆ ಮೂರು ರಿಕ್ಷಾದಲ್ಲಿ ಸುಮಾರು 50 ಗೂಂಡಾಗಳ ಗುಂಪು ದಾವಿಸಿ ಧರ್ಮಸ್ಥಳದ ಹೆಸರನ್ನು ಹಾಳು ಮಾಡುತ್ತಿದ್ದೀರಿ. ನೀವು ಧರ್ಮಸ್ಥಳದ ಹೆಸರು ಕೆಡಿಸಲು ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದೀರಿ ಎಂದು ಆರೋಪಿಸಿ ಯೂಟ್ಯೂಬರ್ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕ್ಯಾಮರಾ ಹಾಗೂ ಮೈಕ್ ಗಳನ್ನು ಕಿತ್ತುಕೊಂಡು ಹೊಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಸ್ಥಳೀಯರು ಗಾಯಗೊಂಡಿರುವ ಯೂಟ್ಯೂಬರ್ಗಳನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಂದೋಬಸ್ತ್ ಕಲ್ಪಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.